Breaking: ಜೂನ್ 7ರ ನಂತರ ಹಂತಹಂತವಾಗಿ ಅನ್ಲಾಕ್; ಅಶ್ವತ್ಥ ನಾರಾಯಣ್
ಬೆಂಗಳೂರು, ಜೂನ್ 1: ರಾಜ್ಯದಲ್ಲಿ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ಜೂನ್ 7ರವರೆಗೂ ವಿಸ್ತರಿಸಲಾಗಿರುವ ಲಾಕ್ಡೌನ್ ಅನ್ನು ಇನ್ನಷ್ಟು ದಿನ ಮುಂದುವರೆಸುವ ಕುರಿತು ಚರ್ಚೆಗಳು ನಡೆಯುತ್ತಿವೆ. ವಿಪಕ್ಷಗಳು ಲಾಕ್ಡೌನ್ ಮುಂದುವರೆಸಬೇಕೆಂದು ರಾಜ್ಯ ಸರ್ಕಾರಕ್ಕೆ ಸಲಹೆ ನೀಡುತ್ತಿವೆ. ತಜ್ಞರು ಕೂಡ ಲಾಕ್ಡೌನ್ ಕುರಿತು ಸರ್ಕಾರಕ್ಕೆ ಕೆಲವು ಅಂಕಿ ಅಂಶಗಳ ಸಮೇತ ಮಾಹಿತಿ ನೀಡಿದ್ದಾರೆ.
ಈ ನಡುವೆ ಲಾಕ್ಡೌನ್ ಕುರಿತು ಜೂನ್ 5 ಅಥವಾ 6ರಂದು ಪರಿಸ್ಥಿತಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ. ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ ಅವರು ಮಾತನಾಡಿದ್ದು, "ಜೂನ್ 7ರ ನಂತರ ಲಾಕ್ ಡೌನ್ ಅನ್ನು ಅನ್ ಲಾಕ್ ಮಾಡೋದು ನಿಶ್ಚಿತ. ಆದರೆ ಒಮ್ಮೆಲೇ ಪೂರ್ಣ ಪ್ರಮಾಣದಲ್ಲಿ ಅನ್ ಲಾಕ್ ಮಾಡುವುದು ಸಾಧ್ಯವಿಲ್ಲ" ಎಂದು ಹೇಳಿಕೆ ನೀಡಿದ್ದಾರೆ.
ರಾಜ್ಯದಲ್ಲಿ ಸೋಂಕು ನಿರೀಕ್ಷಿತ ಮಟ್ಟದಲ್ಲಿ ನಿಯಂತ್ರಣಕ್ಕೆ ಬಾರದ ಕಾರಣ ಹಂತ ಹಂತವಾಗಿ ಅನ್ಲಾಕ್ ಮಾಡಬೇಕಾಗುತ್ತದೆ. ಹೇಗೆ ಮಾಡಬೇಕು ಎಂಬುದರ ಬಗ್ಗೆ ತಜ್ಞರ ಜತೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ.

ಇದೇ ಸಂದರ್ಭ ವಿಜಯೇಂದ್ರ ದೆಹಲಿ ಭೇಟಿ ಕುರಿತು ಪ್ರಸ್ತಾಪ ಮಾಡಿದ ಅವರು, "ದೆಹಲಿಗೆ ಅವರು ಹೋಗಿದ್ದಾರೋ ಗೊತ್ತಿಲ್ಲ. ಬಹುಷಃ ವೈಯಕ್ತಿಕ ಕಾರಣಕ್ಕೆ ಹೋಗಿರಬಹುದು" ಎಂದಷ್ಟೇ ಹೇಳಿದರು.
ರಾಜ್ಯದಲ್ಲಿ ಕೊರೊನಾ ಲಸಿಕೆ ಕುರಿತು ಮಾತು ಹಂಚಿಕೊಂಡ ಅವರು, "ವಿದೇಶಿ ವಿದ್ಯಾರ್ಥಿಗಳಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಅವರಿಗಾಗಿ ಪ್ರತ್ಯೇಕ ವ್ಯಾಕ್ಸಿನ್ ಕೇಂದ್ರವನ್ನು ತೆರೆಯಲಾಗಿದೆ. ಸದ್ಯಕ್ಕೆ ಕೋವಿಶೀಲ್ಡ್ ಲಸಿಕೆ ನೀಡಲಾಗುತ್ತದೆ. ಕೋವ್ಯಾಕ್ಸಿನ್ಗೆ ವಿದೇಶಗಳಲ್ಲಿ ನಿಷೇಧ ಇರುವ ಬಗ್ಗೆ ನಾವೇನೂ ಮಾಡಲು ಸಾಧ್ಯವಿಲ್ಲ. ಈ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ" ಎಂದು ಹೇಳಿದರು.
ರಾಜ್ಯದಲ್ಲಿ ಬ್ಲ್ಯಾಕ್ ಫಂಗಸ್ ಔಷಧ ಕೊರತೆಯಿದೆ ಎಂಬುದನ್ನು ಒಪ್ಪಿಕೊಂಡ ಅವರು, ಔಷಧ ಕೊರತೆ ಇರುವುದು ನಿಜ. ಅದಕ್ಕೆ ಪರ್ಯಾಯ ಔಷಧಗಳೂ ಇವೆ. ಅವುಗಳನ್ನು ಬಳಸಿ ಜೀವ ರಕ್ಷಣೆ ಮಾಡಬಹುದು. ಈ ಕುರಿತು ಚಿಂತನೆ ನಡೆಸಲಾಗುತ್ತಿದೆ ಎಂದು ತಿಳಿಸಿದರು












Click it and Unblock the Notifications