Darshan Bail: ದರ್ಶನ್ಗೆ ಜಾಮೀನು ಸಿಗುತ್ತೆ! ಭವಿಷ್ಯ ನುಡಿದ ದೇವಿ ಆರಾಧಕ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ಎ2 ಆರೋಪಿ ನಟ ದರ್ಶನ್ ತೂಗುದೀಪ, ಸದ್ಯ ಬಳ್ಳಾರಿ ಜೈಲಿನಲ್ಲಿದ್ದಾರೆ. ಈಗಾಗಲೇ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು ಈಗಾಗಲೇ ಎರಡು ಬಾರಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಸೆಪ್ಟೆಂಬರ್ 30 ರಂದು ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ದರ್ಶನ್ಗೆ ಜಾಮೀನು ಸಿಕ್ಕಿ ಹೊರಬರಲಿ ಎಂದು ಕಾಯುತ್ತಿರುವ ಅಭಿಮಾನಿಗಳಿಗೆ ಜ್ಯೋತಿಷಿಯೊಬ್ಬರು ಸಿಹಿ ಸುದ್ದಿ ಕೊಟ್ಟಿದ್ದಾರೆ.
ತುಮಕೂರು ತಾಲೂಕಿನ ಚಿನಗ ಗ್ರಾಮದಲ್ಲಿರುವ ಮೂಕಾಂಬಿಕಾ ದೇವಸ್ಥಾನದ ಅರ್ಚಕರಾದ ಜ್ಯೋತಿಷಿ ಡಾ. ಲಕ್ಷ್ಮೀಕಾಂತ ಆಚಾರ್ಯ ಸ್ಫೋಟಕ ಹೇಳಿಕೆ ನೀಡಿದ್ದು, ನಟ ದರ್ಶನ್ಗೆ ಜಾಮೀನು ಸಿಗಲಿದ್ದು,ಅಶ್ವಿಜ ಮಾಸದ ಕೊನೆ ಮತ್ತು ಕಾರ್ತಿಕ ಮಾಸದಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ಹೇಳಿದ್ದಾರೆ. ಅಕ್ಟೋಬರ್ 17 ರಿಂದ ಕಾರ್ತಿಕ ಮಾಸ ಆರಂಭವಾಗಲಿದ್ದು, ನವೆಂಬರ್ 15ಕ್ಕೆ ಕೊನೆಯಾಗಲಿದೆ.

ವೈರಲ್ ಆಗಿರುವ ವಿಡಿಯೋದಲ್ಲಿ ಅವರು ದರ್ಶನ್ಗೆ ಜಾಮೀನು ಸಿಗುವ ಮೂಕಾಂಬಿಕಾ ದೇವಿ ಬಲಗಡೆ ಹೂವು ಕೊಟ್ಟಿದೆ ಎಂದು ಹೇಳಿದ್ದಾರೆ. ದರ್ಶನ್ ಕಾರ್ತಿಕ ಮಾಸದ ಅಂತ್ಯದೊಳಗೆ ಬಿಡುಗಡೆಯಾಗಲಿದ್ದು, ಬಳಿಕ ಅವರ ವರ್ತನೆಯಲ್ಲಿ ಬಹಳಷ್ಟು ಬದಲಾವಣೆಯಾಗಲಿದೆ ಎಂದು ಕೂಡ ತಿಳಿಸಿದ್ದಾರೆ.
ರಾಜಕೀಯದಲ್ಲೂ ಯಶಸ್ಸು
2027ರಲ್ಲಿ ಶನಿ ದಶಾಬುಕ್ತಿ ಆರಂಭವಾಗಲಿದ್ದು ನಟ ದರ್ಶನ್ ಅವರ ರಾಜಕೀಯ ಪ್ರವೇಶಿಸುವ ಸಾಧ್ಯತೆ ಕೂಡ ಇದ್ದು, ಅಲ್ಲೂ ಕೂಡ ಯಶಸ್ಸು ಗಳಿಸುತ್ತಾರೆ ಎಂದು ಹೇಳಿದ್ದಾರೆ. ದರ್ಶನ್ಗೆ ಒಳ್ಳೆಯ ದಿನಗಳು ಬಂದೇ ಬರುತ್ತವೆ, ಅದಕ್ಕಾಗಿ ಅವರು ಸ್ವಲ್ಪ ಸಮಯ ಕಾಯಬೇಕಿದೆ ಎಂದು ಹೇಳಿದರು.
ಅಭಿಮಾನಿಗಳಿಗೆ ದೀಪಾವಳಿ?
ಈಗಾಗಲೇ ನಟ ದರ್ಶನ್ ಪರ ವಕೀಲರು ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಸೋಮವಾರ ಅರ್ಜಿ ವಿಚಾರಣೆ ನಡೆಯಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಪಾತ್ರವಿಲ್ಲ ಎಂದು ವಾದಿಸಲು ವಕೀಲರು ಸಜ್ಜಾಗಿದ್ದಾರೆ. ಚಾರ್ಜ್ಶೀಟ್ ಅನ್ನು ಸಂಪೂರ್ಣವಾಗಿ ಅಧ್ಯಯನ ಮಾಡಿದ್ದು, ಈಗಾಗಲೇ ವಕೀಲರು ಯಾವ ಅಂಶಗಳನ್ನು ಮುಂದಿಟ್ಟುಕೊಂಡು ವಾದ ಮಾಡಬೇಕೆಂದು ತಯಾರಿ ಮಾಡಿಕೊಂಡಿದ್ದಾರೆ.
ಬಳ್ಳಾರಿ ಜೈಲಿನಲ್ಲಿ ದರ್ಶನ್ರನ್ನು ಭೇಟಿ ಮಾಡಿದ್ದ ವಕೀಲರು, 57ನೇ ಸೆಷನ್ಸ್ ಕೋರ್ಟ್ನಲ್ಲೇ ಜಾಮೀನು ಸಿಗುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳು ಈಗಾಗಲೇ ದರ್ಶನ್ ಬಿಡುಗಡೆ ಯಾವಾಗ ಎಂದು ಕಾಯುತ್ತಿದ್ದಾರೆ.
ಈಗ ದೇವಿ ಆರಾಧಕ ಡಾ. ಲಕ್ಷ್ಮೀಕಾಂತ ಆಚಾರ್ಯ ದರ್ಶನ್ ಬಿಡುಗಡೆಯಾಗುತ್ತಾರೆ ಎಂದು ಹೇಳಿರುವುದು ಅಭಿಮಾನಿಗಳ ನಂಬಿಕೆಗೆ ಮತ್ತಷ್ಟು ಬಲ ಬಂದಿದೆ. ನೆಚ್ಚಿನ ನಟ ಜೈಲಿನಿಂದ ಬಿಡುಗಡೆಯಾಗುವುದನ್ನು ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ದರ್ಶನ್ ಬಂಧನವಾದಾಗ ಪತ್ನಿ ವಿಜಯಲಕ್ಷ್ಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಹೋಮ ಮಾಡಿಸಿದ್ದರು.












Click it and Unblock the Notifications