ಸಿಎಂ ಪಟ್ಟ ಮೇಲ್ವರ್ಗದವರಿಗೆ ಸೀಮಿತವಲ್ಲ: ರೋಷನ್ ಬೇಗ್
ಬೆಂಗಳೂರು, ಜ. 8: ಸಿದ್ದರಾಮಯ್ಯ ಸಂಪುಟದಲ್ಲಿ ಎಲ್ಲ ಸರಿಯಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಅತ್ತ ಕಾಗೋಡು ತಿಮ್ಮಪ್ಪ ಸದಾ ಸರ್ಕಾರದ ವಿರುದ್ಧವೇ ವಾಗ್ದಾಳಿ ಮಾಡುತ್ತಿದ್ದರೆ, ಈಗ ಸಚಿವ ರೋಷನ್ ಬೇಗ್ ನೀಡಿರುವ ಹೇಳಿಕೆಯೊಂದು ಗೊಂದಲಕ್ಕೆ ಕಾರಣವಾಗಿದೆ.
'ದಲಿತರೊಬ್ಬರು ಕರ್ನಾಟಕದ ಮುಖ್ಯಮಂತ್ರಿಯಾಗಬೇಕು' ಎಂದು ವಾರ್ತಾ ಸಚಿವ ರೋಷನ್ ಬೇಗ್ ಬೆಂಗಳೂರಿನಲ್ಲಿ ಗುರುವಾರ ನಡೆದ ದಲಿತ ಸಂವೇದನೆ ಮತ್ತು ಮಾಧ್ಯಮ ಕಾರ್ಯಾಗಾರದಲ್ಲಿ ಹೇಳಿದ್ದಾರೆ. ದಲಿತರೊಬ್ಬರು ದೇಶ ಪ್ರಧಾನಿಯೂ ಆಗಬೇಕು ಎಂದು ಬೇಗ್ ಹೇಳಿದರು.[ಸಂಚಲನ ಮೂಡಿಸಿದ ಸಚಿವ ರೋಷನ್ ಬೇಗ್ ಹೇಳಿಕೆ]

ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಇರುವ ಅಧಿಕಾರಿಗಳು ದಲಿತರಲ್ಲ. ದೇಶದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ದಲಿತರಿಗೆ ಸರಿಯಾದ ಸ್ಥಾನ ದೊರೆತಿಲ್ಲ.
ದಲಿತರನ್ನು ಹಿಂದುಗಳೆಂದು ಒಪ್ಪಿಕೊಳ್ಳಲು ಕೆಲ ಅಡೆತಡೆ ಹಾಕಲಾಗುತ್ತಿದೆ. ಮಾಧ್ಯಮಗಳಲ್ಲಿಯೂ ಇವರ ಸಂಖ್ಯೆ ಕಡಿಮೆ ಎಂದು ಹೇಳಿದರು.
ಶೌಚಾಲಯ ಶುಚಿಗೊಳಿಸುವ ಕಾರ್ಯದಲ್ಲಿ ಪ್ರಮುಖ ಜಾತಿಯವರು ಕೆಲಸ ಮಾಡುವುದಿಲ್ಲ. ಮ್ಯಾನ್ವೋಲ್ನಲ್ಲಿ ವಿಷ ಗಾಳಿ ಸೇವಿಸಿ ಮೃತಪಟ್ಟ ದಲಿತನ ಸುದ್ದಿಗೆ ಮಾಧ್ಯಮದಲ್ಲಿ ಪ್ರಾಧಾನ್ಯತೆ ಸಿಗುವುದಿಲ್ಲ. ದಲಿತ ಪತ್ರಕರ್ತರಿಗೆ ನೆರವು ನೀಡಲು ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ರೊಂದಿಗೆ ಚರ್ಚೆ ಮಾಡುತ್ತೇನೆ ಎಂದು ತಿಳಿಸಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಲ್.ಹನುಮಂತಯ್ಯ, ವಾರ್ತಾ ಹಾಗೂ ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್.ವಿಶುಕುಮಾರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪೊನ್ನಪ್ಪ, ಎಸ್ಸಿ, ಎಸ್ಟಿ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ ಚಲುವರಾಜು, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎನ್.ರಾಜು, ಮಾಧ್ಯಮ ಅಕಾಡೆಮಿ ಕಾರ್ಯದರ್ಶಿ ಶಂಕರಪ್ಪ ಹಾಜರಿದ್ದರು.












Click it and Unblock the Notifications