ವಿದ್ಯುತ್ ಹಾಗೂ ಸಾರಿಗೆ ದರಗಳ ಏರಿಕೆ: ಸಿಪಿಐಎಂ ಖಂಡನೆ
ಬೆಂಗಳೂರು, ನ.5: ವಿಧಾನ ಪರಿಷತ್ ಚುನಾವಣೆ ಹಾಗೂ ವಿಧಾನಸಭಾ ಉಪ ಚುನಾವಣೆ ಮುಕ್ತಾಯವಾಗುತ್ತಿದ್ದಂತೆ, ಕರ್ನಾಟಕ ಸರಕಾರ ತನ್ನ ಕಡು ಜನ ವಿರೋಧಿ ನೀತಿಯನ್ನು ಮತ್ತೊಮ್ಮೆ ಈ ಮೂಲಕ ಬಯಲುಗೊಳಿಸಿದೆ. ಜನತೆ ಕೋವಿಡ್ 19 ರ ಸಂಕಷ್ಟದಲ್ಲಿರುವಾಗ ಮತ್ತು ಉದ್ಯೋಗದ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿರುವಾಗ, ಎರಡು ಚುನಾವಣೆಗಳ ಕಡೆ ಗಮನ ಹರಿಸಿರುವಾಗ, ಅವರಿಗೆ ನೆರವಾಗುವ ಬದಲು ಈ ದಿನಗಳಲ್ಲಿಯೇ ಕೆಎಸ್ಆರ್ಟಿಸಿ ಬಸ್ ದರಗಳನ್ನು ಶೇ 10 ಕ್ಕೂ ಅಧಿಕವಾಗಿ ಒಳಗಿಂದೊಳಗೆ ಏರಿಸಿದೆ. ಬಿಎಂಟಿಸಿ ಖಾಸಗೀಕರಣಕ್ಕೆ ಕುತಂತ್ರ ನಡೆಸಿದೆ ಎಂದು ಸಿಪಿಐಎಂ ಆರೋಪಿಸಿದೆ.
ಅದೇ ರೀತಿ, ರೈತರ ತೀವ್ರ ವಿರೋಧದ ನಡುವೆಯೂ, ಭೂ ಸುಧಾರಣೆ ಎರಡನೇ ತಿದ್ದುಪಡಿ ಸುಗ್ರೀವಾಜ್ಞೆ - 2020 ನ್ನು ಪ್ರಕಟಿಸಿದೆ. ನೆನ್ನೆ ದಿನ ನವೆಂಬರ್ ನಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರಗಳನ್ನು ಪ್ರತಿ ಯುನಿಟ್ಗೆ 40 ಪೈಸೆಯಂತೆ ಏರಿಸಲು ಕ್ರಮ ವಹಿಸಿದೆ. ಇದೆಲ್ಲವೂ ಸಂಕಷ್ಟದಲ್ಲಿರುವ ಜನತೆಗೆ ಗಾಯದ ಮೇಲೆ ಮತ್ತೆ ಮತ್ತೆ ಬರೆ ಎಳೆದಂತಹ ಪರಿಣಾಮ ಉಂಟು ಮಾಡಿದೆ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ದ ಕರ್ನಾಟಕ ರಾಜ್ಯ ಸಮಿತಿಯು ರಾಜ್ಯ ಸರಕಾರದ ಜನತೆಯ ಮೇಲಿನ ಕ್ರೂರ ಧಾಳಿ ಹಾಗೂ ಈ ಜನ ವಿರೋಧಿ ಕ್ರಮಗಳನ್ನು ಬಲವಾಗಿ ಖಂಡಿಸುತ್ತದೆ ಮತ್ತು ಕೂಡಲೇ ಅವುಗಳನ್ನು ವಾಪಾಸು ಪಡೆಯುವಂತೆ ಒತ್ತಾಯಿಸುತ್ತದೆ.

ವಿದ್ಯುತ್ ದರಗಳ ಎರಿಕೆಯ ಜೊತೆ ವಿದ್ಯುತ್ ಕಂಪನಿಗಳು ತಿಂಗಳಿಗೆ ಸರಿಯಾಗಿ ಬಿಲ್ ನೀಡದೇ ದುರುದ್ದೇಶದಿಂದಲೇ ಕೆಲ ದಿನಗಳ ಕಾಲ ತಡವಾಗಿ ಬಿಲ್ ಗಳನ್ನು ನೀಡುವ ಮೂಲಕ ಸ್ಲಾಬ್ ದರ ಹೆಚ್ಚಳಗೊಳ್ಳುವಂತೆ ಮಾಡಿ ಹೆಚ್ಚುವರಿಯಾಗಿ ವಸೂಲಿ ಮಾಡಲಾಗುತ್ತಿರುವುದು ಬೆಳಕಿಗೆ ಬಂದಿದೆ.
ಅದೇ ರೀತಿ, ಕಡಿಮೆ ಬೆಲೆಯ ವಿದ್ಯುತ್ ಉತ್ಪಾದಿಸುವ ಕೆಪಿಸಿಎಲ್ ಸಾರ್ವಜನಿಕ ಸಂಸ್ಥೆಯ ಉತ್ಪಾದನೆಯನ್ನು ಆಗಾಗ್ಗೆ ನಿಲ್ಲಿಸಿ, ಭ್ರಷ್ಟಾಚಾರದ ಮೂಲಕ ದುಬಾರಿ ಬೆಲೆಯ ಖಾಸಗೀ ಕಂಪನಿಗಳ ವಿದ್ಯುತ್ ಖರೀದಿಸಿ ಗ್ರಾಹಕರ ಮೇಲೆ ಹೊರೆಯನ್ನು ಹೇರಲಾಗುತ್ತಿರುವುದು ಅಕ್ಷಮ್ಯವಾಗಿದೆ. ವಿದ್ಯುತ್ ಸರಬರಾಜನಲ್ಲಿರುವ ದೋಷಗಳನ್ನು ಸರಿ ಪಡಿಸ ಬೇಕಾಗಿದೆ. ಕೆಲವು ದೊಡ್ಡ ಕಂಪನಿಗಳ ವಿದ್ಯುತ್ ಕಳ್ಳತನವನ್ನು ತಡೆಯ ಬೇಕಾಗಿದೆ. ಈ ಕುರಿತು ಅಗತ್ಯ ಕ್ರಮವಹಿಸಿ ಗ್ರಾಹಕರ ಲೂಟಿಯನ್ನು ತಡೆಯಲು ಸಿಪಿಐಎಂ ರಾಜ್ಯ ಸರಕಾರವನ್ನು ಬಲವಾಗಿ ಒತ್ತಾಯಿಸುತ್ತಿದೆ ಎಂದು ಸಿಪಿಐಎಂ ಕಾರ್ಯದರ್ಶಿ ಯು. ಬಸವರಾಜ ಹೇಳಿದರು.












Click it and Unblock the Notifications