ಯೋಗೇಶ್ವರ್, ಲಕ್ಷ್ಮೀನಾರಾಯಣ ಕಾಂಗ್ರೆಸ್ ಸೇರ್ತಾರೆ
ಬೆಂಗಳೂರು, ಮಾ. 17 : ಚನ್ನಪಟ್ಟಣ ಶಾಸಕ ಸಿಪಿ ಯೊಗೇಶ್ವರ್ ಮಂಗಳವಾರ ಕಾಂಗ್ರೆಸ್ ಸೇರಲಿದ್ದಾರೆ. ಆದರೆ, ಎಂಡಿ ಲಕ್ಷ್ಮೀನಾರಾಯಣ ಸೇರ್ಪಡೆ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.
ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಪರಮೇಶ್ವರ್, ಚನ್ನಪಟ್ಟಣ ಶಾಸಕ ಸಿಪಿ ಯೊಗೇಶ್ವರ್ ಕಾಂಗ್ರೆಸ್ ಸೇರಲು ಬಯಸಿದ್ದಾರೆ. ಹೈ ಕಮಾಂಡ್ ನಾಯಕರು ಇದಕ್ಕೆ ಒಪ್ಪಿಗೆ ನೀಡಿದ್ದು, ಮಾ.18ರ ಮಂಗಳವಾರ ಅವರ ಪಕ್ಷ ಸೇರ್ಪಡೆಯಾಗಲಿದ್ದಾರೆ ಎಂದರು. [ಕೈಪಾಳಯಕ್ಕೆ ಜಿಗಿದ ಯೋಗೇಶ್ವರ್]
ಕೆಜೆಪಿ ಮುಖಂಡ ಎಂಡಿ ಲಕ್ಷ್ಮೀನಾರಾಯಣ ಅವರು ಪಕ್ಷ ಸೇರುವ ಇಚ್ಛೆ ವ್ಯಕ್ತಪಡಿಸಿದ್ದು, ನಾಯಕರ ಜೊತೆ ಚರ್ಚಿಸಿದ ಬಳಿಕ ಈ ಕುರಿತು ಅಂತಿಮ ನಿರ್ಧಾರ ಪ್ರಕಟಿಸಲಾಗುವುದು. ಶೀಘ್ರವೇ ಅವರನ್ನು ಪಕ್ಷಕ್ಕೆ ಬರಮಾಡಿಕೊಳ್ಳುವುದಾಗಿದ ಪರಮೇಶ್ವರ್ ತಿಳಿಸಿದರು. [ಲಕ್ಷ್ಮೀನಾರಾಯಣ ಕಾಂಗ್ರೆಸ್ ನತ್ತ]
ಬಸವರಾಜ್ ಬಗ್ಗೆ ವರದಿ : ತುಮಕೂರು ಕ್ಷೇತ್ರದ ಸಂಸದ ಜಿಎಸ್ ಬಸವರಾಜು ಅವರು ಕಾಂಗ್ರೆಸ್ ಸೇರುವ ಬಗ್ಗೆ ಹೈಕಮಾಂಡ್ ಗೆ ವರದಿ ಸಲ್ಲಿಸಲಾಗಿದೆ. ವರದಿ ಬಂದ ನಂತರ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಗುವುದು ಎಂದು ಹೇಳಿದರು. ಈಗಾಗಲೇ ತುಮಕೂರು ಕ್ಷೇತ್ರದಿಂದ ಬಿಜೆಪಿ ಬಸವರಾಜು ಅವರಿಗೆ ಟಿಕೆಟ್ ನೀಡಿದೆ. [ತುಮಕೂರಿಗೆ ಬಸವರಾಜು ಅಭ್ಯರ್ಥಿ]
ಎರಡು ಹಂತಗಳಲ್ಲಿ ಪ್ರಚಾರ : ಸಿಎಂ ಸಿದ್ದರಾಮಯ್ಯ ಮತ್ತು ನಾನು ರಾಜ್ಯದಲ್ಲಿ ಎರಡು ಹಂತಗಳಲ್ಲಿ ಪ್ರಚಾರ ಕಾರ್ಯ ಕೈಗೊಳ್ಳಲಿದ್ದೇವೆ. ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಪ್ರಚಾರ ನಡೆಸಲು ರಾಜ್ಯಕ್ಕೆ ಆಗಮಿಸಲಿದ್ದಾರೆ. ಅದರ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದರು.
ರಿಜ್ವಾನ್ ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ : ಬೆಂಗಳೂರು ಸೆಂಟ್ರಲ್ ಕ್ಷೇತ್ರದ ಟಿಕೆಟ್ ದೊರೆಯಲಿಲ್ಲ ಎಂದು ಹಿರಿಯ ನಾಯಕ ಜಾಫರ್ ಷರೀಫ್ ಅಸಮಾಧಾನಗೊಂಡಿರುವುದು ನಿಜ. ಆದರೆ, ಕ್ಷೇತ್ರದ ಅಭ್ಯರ್ಥಿಯನ್ನು ಬದಲಾವಣೆ ಮಾಡುವುದಿಲ್ಲ. ರಿಜ್ವಾನ್ ಅರ್ಷದ್ ಅವರೇ ಅಭ್ಯರ್ಥಿ ಎಂದು ಪರಮೇಶ್ವರ್ ಸ್ಪಷ್ಟಪಡಿಸಿದರು. [ಜೆಡಿಎಸ್ ನತ್ತ ಷರೀಫ್]
ಜಾಫರ್ ಷರೀಫ್ ಅವರು ಜೆಡಿಎಸ್ ಪಕ್ಷ ಸೇರಿ, ಮೈಸೂರಿನಿಂದ ಚುನಾವಣಾ ಕಣಕ್ಕೆ ಇಳಿಯಲಿದ್ದಾರೆ ಎಂಬ ಸುದ್ದಿಗಳಲ್ಲಿ ಸತ್ಯಾಂಶವಿಲ್ಲ. ಷರೀಫ್ ಅವರನ್ನು ಭೇಟಿ ಮಾಡಿ, ಪಕ್ಷ ತೊರೆಯದಂತೆ ಮನವೊಲಿಸಲಾಗಿದೆ. ಅವರು, ಕಾಂಗ್ರೆಸ್ ಪಕ್ಷದಲ್ಲಿಯೇ ಇರುತ್ತಾರೆ ಎಂದು ಪರಮೇಶ್ವರ್ ತಿಳಿಸಿದರು.
ಎಚ್.ಡಿ.ದೇವೇಗೌಡ ಪ್ರತಿಕ್ರಿಯೆ : ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಪತ್ರಿಕಾಗೋಷ್ಠಿ ಬಳಿಕ ಬೆಂಗಳೂರಿನಲ್ಲಿ ಮಾತನಾಡಿದ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ನಮ್ಮ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ. ಶೀಘ್ರವೇ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು ಎಂದು ಹೇಳುವ ಮೂಲಕ ಅಚ್ಚರಿ ಮೂಡಿಸಿದರು. ಇವುಗಳ ನಡುವೆಯೇ ಇಂದು ಬೆಂಬಲಿಗರ ಸಭೆ ನಡೆಸಿದ ಜಾಫರ್ ಷರೀಫ್ ತಮ್ಮ ನಿರ್ಧಾರವನ್ನು ಪ್ರಕಟಿಸದೆ ಗೌಪ್ಯವಾಗಿಟ್ಟಿದ್ದಾರೆ.