ಲಾಕ್ಡೌನ್: ಇನ್ಮುಂದೆ ಬೀದಿಗೆ ಬಂದರೆ "ಲಾಠಿ ಬದಲು ಕೇಸ್' ಬೀಳುತ್ತೆ ಹುಷಾರ್!
ಬೆಂಗಳೂರು, ಏ. 07: ಇಡೀ ದೇಶದ ಜನತೆ ಕೊರೊನಾ ವೈರಸ್ ಆತಂಕದಲ್ಲಿ ಲಾಕ್ಡೌನ್ ಪಾಲನೆ ಮಾಡುತ್ತಿದ್ದಾರೆ. ಆದರೆ ಕೆಲವೊಂದಿಷ್ಟು ತಿಳಿವಳಿಕೆ ಇಲ್ಲದ ಕಿಡಿಗೇಡಿಗಳು ಮಾತ್ರ ಲಾಕ್ಡೌನ್ ಪಾಲನೆಗೆ ಮಾಡದೇ ಆಟಾಟೋಪ ಮುಂದುವರೆಸಿದ್ದಾರೆ. ಈ ವರೆಗೆ ಪೊಲೀಸರು ಒಂದೆರಡು ಏಟು ಹಾಕಿ ಲಾಕ್ಡೌನ್ ಮುರಿದವರನ್ನು ಕಳಿಸುತ್ತಿದ್ದರು. ಇದೀಗ ರಾಜ್ಯ ಸರ್ಕಾರ ಮತ್ತಷ್ಟು ಕಠಿಣಕ್ರಮಗಳನ್ನು ತೆಗೆದುಕೊಂಡಿದ್ದು, ಇಂದಿನಿಂದ ಅನಗತ್ಯವಾಗಿ ಬೀದಿಗೆ ಇಳಿಯುವ ಜನರು ಮೊದಲು ಮತ್ತೊಮ್ಮೆ ಯೋಚಿಸಬೇಕಾಗಿದೆ.
Recommended Video
ಕೊರೊನಾ ವೈರಸ್ ಹರಡದಂತೆ ತಡೆಯಲು ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆ ಗಡಿ ಕಾಯುವ ಸೈನಿಕರಂತೆ ಜನರ ಆರೋಗ್ಯ ಕಾಪಾಡಲು ಪ್ರಯತ್ನಿಸುತ್ತಿದ್ದಾರೆ. ಕೋವಿಡ್ 19 ಒಂದು ಸಲ ಸಮುದಾಯಕ್ಕೆ ಹರಡಿದರೆ ವೈರಸ್ ಕಂಟ್ರೋಲ್ ಮಾಡುವುದು ಕಷ್ಟ. ಕೊರೊನಾ ವೈರಸ್ನ್ನು ನಿರ್ಲಕ್ಷ್ಯ ಮಾಡಿದ್ದಕ್ಕೆ ಈಗಾಗಲೇ ಮುಂದುವರೆದ ರಾಷ್ಟ್ರಗಳು ಅನುಭವಿಸುತ್ತಿರುವ ಯಾತನೆಯನ್ನು ಗಮನಿಸಿ ರಾಜ್ಯ ಸರ್ಕಾರ ಹೊಸ ಕಾಯ್ದೆ ಜಾರಿಮಾಡಿದೆ.
ಲಾಠಿ ಏಟಿಗೂ ಜಗ್ಗದ ಜನರಿಗೆ ವಿಪತ್ತು ಆಪತ್ತು!
ಕೊರೊನಾ ವೈರಸ್ ಹರಡದಂತೆ ತಡೆಯಲು ಜಾರಿಗೆ ತಂದಿರುವ ಲಾಕ್ಡೌನ್ ನಿಯಮಗಳನ್ನು ಕೆಲವರು ಉಲ್ಲಂಘಿಸುವುದು ಮುಂದುವರೆದಿದೆ. ಈ ವರೆಗೆ ಪೊಲೀಸ್ ಬಲಪ್ರಯೋಗ ಬಳಸಿ ಜನರು ಬೀದಿಗೆ ಬರದಂತೆ ತಡೆಯಲಾಗುತ್ತಿತ್ತು. ಆದರೆ ಪೊಲೀಸರು ಕೊಡುವ ಲಾಠಿ ಏಟನ್ನು ಚಿತ್ರಿಸಿ ಪೊಲೀಸರೆ ತಪ್ಪು ಮಾಡುತ್ತಿದ್ದಾರೆ ಎಂಬಂತೆ ಬಿಂಬಿಸುವ ಪ್ರಯತ್ನಗಳು ನಡೆದಿದ್ದವು. ಇದೀಗ ಲಾಠಿ ಏಟಿನ ಬದಲಿಗೆ ಹೊಸ ಏಟನ್ನು ಕೊಡಲು ರಾಜ್ಯ ಸರ್ಕಾರ ಮುಂದಾಗಿದೆ. ಅನಗತ್ಯವಾಗಿ ಬೀದಿಗೆ ಬಂದು ಜನರಲ್ಲಿ ಭಯವನ್ನುಂಟು ಮಾಡುವವರ ಮೇಲೆ ವಿಶೇಷ ಪ್ರಕರಣ ದಾಖಲಾಗಲಿದೆ.
ಲಾಕ್ಡೌನ್ ವಿಸ್ತರಣೆ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಚಿಂತನೆ!
ವಿಪತ್ತು ನಿರ್ವಹಣಾ ಕಾಯ್ದೆ 2005ರಡಿ ಪ್ರಕರಣ ದಾಖಲು
ಲಾಕ್ಡೌನ್ ಮಧ್ಯೆ ಅನಗತ್ಯವಾಗಿ ಬೀದಿಗೆ ಬರುವ ಜನರ ಮೇಲೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅನ್ವಯ ಪ್ರಕರಣ ದಾಖಲಿಸಲು ರಾಜ್ಯ ಕಂದಾಯ ಇಲಾಖೆಯ ಜಂಟಿ ಕಾರ್ಯದರ್ಶಿ ಆದೇಶ ಮಾಡಿದ್ದಾರೆ. ವಿಪತ್ತು ನಿರ್ವಹಣಾ ಕಾಯ್ದೆಯ ಸೆಕ್ಷನ್ 51, 52, 53, 54 ಹಾಗೂ 57 ಪ್ರಕಾರ ಪ್ರಕರಣ ದಾಖಲಿಸಲು ಮುಂದಿನ ಆದೇಶ ಮಾಡುವವರೆಗೆ ರಾಜ್ಯ ಪೊಲೀಸ್ ಇಲಾಖೆಗೆ ರಾಜ್ಯ ಸರ್ಕಾರ ಅಧಿಕಾರ ಕೊಟ್ಟಿದೆ.
ಪ್ರಕರಣ ದಾಖಲಾದರೆ ಶಿಕ್ಷಾರ್ಹ ಅಪರಾಧ
ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಉಪಾಧ್ಯಕ್ಷ, ಕಂದಾಯ ಸಚಿವ ಆರ್. ಅಶೋಕ್ ಸೂಚನೆ ಕೊಟ್ಟಿದ್ದಾರೆ. ಹೀಗಾಗಿ ವಿಪತ್ತು ನಿರ್ವಹಣಾ ಕಾಯ್ದೆ ಉಲ್ಲಂಘನೆ ಶಿಕ್ಷಾರ್ಹ ಅಪರಾಧ. ಕೋವಿಡ್ 19 ಸಂಕಷ್ಟದ ಸಂದರ್ಭದಲ್ಲಿ ಸರ್ಕಾರದ ಆದೇಶ ಉಲ್ಲಂಘನೆ ಮಾಡಿದರೆ ಸೆಕ್ಷನ್ 51ರ ಪ್ರಕಾರ ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಯನ್ನುಂಟು ಮಾಡಿ ಜೀವಹಾನಿಗೆ ಕಾರಣವಾಗುವಂತಹ ಕೃತ್ಯಕ್ಕೆ ಕಾರಣವಾದರೆ ಎರಡು ವರ್ಷಗಳ ಕಾರಗೃಹ ಶಿಕ್ಷೆ, ಸೆಕ್ಷನ್ 52ರ ಪ್ರಕಾರ, ಸಂಕಷ್ಟದ ಸಂದರ್ಭದಲ್ಲಿ ಸುಳ್ಳು ಮಾಹಿತಿ ಕೊಟ್ಟು ಯಾವುದೇ ಸೌಲಭ್ಯ, ಸೌಕರ್ಯ ಅಥವಾ ವಿನಾಯತಿ ಪಡೆಯುವುದು ಶಿಕ್ಷಾರ್ಹ ಅಪರಾಧ, ಸೆಕ್ಷನ್ 53ರ ಪ್ರಕಾರ ವಿಪತ್ತಿನ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಕಾಯ್ದಿರಿಸಿ ಆಹಾರ, ಇತರ ವಸ್ತುಗಳನ್ನು ಸುಳ್ಳು ಮಾಹಿತಿ ನೀಡಿ ಪಡೆಯವುದು ಕೂಡ ಶಿಕ್ಷಾರ್ಹ ಅಪರಾಧ, ಇನ್ನು ಸೆಕ್ಷನ್ 54 ಹಾಗೂ 57ರ ಪ್ರಕಾರ ಯಾವುದೇ ರೀತಿಯ ವದಂತಿ, ಸುಳ್ಳು ಸುದ್ದಿ ಹರಡುವುದು ಕೂಡ ಶಿಕ್ಷಾರ್ಹ ಅಪರಾಧ.
'ಕೊರೊನಾ ಎಂದು ಕೋಮುಭಾವನೆ ಕೆರಳಿಸಿದರೆ ಸರಿ ಇರುವುದಿಲ್ಲ'
ಏಪ್ರಿಲ್ 6 ರಿಂದ ಜಾರಿಯಾಗಿದೆ ಕಾನೂನು
ಏಪ್ರಿಲ್ 6 ರಿಂದಲೇ ವಿಪತ್ತು ನಿರ್ವಹಣಾ ಕಾಯ್ದೆ ಉಪಯೋಗಿಸಿ ಪ್ರಕರಣ ದಾಖಲಿಸಲು ಪೊಲೀಸರಿಗೆ ಅಧಿಕಾರ ಕೊಡಲಾಗಿದೆ. ಹೀಗಾಗಿ ವಿಪತ್ತು ನಿರ್ವಹಣಾ ಕಾಯ್ದೆಯಡಿ ಪ್ರಕರಣ ದಾಖಲಾದರೆ ಸುಲಭವಾಗಿ ಜಾಮೀನು ಸಿಗುವುದು ದುರ್ಲಭ. ಆದರಿಂದ ಜನರು ಅನಗತ್ಯವಾಗಿ ಮನೆಯಿಂದ ಹೊರಗೆ ಬಂದು ತಮಗೂ, ಸರ್ಕಾರಕ್ಕೂ ವಿಪತ್ತು ಬರುವಂತೆ ಮಾಡುವುದು ಬೇಡ ಎಂದು ಕಂದಾಯ ಸಚಿವ ಆರ್. ಅಶೋಕ್ ಅವರು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. ಜನರು ಈಗಲಾದರೂ ಎಚ್ಚೆತ್ತುಕೊಳ್ಳ ಬೇಕಿದೆ.