ಕರ್ನಾಟಕದಲ್ಲಿ ಶೇ.100ರಷ್ಟು ಮಂದಿಗೆ ಕೊವಿಡ್ ಮೊದಲ ಡೋಸ್ ಲಸಿಕೆ
ಬೆಂಗಳೂರು, ಜನವರಿ 24: ಕರ್ನಾಟಕವು ಕೊರೊನಾವೈರಸ್ ಲಸಿಕೆ ವಿತರಣೆಯಲ್ಲೂ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ರಾಜ್ಯದಲ್ಲಿ ಶೇಕಡಾ 100ರಷ್ಟು ಮಂದಿಗೆ ಕೊವಿಡ್ ಲಸಿಕೆಯ ಮೊದಲ ಡೋಸ್ ನೀಡಲಾಗಿದ್ದು, ಶೇ.85ರಷ್ಟು ಜನರು ಎರಡೂ ಡೋಸ್ ಲಸಿಕೆಯನ್ನು ಪಡೆದುಕೊಂಡಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.
ರಾಜ್ಯದ 15-17 ವರ್ಷದ ಮಕ್ಕಳಲ್ಲಿ ಶೇ. 67.5ರಷ್ಟು ಮಂದಿಗೆ ಮೊದಲ ಡೋಸ್ ನೀಡಲಾಗಿದೆ. ಇನ್ನೊಂದೆಡೆ 4,85,818 ಬೂಸ್ಟರ್ ಡೋಸ್ ವಿತರಿಸಲಾಗಿದ್ದು, ಒಟ್ಟು 9,33,92,626 ಡೋಸ್ ಲಸಿಕೆಯನ್ನು ನೀಡಲಾಗಿದೆ. ಕೊವಿಡ್-19 ಲಸಿಕೆ ವಿತರಣೆಯಲ್ಲಿ ರಾಜ್ಯ ಮುಂಚೂಣಿಯಲ್ಲಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಕೊವಿಡ್-19 ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಅದು ಮುಂದಿನ ಎರಡು ಮೂರು ವಾರಗಳಲ್ಲಿ ಕಡಿಮೆಯಾಗಲಿದೆ. ಆಸ್ಪತ್ರೆ ದಾಖಲಾತಿಗೆ ಹೆಚ್ಚು ಗಮನ ನೀಡಲಾಗುತ್ತಿದ್ದು, ಆಸ್ಪತ್ರೆ ದಾಖಲಾತಿ ಸಂಖ್ಯೆ ಹೆಚ್ಚಾದಲ್ಲಿ ಅಗತ್ಯ ಕ್ರಮ ವಹಿಸಲಾಗುತ್ತದೆ. ಆದರೆ ಅಂಥ ಪರಿಸ್ಥಿತಿ ಇನ್ನೂ ಬಂದಿಲ್ಲ. ಮೂರು ದಿನದಲ್ಲಿ ರೋಗ ಲಕ್ಷಣ ಇಲ್ಲದವರಿಗೆ ಪರೀಕ್ಷೆ ಮಾಡುವ ಅವಶ್ಯಕತೆ ಇಲ್ಲ ಎಂದು ಐಸಿಎಂಆರ್ ಹೇಳಿದೆ. ಅದರ ಅನ್ವಯ ಕ್ರಮ ವಹಿಸಲಾಗುತ್ತಿದೆ," ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಮಹಿಳಾ ಸಮಾನತೆ ಬಗ್ಗೆ ಸಚಿವರ ಉಲ್ಲೇಖ:
ರಾಷ್ಟ್ರೀಯ ಹೆಣ್ಣುಮಕ್ಕಳ ದಿನ ಹಿನ್ನೆಲೆ ಮಾತನಾಡಿದ ಸಚಿವ ಡಾ. ಕೆ ಸುಧಾಕರ್, ಮಹಿಳೆಯರಿಗೆ ಸಮಾನತೆ ನೀಡುವುದು ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಆಶಯವಾಗಿದೆ ಎಂದರು. ಹೆಣ್ಣು ಭ್ರೂಣ ಹತ್ಯೆ ವಿರುದ್ಧ ಜಾಗೃತಿ ಹಾಗೂ ಲಿಂಗ ಸಮಾನತೆ ತರಲು ಪ್ರಯತ್ನಿಸಬೇಕಿದೆ. ಕೆಲ ವರ್ಷಗಳಿಂದ ಲಿಂಗಾನುಪಾತವೂ ಹೆಚ್ಚಾಗಿದೆ. 2001 ರಲ್ಲಿ 946 ಇದ್ದ ಲಿಂಗಾನುಪಾತ, 2018 ರಲ್ಲಿ 957 ಕ್ಕೇರಿದೆ. ಅಂದರೆ, ಹೆಣ್ಣುಮಕ್ಕಳ ಸಂಖ್ಯೆ ಹೆಚ್ಚಾಗಿರುವುದು ಆಶಾದಾಯಕವಾಗಿದೆ. ಅವರ ಸಬಲೀಕರಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಭ್ರೂಣ ಪತ್ತೆಗೆ ರಾಜ್ಯದಲ್ಲಿ ಅವಕಾಶವಿಲ್ಲ. ಭ್ರೂಣ ಪತ್ತೆ ಮಾಡುವ ತಜ್ಞರು, ತಾಂತ್ರಿಕ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪರವಾನಗಿಯನ್ನು ರದ್ದು ಮಾಡಲಾಗುವುದು. ಭ್ರೂಣ ಪತ್ತೆಗೆ ಅವಕಾಶ ನೀಡುವುದಿಲ್ಲ ಎಂದರು.
ರಾಜ್ಯದಲ್ಲಿ 6 ಕೋಟಿ ಮಂದಿಗೆ ಕೊವಿಡ್-19 ಪರೀಕ್ಷೆ:
ಕರ್ನಾಟಕದಲ್ಲಿ ಜನವರಿ ತಿಂಗಳೊಂದರಲ್ಲೇ 32 ಲಕ್ಷ ಜನರಿಗೆ ಕೊರೊನಾವೈರಸ್ ಸೋಂಕಿನ ಪರೀಕ್ಷೆ ಮಾಡಲಾಗಿದೆ. ಯಾವ ರಾಜ್ಯವೂ ಇಷ್ಟು ಅಧಿಕ ಸಂಖ್ಯೆಯಲ್ಲಿ ಪರೀಕ್ಷೆ ಮಾಡಿಲ್ಲ. ಒಟ್ಟು 6 ಕೋಟಿ ಪರೀಕ್ಷೆಗಳನ್ನು ಮಾಡಿದ್ದು, ಇದು ಬೇರೆ ರಾಜ್ಯಗಳಿಗೆ ಮಾದರಿಯಾಗಿದೆ ಎಂದರು.
ರಾಜ್ಯದಲ್ಲಿ ಹೆಚ್ಚಾದ ಕೊವಿಡ್-19 ಪಾಸಿಟಿವಿಟಿ
ಕರ್ನಾಟಕದಲ್ಲಿ ಕೊರೊನಾವೈರಸ್ ಸೋಂಕಿನ ಪಾಸಿಟಿವಿಟಿ ದರವು ಹೆಚ್ಚಾಗಿದೆ. ಪ್ರತಿ 100 ಜನರನ್ನು ಕೊವಿಡ್-19 ಪರೀಕ್ಷೆಗೆ ಒಳಪಡಿಸಿದಾಗ ಈ ಪೈಕಿ 22.77 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. ರಾಜ್ಯದಲ್ಲಿ ಸೋಂಕಿನ ಪಾಸಿಟಿವಿಟಿ ದರವು ಶೇ.19.33 ರಿಂದ ಶೇ 22.77ಕ್ಕೆ ಏರಿಕೆಯಾಗಿದೆ. ಕಳೆದ ಶನಿವಾರ 42,470 ಮಂದಿಗೆ ಸೋಂಕು ಪತ್ತೆಯಾಗಿದ್ದು, ಶುಕ್ರವಾರಕ್ಕೆ ಹೋಲಿಸಿದರೆ 5,500ಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿವೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಜಿಲ್ಲಾವಾರು ಕೊರೊನಾವೈರಸ್ ಪ್ರಕರಣಗಳ ಸಂಖ್ಯೆ
ರಾಜ್ಯದಲ್ಲಿ ಒಟ್ಟು 50,210 ಮಂದಿಗೆ ಕೊರೊನಾವೈರಸ್ ಸೋಂಕು ಪತ್ತೆಯಾಗಿವೆ. ಈ ಪೈಕಿ ಬಾಗಲಕೋಟೆ 331, ಬಳ್ಳಾರಿ 904, ಬೆಳಗಾವಿ 885, ಬೆಂಗಳೂರು ಗ್ರಾಮಾಂತರ 925 ಬೆಂಗಳೂರು 26,299, ಬೀದರ್ 368, ಚಾಮರಾಜನಗರ 664, ಚಿಕ್ಕಬಳ್ಳಾಪುರ 552, ಚಿಕ್ಕಮಗಳೂರು 144, ಚಿತ್ರದುರ್ಗ 246, ದಕ್ಷಿಣ ಕನ್ನಡ 770, ದಾವಣಗೆರೆ 495, ಧಾರವಾಡ 955, ಗದಗ 274, ಹಾಸನ 1922, ಹಾವೇರಿ 165, ಕಲಬುರಗಿ 853, ಕೊಡಗು 1139, ಕೋಲಾರ 824, ಕೊಪ್ಪಳ 510, ಮಂಡ್ಯ 1455, ಮೈಸೂರು 4359, ರಾಯಚೂರು 410, ರಾಮನಗರ 199, ಶಿವಮೊಗ್ಗ 611, ತುಮಕೂರು 1963, ಉಡುಪಿ 947, ಉತ್ತರ ಕನ್ನಡ 641, ವಿಜಯಪುರ 249, ಯಾದಗಿರಿ 151 ಸೋಂಕಿತರ ಪ್ರಕರಣಗಳು ಪತ್ತೆಯಾಗಿವೆ.












Click it and Unblock the Notifications