ವರ್ತೂರು ಪ್ರಕಾಶ್ಗೆ ಜಾಮೀನು ಏ.17ಕ್ಕೆ ತೀರ್ಪು
ಕೋಲಾರ, ಏ. 9 : ಸರ್ಕಾರಿ ಅಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣದಲ್ಲಿ ಬಂಧನದ ಭೀತಿ ಎದುರಿಸುತ್ತಿರುವ ಶಾಸಕ ವರ್ತೂರು ಪ್ರಕಾಶ್ ನಿರೀಕ್ಷಣಾ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ಕೋರ್ಟ್ ಪೂರ್ಣಗೊಳಿಸಿದ್ದು, ಏ.17ರಂದು ತೀರ್ಪು ಕಾಯ್ದಿರಿಸಿದೆ.
ಅಧಿಕಾರಿಗೆ ಬೆದರಿಕೆ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಲಾರ ಶಾಸಕ (ಪಕ್ಷೇತರ) ವರ್ತೂರು ಪ್ರಕಾಶ್ ವಿರುದ್ಧ ಲೋಕಾಯುಕ್ತ ತನಿಖೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಶಾಸಕರು ಕೋಲಾರ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. [ಬೆದರಿಕೆ ಹಾಕಿದ್ದು ಹೇಗೆ?]

ಗುರುವಾರ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಕೊಂಡ ಕೋರ್ಟ್ ಎರಡೂ ಕಡೆಯ ವಾದವನ್ನು ಆಲಿಸಿ, ವಿಚಾರಣೆಯನ್ನು ಪೂರ್ಣಗೊಳಿಸಿದೆ. ಪ್ರಕರಣದ ತೀರ್ಪನ್ನು ಏ.17ಕ್ಕೆ ಕಾಯ್ದಿರಿಸಿದೆ. [ಬೆದರಿಕೆ ಹಾಕಿದ ವರ್ತೂರು ವಿರುದ್ಧ ಲೋಕಾಯುಕ್ತ ತನಿಖೆ]
ಅಧಿಕಾರಿಗೆ ಬೆದರಿಕೆ ಹಾಕಿದ ಶಾಸಕರ ವಿರುದ್ಧ ಮೊಕದ್ದಮೆ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಕರ್ನಾಟಕ ರಣಧೀರ ಪಡೆ ಅಧ್ಯಕ್ಷ ಬಿ.ಹರೀಶ್ ಕುಮಾರ್ ಲೋಕಾಯುಕ್ತರಿಗೆ ದೂರು ನೀಡಿದ್ದರು. ದೂರಿನ ಅನ್ವಯ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಲು ಡಾ.ವೈ.ಭಾಸ್ಕರರಾವ್ ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದ್ದರು.
ಏನಿದು ಪ್ರಕರಣ : ಕೆಲವು ದಿನಗಳ ಹಿಂದೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ವರ್ತೂರು ಪ್ರಕಾಶ್ ಅಧಿಕಾರಿಗೆ ಬೆದರಿಕೆ ಹಾಕುವ ಸಿಡಿಯನ್ನು ಬಿಡುಗಡೆ ಮಾಡಿದ್ದರು. ಮರಳು ಮಾಫಿಯಾಗೆ ಸಂಬಂಧಿಸಿದಂತೆ ಸರ್ಕಾರಿ ಅಧಿಕಾರಿಯೊಬ್ಬರಿಗೆ ಶಾಸಕರು ಬೆದರಿಕೆ ಹಾಕುವ ಸಿಡಿಯಲ್ಲಿತ್ತು.












Click it and Unblock the Notifications