ಪರಿಷತ್ ನಾಮನಿರ್ದೇಶಿತರ ಪಟ್ಟಿ ಬದಲಾವಣೆ
ಬೆಂಗಳೂರು, ಜೂ. 24 : ವಿಧಾನ ಪರಿಷತ್ ನಾಮನಿರ್ದೇಶ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ತೀರ್ಮಾನಿಸಿದ್ದಾರೆ. ಸರ್ಕಾರ ಅಂತಿಮಗೊಳಿಸಿರುವ ಪಟ್ಟಿಗೆ ರಾಜ್ಯಪಾಲರು ಸೇರಿದಂತೆ ಪ್ರತಿಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿರುವ ಹಿನ್ನಲೆಯಲ್ಲಿ ಪಟ್ಟಿಯನ್ನು ಬದಲಾವಣೆ ಮಾಡಿ, ಇಂದು ಸಂಜೆ ರಾಜ್ಯಪಾಲರಿಗೆ ಸಲ್ಲಿಸಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ಮಂಗಳವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಂತಿಮ ಪಟ್ಟಿ ಸಮೇತ ರಾಜಭವನಕ್ಕೆ ತೆರಳಿ ರಾಜ್ಯಪಾಲರ ಮನವೊಲಿಸಿ ಪಟ್ಟಿಯನ್ನು ಅವರ ಒಪ್ಪಿಗೆಗಾಗಿ ನೀಡಲಿದ್ದಾರೆ. ಮೊದಲು ಕಳುಹಿಸಿದ ಪಟ್ಟಿಯಲ್ಲಿದ್ದ ಇಂಟೆಕ್ ಅಧ್ಯಕ್ಷ ಶಾಂತಕುಮಾರ್ ಅವರ ಬದಲು ಐವಿನ್ ಡಿಸೋಜಾ ಅವರ ಹೆಸರನ್ನು ಮತ್ತೆ ಸೇರಿಸುವ ಸಾಧ್ಯತೆ ಇದೆ. ಇಬ್ಬರು ನಾಯಕರು ತೀವ್ರವಾಗಿ ಲಾಬಿ ನಡೆಸುತ್ತಿದ್ದು, ಯಾರಿಗೆ ಸ್ಥಾನ ಎಂಬುದು ಕುತೂಹಲ ಮೂಡಿಸಿದೆ.

ಸರ್ಕಾರ ಮೊದಲು ರಾಜ್ಯಪಾಲರಿಗೆ ನೀಡಿರುವ ಪಟ್ಟಿಯಲ್ಲಿ ವಿ.ಎಸ್.ಉಗ್ರಪ್ಪ, ಅಬ್ದುಲ್ ಜಬ್ಬಾರ್, ಇಕ್ಬಾಲ್ ಅಹಮ್ಮದ್ ಸರಡಗಿ, ಇಂಟೆಕ್ ಮುಖಂಡ ಶಾಂತಕುಮಾರ್ ಮತ್ತು ಚಿತ್ರನಟಿ ಡಾ.ಜಯಮಾಲಾ ಅವರ ಹೆಸರುಗಳಿತ್ತು. ಆದರೆ, ರಾಜ್ಯಪಾಲರು ವಿರೋಧ ವ್ಯಕ್ತಪಡಿಸಿದ್ದರು. ಆದ್ದರಿಂದ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದೆ. [ನಾಮನಿರ್ದೇಶಿತರ ಪಟ್ಟಿ ಹೀಗಿದೆ]
ಬಿಜೆಪಿ ವಿರೋಧ : ವಿಧಾನಪರಿಷತ್ ನಾಮನಿರ್ದೇಶನ ಪಟ್ಟಿಗೆ ಪ್ರತಿಪಕ್ಷ ಬಿಜೆಪಿ ಸಹ ಆಕ್ಷೇಪ ವ್ಯಕ್ತಪಡಿಸಿತ್ತು. ಕಾಂಗ್ರೆಸ್ ರಾಜಕೀಯ ಹಿನ್ನಲೆವುಳ್ಳ ವ್ಯಕ್ತಿಗಳನ್ನು ನಾಮ ನಿರ್ದೇಶಿತರ ಪಟ್ಟಿಯಲ್ಲಿ ಸೇರಿಸಿದೆ. ಆದ್ದರಿಂದ, ಪಟ್ಟಿಗೆ ಅಂತಿಮ ಒಪ್ಪಿಗೆ ನೀಡಬಾರದು ಎಂದು ಕರ್ನಾಟಕ ಬಿಜೆಪಿ ನಾಯಕರು ರಾಜ್ಯಪಾಲರಿಗೆ ಮನವಿ ಮಾಡಿದ್ದರು. [ಪಟ್ಟಿಗೆ ಬಿಜೆಪಿ ವಿರೋಧ]
ಹೈಕೋರ್ಟ್ ನಲ್ಲಿ ಅರ್ಜಿ : ಸರ್ಕಾರ ನಾಮನಿರ್ದೇಶನ ಮಾಡಿರುವ ಪಟ್ಟಿಯ ಕುರಿತು ಹೈಕೋರ್ಟ್ನಲ್ಲಿಯೂ ಅರ್ಜಿಯೊಂದು ದಾಖಲಾಗಿದ್ದು, ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವವರನ್ನು ನಾಮನಿರ್ದೇಶನ ಮಾಡಲಾಗಿದೆ. ಆದ್ದರಿಂದ ಪಟ್ಟಿಯಲ್ಲಿರುವ ಅಭ್ಯರ್ಥಿಗಳನ್ನು ನಾಮನಿರ್ದೇಶ ಮಾಡಬಾರದು ಎಂದು ಅರ್ಜಿಯಲ್ಲಿ ಮನವಿ ಮಾಡಲಾಗಿದೆ.












Click it and Unblock the Notifications