ಬಿಜೆಪಿ ರೌಡಿ ಮೋರ್ಚಾ ಹೆಡೆಮುರಿ ಕಟ್ಟುತ್ತೇವೆ: ಕಾಂಗ್ರೆಸ್ ಘೋಷಣೆ!
ಬೆಂಗಳೂರು: ರೌಡಿಶೀಟರ್ಸ್ ವಿಚಾರದಲ್ಲಿ ಕಾಂಗ್ರೆಸ್ ಮಹತ್ವದ ಘೋಷಣೆ ಹೊರಡಿಸಿದೆ. ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಸಾಕಷ್ಟು ರೌಡಿಗಳನ್ನು ಪಟ್ಟಿಯಿಂದ ಕೈಬಿಟ್ಟ ಆರೋಪ ಮಾಡಿದ್ದರು ಕಾಂಗ್ರೆಸ್ ನಾಯಕರು. ಈಗ ಮತ್ತೆ ರೌಡಿಗಳ ಹೆಡೆಮುರಿ ಕಟ್ಟಲಿದ್ದೇವೆಂದು ಕಾಂಗ್ರೆಸ್ ಹೇಳಿದ್ದು, ಅಪರಾಧ ಲೋಕದಲ್ಲಿ ಸಂಚಲನ ಸೃಷ್ಟಿಯಾಗಿದೆ.
ನೂತನ ಪೊಲೀಸ್ ಆಯಕ್ತ ಬಿ.ದಯಾನಂದ ಅವರ ಸೂಚನೆ ಮೇರೆಗೆ ಬೆಂಗಳೂರಿನ ಒಟ್ಟು 8 ವಿಭಾಗದ ಕಾನೂನು & ಸುವ್ಯವಸ್ಥೆ ಪೊಲೀಸರು ಏಕಕಾಲದಲ್ಲಿ 1344 ರೌಡಿಶೀಟರ್ಸ್ ಮನೆಗಳ ಮೇಲೆ ದಾಳಿ ನಡೆಸಿದ್ದರು. ಈ ವೇಳೆ 9.1 ಕೆ.ಜಿ. ಗಾಂಜಾ, ಮಾರಕಾಸ್ತ್ರಗಳು ಪತ್ತೆ ಆಗಿವೆ. ಈ ಹಿನ್ನೆಲೆ ರಾಜ್ಯ ಬಿಜೆಪಿ ವಿರುದ್ಧ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಘಟಕ ರೌಡಿಗಳ ಹೆಡೆಮುರಿ ಕಟ್ಟುವ ಬಗ್ಗೆ ಚಾಲೆಂಜ್ ಹಾಕಿದೆ. ಈ ಮೂಲಕ ಬಿಜೆಪಿ, ಕಾಂಗ್ರೆಸ್ ನಡುವೆ ರೌಡಿಶೀಟರ್ಸ್ ವಿಚಾರದಲ್ಲಿ ಕೂಡ ಕಿಚ್ಚು ಹೊತ್ತಿಕೊಂಡಿದೆ. ಹಾಗಾದರೆ ಕಾಂಗ್ರೆಸ್ ಈ ವಿಚಾರದಲ್ಲಿ ಹೇಳಿದ್ದಾದ್ರೂ ಏನು? ಮುಂದೆ ಓದಿ.

ರೌಡಿಗಳ ವಿರುದ್ಧ ಕಾಂಗ್ರೆಸ್ ಸಮರ?
ರಾಜ್ಯ ಬಿಜೆಪಿ ವಿರುದ್ಧ ಕಾಂಗ್ರೆಸ್ ಗಂಭೀರ ಆರೋಪ ಮಾಡುತ್ತಿದೆ. ಈ ನಡುವೆ ಟ್ವೀಟ್ ಮೂಲಕ ಬಿಜೆಪಿ ನಾಯಕರನ್ನ ಈಗ ಕಾಂಗ್ರೆಸ್ ಕೆಣಕಿದೆ. 'ಬಿಜೆಪಿ ರೌಡಿ ಮೋರ್ಚಾವನ್ನು ಹೆಡೆಮುರಿ ಕಟ್ಟುತ್ತೇವೆ, ಬಿಜೆಪಿ ಅವಧಿಯಲ್ಲಿ ರೌಡಿಗಳ ರೌಡಿ ಶೀಟ್ ತೆಗೆದಿದ್ದರು, ನಮ್ಮ ಸರ್ಕಾರ ರೌಡಿ ಚಟುವಟಿಕೆಗಳನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ, ಬೆಂಗಳೂರು ಹಾಗೂ ಈ ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸಿ ಕರ್ನಾಟಕವನ್ನು ಶಾಂತಿಯ ತೋಟವನ್ನಾಗಿಸಲು ಪಣ ತೊಟ್ಟಿದ್ದೇವೆ.' ಎಂದಿದೆ ರಾಜ್ಯ ಕಾಂಗ್ರೆಸ್ ಘಟಕ. ಹೀಗೆ ಬಿಜೆಪಿ ವಿರುದ್ಧ ಕಾಂಗ್ರೆಸ್ ಮತ್ತೊಂದು ಅಸ್ತ್ರ ಪ್ರಯೋಗಿಸಲು ಮುಂದಾಗಿದೆ.
ಬಿಜೆಪಿ ರೌಡಿ ಮೋರ್ಚಾವನ್ನು ಹೆಡೆಮುರಿ ಕಟ್ಟುತ್ತೇವೆ, ಬಿಜೆಪಿ ಅವಧಿಯಲ್ಲಿ ರೌಡಿಗಳ ರೌಡಿ ಶೀಟ್ ತೆಗೆದಿದ್ದರು,
— Karnataka Congress (@INCKarnataka) June 9, 2023
ನಮ್ಮ ಸರ್ಕಾರ ರೌಡಿ ಚಟುವಟಿಕೆಗಳನ್ನು ಯಾವ ಕಾರಣಕ್ಕೂ ಸಹಿಸುವುದಿಲ್ಲ,
ಬೆಂಗಳೂರು ಹಾಗೂ ಈ ರಾಜ್ಯದಲ್ಲಿ ಅಪರಾಧ ಚಟುವಟಿಕೆಗಳನ್ನು ನಿಗ್ರಹಿಸಿ ಕರ್ನಾಟಕವನ್ನು ಶಾಂತಿಯ ತೋಟವನ್ನಾಗಿಸಲು ಪಣ ತೊಟ್ಟಿದ್ದೇವೆ. pic.twitter.com/WooTsUoR7y
ಬೆಂಗಳೂರಲ್ಲಿ ದಿಢೀರ್ ರೌಡಿಗಳಿಗೆ ಶಾಕ್!
ಇನ್ನು ರೌಡಿಗಳ ಮನೆ ಮೇಲೆ ದಾಳಿ ನಡೆದ ನಂತರ ಹಲವು ಬೆಳವಣಿಗೆ ಕೂಡ ನಡೆದಿವೆ. ರೌಡಿಗಳನ್ನ ಠಾಣೆಗೆ ಕರೆದೊಯ್ದು ಈಗ ಏನು ಕೆಲಸ ಮಾಡುತ್ತಿದ್ದಾರೆ ಎಂಬ ಮಾಹಿತಿಯನ್ನ ಕಲೆ ಹಾಕಲಾಗಿದೆ. ಯಾವುದೇ ರೀತಿ ರೌಡಿ ಚಟುವಟಿಕೆಗಳಲ್ಲಿ ಭಾಗಿಯಾಗದಂತೆ, ಕಾನೂನು ಬಾಹಿರ ಕೆಲಸ & ಅಪರಾಧ ಕೃತ್ಯಗಳಲ್ಲಿ ತೊಡಗಿಕೊಳ್ಳದಂತೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಪತ್ರ ಬರೆಸಿಕೊಂಡು ಕಳುಹಿಸಲಾಗಿದೆ. ನೂತನ ಪೊಲೀಸ್ ಆಯುಕ್ತ ಬಿ. ದಯಾನಂದ, ಅಪರಾಧ ಹಿನ್ನೆಲೆ ಇರುವ ಹಾಗೂ ರೌಡಿಗಳ ಮೇಲೆ ನಿಗಾ ಇರಿಸುವಂತೆ ಮತ್ತು ಅಪರಾಧ ಪ್ರಕರಣಗಳಲ್ಲಿ ಜಾಮೀನು ರಹಿತ ವಾರೆಂಟ್ ಇರುವವರನ್ನು ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲು ಸೂಚಿಸಿದ್ದರು. ಈ ಹಿನ್ನೆಲೆ ರೌಡಿಶೀಟರ್ಸ್ ಮನೆ ಮೇಲೆ ದಿಢೀರ್ ದಾಳಿ ನಡೆಸಲಾಗಿತ್ತು.
ರಾಜಧಾನಿ ಬೆಂಗಳೂರಲ್ಲಿ ಹದ್ದಿನ ಕಣ್ಣು
ಪಶ್ಚಿಮ ವಿಭಾಗದಲ್ಲಿ 177, ದಕ್ಷಿಣ ವಿಭಾಗದಲ್ಲಿ 175, ಉತ್ತರದಲ್ಲಿ 254 & ಕೇಂದ್ರ ವಿಭಾಗ 90, ಪೂರ್ವ 207, ಆಗ್ನೇಯ ವಿಭಾಗ 160 & ಈಶಾನ್ಯ ವಿಭಾಗದಲ್ಲಿ 156, ವೈಟ್ ಫೀಲ್ಡ್ ವಿಭಾಗದಲ್ಲಿ 125 ರೌಡಿಗಳು ಸೇರಿ ಒಟ್ಟು 1344 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಪೊಲೀಸರು ಪರಿಶೀಲನೆ ನಡೆಸಿದ್ದರು. ಈ ಮೂಲಕ ರಾಜ್ಯದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ರೌಡಿಶೀಟರ್ಗಳಿಗೆ ತಲ್ಲಣ ಶುರುವಾಗಿದೆ. ಹಾಗೇ ಹಳೆಯ ರೌಡಿಶೀಟರ್ಗಳ ಹಿಸ್ಟರಿ ಬೆದಕಲಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆ ನೀಡಿದ್ದ ಆರೋಪ ಎದುರಿಸಿದ್ದ ರೌಡಿಶೀಟರ್ಸ್ ಮೇಲೆ ಹದ್ದಿನ ಕಣ್ಣಿಡಲಾಗಿದೆ.
ಒಟ್ನಲ್ಲಿ ಇಷ್ಟುದಿನ ಗ್ಯಾರಂಟಿ ವಿಚಾರಕ್ಕೆ ಟ್ವೀಟ್ ಯುದ್ಧ ನಡೆಸುತ್ತಿದ್ದ ಬಿಜೆಪಿ, ಕಾಂಗ್ರೆಸ್ ನಡುವೆ ಈಗ ರೌಡಿಶೀಟರ್ಸ್ ವಿಚಾರ ಕೂಡ ಎಂಟ್ರಿಯಾಗಿದೆ. ಕಾಂಗ್ರೆಸ್ ಈಗ ಮಾಡಿರುವ ಟ್ವೀಟ್ಗೆ ಬಿಜೆಪಿ ಇನ್ನೂ ರಿಯಾಕ್ಟ್ ಕೊಟ್ಟಿಲ್ಲ. ಆದರೆ ರೀಪ್ಲೆ ಕೊಡುವ ನಿರೀಕ್ಷೆ ಇದೆ. ಈ ಮೂಲಕ ಇಷ್ಟುದಿನ ಬರೀ ಗ್ಯಾರಂಟಿ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ನಡೆದಿದ್ದ ಚರ್ಚೆ, ಇದೀಗ ರೌಡಿಗಳ ವಿಚಾರದಲ್ಲೂ ನಡೆಯುವ ನಿರೀಕ್ಷೆ ಇದೆ. ಆ ಮೂಲಕ ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರಿಗೆ ಹೊಸ ವಿಷಯವೂ ಸಿಕ್ಕಂತಾಗಿದೆ.











Click it and Unblock the Notifications