ಕಂಪ್ಲಿ ಶಾಸಕ ಗಣೇಶ್ ಅಮಾನತು ವಾಪಸ್ ಪಡೆದ ಕಾಂಗ್ರೆಸ್!
ಬೆಂಗಳೂರು, ಮೇ 29 : ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಕರ್ನಾಟಕ ಕಾಂಗ್ರೆಸ್ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅಮಾನತು ಆದೇಶವನ್ನು ವಾಪಸ್ ಪಡೆದಿದೆ. ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಹಲವು ತಂತ್ರ ಅನುಸರಿಸುತ್ತಿವೆ.
19/1/2019ರಂದು ಈಗಲ್ಟನ್ ರೆಸಾರ್ಟ್ನಲ್ಲಿ ನಡೆದ ಗಲಾಟೆ ಬಳಿಕ ಕಂಪ್ಲಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಜೆ.ಎನ್.ಗಣೇಶ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತು ಮಾಡಲಾಗಿತ್ತು. ಬುಧವಾರ ಅಮಮಾತು ಆದೇಶ ವಾಪಸ್ ಪಡೆಯುವ ತೀರ್ಮಾನ ಕೈಗೊಳ್ಳಲಾಗಿದೆ.
ಕೆಪಿಸಿಸಿ ಶಾಸಕರ ಅಮಾನತು ಆದೇಶವನ್ನು ವಾಪಸ್ ಪಡೆಯುವ ಕುರಿತು ಬುಧವಾರ ತೀರ್ಮಾನ ಕೈಗೊಂಡಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಅವರು ಬೆಂಗಳೂರಿನಲ್ಲಿದ್ದು, ಅವರ ಜೊತೆ ಚರ್ಚಿಸಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಈಗಲ್ಟನ್ ರೆಸಾರ್ಟ್ನಲ್ಲಿ ಶಾಸಕ ಜೆ.ಎನ್.ಗಣೇಶ್ ಮತ್ತು ಆನಂದ್ ಸಿಂಗ್ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಗಣೇಶ್ ಅವರು ಆನಂದ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ್ದರು. ಈ ಪ್ರಕರಣದಲ್ಲಿ ಬಂಧಿತರಾಗಿದ್ದ ಗಣೇಶ್ ಕೆಲವು ದಿನಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದಾರೆ.

ಜೆ.ಎನ್.ಗಣೇಶ್ ಅಮಾನತು ಮಾಡಲಾಗಿತ್ತು
ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರ ಆದೇಶದಂತೆ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಅವರನ್ನು ಅಮಾನತು ಮಾಡಲಾಗಿತ್ತು. 19/1/2019ರಂದು ಈಗಲ್ಟನ್ ರೆಸಾರ್ಟ್ನಲ್ಲಿ ನಡೆದ ಗಲಾಟೆ ಕುರಿತು ಸಂಪೂರ್ಣ ವಿಚಾರಣೆ ನಡೆಸಲು ಡಾ.ಜಿ.ಪರಮೇಶ್ವರ, ಕೆ.ಜೆ.ಜಾರ್ಜ್ ಮತ್ತು ಕೃಷ್ಣ ಬೈರೇಗೌಡ ಅವರನ್ನು ಒಳಗೊಂಡ ಸಮಿತಿ ರಚನೆ ಮಾಡಲಾಗಿತ್ತು.

ಅಮಾನತು ಆದೇಶ ವಾಪಸ್ ಪಡೆಯುವಂತೆ ಕೇಳಿಲ್ಲ
ಮಂಗಳವಾರ ಕಂಪ್ಲಿಯಲ್ಲಿ ಮಾತನಾಡಿದ್ದ ಜೆ.ಎನ್.ಗಣೇಶ್ ಅವರು, 'ನನ್ನ ಅಮಾನತು ಆದೇಶ ಹಿಂದಕ್ಕೆ ಪಡೆಯುವಂತೆ ಕೆಪಿಸಿಸಿಯನ್ನು ಕೇಳುವುದಿಲ್ಲ. ಆದರೆ, ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪಕ್ಷದ ಹಿರಿಯರು, ಕಾರ್ಯಕರ್ತರ ಅಭಿಪ್ರಾಯದಂತೆ ಮುಂದಿನ ಹೆಜ್ಜೆ ಇಡುತ್ತೇನೆ' ಎಂದು ಹೇಳಿದ್ದರು.

ಯಾವುದೇ ವೈರತ್ವವಿಲ್ಲ
'ಆನಂದಣ್ಣ ನಾನು ಎರಡು ದಶಕಗಳಿಂದ ಚೆನ್ನಾಗಿದ್ದೇವೆ. ನಮ್ಮಿಬ್ಬರಲ್ಲಿ ಯಾವುದೇ ವೈರತ್ವವಿಲ್ಲ.ಇಂದಿಗೂ ಫೋನ್ ಮೂಲಕ ಸಂಪರ್ಕದಲ್ಲಿದ್ದೇವೆ. ರೆಸಾರ್ಟ್ ಗಲಾಟೆ ಉದ್ದೇಶಪೂರ್ವಕವಾಗಿ ನಡೆದಿಲ್ಲ. ಮೂರನೆಯವರು ಲಾಭ ಮಾಡಿಕೊಳ್ಳಲು ಈ ಘಟನೆ ನಡೆದಿದೆ' ಎಂದು ಜೆ.ಎನ್.ಗಣೇಶ್ ಹೇಳಿದ್ದಾರೆ.

ಸರ್ಕಾರ ಉಳಿಸಿಕೊಳ್ಳುವ ಯೋಜನೆ
ಕಾಂಗ್ರೆಸ್-ಜೆಡಿಎಸ್ ಸರ್ಕಾರ ಉಳಿಸಿಕೊಳ್ಳಲು ಉಭಯ ಪಕ್ಷಗಳು ಹಲವಾರು ತಂತ್ರ ಹಣೆದಿವೆ. ಅದರ ಭಾಗ ಎಂಬಂತೆ ಕಾಂಗ್ರೆಸ್ನಲ್ಲಿನ ಅಸಮಾಧಾನವನ್ನು ಶಮನ ಮಾಡಲಾಗುತ್ತಿದೆ. ಆದ್ದರಿಂದ, ಕಂಪ್ಲಿ ಗಣೇಶ್ ಅವರ ಅಮಾನತು ಆದೇಶವನ್ನು ಕೆಪಿಸಿಸಿ ವಾಪಸ್ ಪಡೆದಿದೆ.












Click it and Unblock the Notifications