ಕಾರ್ಯಕರ್ತರ ಪಡೆ ಕಟ್ಟಲು 'ಕೈ' ನಾಯಕರ ಕಸರತ್ತು
ಬೆಂಗಳೂರು, ಏಪ್ರಿಲ್ 10: 2029ರ ಲೋಕಸಭಾ ಚುನಾವಣೆಗೆ ಮೊದಲು ದೇಶದಲ್ಲಿ ಸುಮಾರು 19 ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿದ್ದು, ಈ ಚುನಾವಣೆಗಳಲ್ಲಿನ ಕಾಂಗ್ರೆಸ್ ಸಾಧನೆ ಮುಂದಿನ ಲೋಕಸಭಾ ಚುನಾವಣೆಗೆ ಮುನ್ನುಡಿಯಾಗಲಿದೆ. ಹೀಗಾಗಿಯೇ ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲು ಬೇಕಾದ ತಂತ್ರಗಳನ್ನು ಕೈನಾಯಕರು ರಾಷ್ಟ್ರಮಟ್ಟದಲ್ಲಿ ಮಾಡುತ್ತಿರುವುದು ಈಗ ಕಂಡು ಬರುತ್ತಿದೆ. ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಕಾರ್ಯಕರ್ತರ ಪಡೆಯನ್ನು ಹುಟ್ಟುಹಾಕಲು ತಯಾರಿ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಇವತ್ತು ಪಕ್ಷ ಸಂಘಟನೆ ವಿಚಾರದಲ್ಲಿ ಹೀನಾಯ ಸ್ಥಿತಿಯಲ್ಲಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದಲ್ಲಿ ನಾಯಕರಿದ್ದಾರೆ. ಆದರೆ ತಳಮಟ್ಟದಲ್ಲಿ ಕಾರ್ಯಕರ್ತರ ಕೊರತೆಯಿದೆ. ಹೀಗಾಗಿಯೇ ಸೋಲುಗಳು ಮೇಲಿಂದ ಮೇಲೆ ಪಕ್ಷವನ್ನು ಸುತ್ತಿಕೊಳ್ಳುತ್ತಿದೆ. ನಾಯಕರು ಕೇವಲ ಭಾಷಣಕ್ಕಷ್ಟೆ ಸೀಮಿತರಾಗುತ್ತಿದ್ದು, ಚುನಾವಣೆ ಸಮೀಪಿಸಿದಾಗ ಕ್ಷೇತ್ರಕ್ಕೆ ಆಗಮಿಸಿ ಸಭೆ, ಸಮಾವೇಶ ಮಾಡಿಬಿಟ್ಟದರೆ ಮತಗಳು ಬೀಳಲ್ಲ. ಜತೆಗೆ ಉಚಿತ ಯೋಜನೆಗಳನ್ನು ಘೋಷಿಸಿದರೂ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನವನ್ನು ಗೆಲ್ಲಲು ಸಾಧ್ಯವಾಗಿಲ್ಲ. ಮುಂದಿನ ದಿನಗಳಲ್ಲಿ ಕೆಲವು ರಾಜ್ಯಗಳಲ್ಲಿ ಅಧಿಕಾರ ಹಿಡಿಯದೆ ಹೋದರೆ ಕಾಂಗ್ರೆಸ್ ನ ರಾಜಕೀಯ ಭವಿಷ್ಯಕ್ಕೆ ಮಾರಕವಾಗಲಿದೆ.

ಬಿಜೆಪಿಯನ್ನು ಮತ್ತು ಪ್ರಧಾನಿ ನರೇಂದ್ರ ಮೋದಿಯನ್ನು ಹೇಗಾದರೂ ಮಾಡಿ ಸೋಲಿಸಲೇ ಬೇಕೆಂಬ ಹಠಕ್ಕೆ ಬಿದ್ದ ಕಾಂಗ್ರೆಸ್ ಗೆ ಕಳೆದ ಮೂರು ಲೋಕಸಭಾ ಚುನಾವಣೆಯಲ್ಲಿಯೂ ಸಾಧ್ಯವಾಗಲಿಲ್ಲ. ಇದರ ಜತೆಗೆ ತೆಲಂಗಾಣ ಮತ್ತು ಕರ್ನಾಟಕವನ್ನು ಹೊರತು ಪಡಿಸಿ ಬೇರೆಲ್ಲೂ ಗೆಲುವು ಸಾಧಿಸಲಾಗಲಿಲ್ಲ. ಮೋದಿ ಮೇಲಿನ ದ್ವೇಷಕ್ಕಾಗಿ ಮೋದಿಯನ್ನು ವಿರೋಧಿಸುವವರನ್ನು ತಮ್ಮೊಂದಿಗೆ ಸೇರಿಸಿಕೊಂಡು ಚುನಾವಣೆ ಹೋಗುವ ಭರದಲ್ಲಿ ಸಣ್ಣಪುಟ್ಟ ಪ್ರಾದೇಶಿಕ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದಲ್ಲದೆ, ಕೆಲವು ಕ್ಷೇತ್ರಗಳನ್ನು ಹೊಂದಾಣಿಕೆ ಮಾಡಿಕೊಂಡ ಕಾರಣಕ್ಕೆ ಬಿಟ್ಟುಕೊಡಬೇಕಾಗಿ ಬಂದಿತ್ತು.
ಪ್ರಾದೇಶಿಕ ಪಕ್ಷಗಳು ಕೈಕೊಡುವ ಸಾಧ್ಯತೆ
ಕೆಲವು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ರಾಷ್ಟ್ರೀಯ ಪಕ್ಷ ಕಾಂಗ್ರೆಸ್ ಗಿಂತ ಸಾಮರ್ಥ್ಯ ಹೊಂದಿವೆ. ಹೀಗಾಗಿ ಅವು ಕಾಂಗ್ರೆಸ್ ಜತೆಗೆ ತಯಾರಿಲ್ಲ. ಅಂಥ ಪರಿಸ್ಥಿತಿಯನ್ನು ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಜತೆಗೆ ಎದುರಿಸುವಂತಾಯಿತು. ಮುಂದೆ ಪಶ್ಚಿಮ ಬಂಗಾಳದಲ್ಲಿಯೂ ಇದೇ ಆಗಲಿದೆ. ತೃಣಮೂಲ ಕಾಂಗ್ರೆಸ್ ಅಲ್ಲಿ ಪ್ರಾಬಲ್ಯ ಸಾಧಿಸಿದ್ದು, ಮಮತಾ ಬ್ಯಾನರ್ಜಿ ಕಾಂಗ್ರೆಸ್ ನ್ನು ಹತ್ತಿರಕ್ಕೆ ಬಿಟ್ಟುಕೊಳ್ಳುವ ಲಕ್ಷಣಗಳು ಕಾಣಿಸುತ್ತಿಲ್ಲ. ತಮಿಳುನಾಡಿನಲ್ಲಿಯೂ ಇದೇ ಪರಿಸ್ಥಿತಿ ಮುಂದುವರೆದರೂ ಅಚ್ಚರಿಯಿಲ್ಲ. ಹೀಗಾಗಿಯೇ ತಮ್ಮ ಐಎನ್ ಡಿಐಎ ಸದಸ್ಯ ಪಕ್ಷಗಳ ನಾಯಕರನ್ನು ವಿಧಾನಸಭಾ ಚುನಾವಣೆಯಲ್ಲಿ ಸಂಪೂರ್ಣ ನಂಬುವ ಪರಿಸ್ಥಿತಿಯಲ್ಲಿ ಕಾಂಗ್ರೆಸ್ ಇಲ್ಲದಂತಾಗಿದೆ.
ಮೇಲ್ನೋಟಕ್ಕೆ ಐಎನ್ ಡಿಐಎ ಕೂಟವು ಕೇವಲ ಲೋಕಸಭಾ ಚುನಾವಣೆಗಷ್ಟೇ ಸೀಮಿತವಾದಂತೆ ಕಾಣಿಸುತ್ತಿದೆ. ಉಳಿದಂತೆ ವಿಧಾನಸಭಾ ಚುನಾವಣೆಗಳು ಬಂದಾಗ ಚಿಕ್ಕಪುಟ್ಟ ಪ್ರಾದೇಶಿಕ ಪಕ್ಷಗಳು ತಮ್ಮ ಅಸ್ತಿತ್ವದ ಬಗ್ಗೆ ಚಿಂತಿಸುತ್ತವೆ. ರಾಷ್ಟ್ರೀಯ ಪಕ್ಷದ ಜತೆಗೆ ಹೋದರೆ ಅದರಿಂದ ಪಕ್ಷಕ್ಕೆ ತೊಂದರೆಯಾಗುವ ಭಯವೂ ಅವುಗಳಲ್ಲಿವೆ. ಬಹುತೇಕ ಕಡೆಗಳಲ್ಲಿ ಪ್ರಾದೇಶಿಕ ಪಕ್ಷಕ್ಕೆ ರಾಷ್ಟ್ರೀಯ ಪಕ್ಷಗಳೇ ವಿರೋಧಿಗಳು. ತಳಮಟ್ಟದಿಂದ ರಾಷ್ಟ್ರೀಯ ಪಕ್ಷವನ್ನು ವಿರೋಧಿಸುತ್ತಲೇ ರಾಜಕೀಯ ಮಾಡಿಕೊಂಡು ಬಂದಿರುತ್ತಾರೆ. ಹೀಗಾಗಿ ಮೇಲ್ಮಟ್ಟದಲ್ಲಿ ನಾಯಕರು ಒಪ್ಪಂದ ಮಾಡಿಕೊಂಡರೂ ಸ್ಥಳೀಯವಾಗಿ ಕಾರ್ಯಕರ್ತರು ಒಮ್ಮತದಿಂದ ಮುನ್ನಡೆಯುವುದು ಕಷ್ಟವಾಗುತ್ತದೆ.

ಮುಂದಿನ 'ಕೈ' ಕಾರ್ಯವೈಖರಿ ಹೇಗಿರಲಿದೆ?
ಇದೆಲ್ಲ ಸಮಸ್ಯೆಗಳನ್ನು ಅರಿತಿರುವ ಕಾಂಗ್ರೆಸ್ ನ ನಾಯಕರು ರಾಷ್ಟ್ರದಾದ್ಯಂತ ಕಾರ್ಯಕರ್ತರ ಪಡೆಯನ್ನು ತಳಮಟ್ಟದಿಂದಲೇ ಕಟ್ಟಿ ಪಕ್ಷವನ್ನು ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಕರ್ನಾಟಕದ ಮಟ್ಟಿಗೆ ಆ ಕೆಲಸವಾಗಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಕಾಂಗ್ರೆಸ್ ನಾಯಕರು ಪಕ್ಷವನ್ನು ತಳಮಟ್ಟದಿಂದ ಕಟ್ಟುವಲ್ಲಿ ಮತ್ತು ಕಾರ್ಯಕರ್ತರ ಪಡೆಯನ್ನು ಹೆಚ್ಚಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆದರೆ ಈ ರೀತಿಯ ಕಾರ್ಯಕರ್ತರ ಪಡೆ ಬೇರೆ ರಾಜ್ಯಗಳಲ್ಲಿ ಇಲ್ಲ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಇದನ್ನರಿತ ಎಐಸಿಸಿ ಇದೀಗ ಪಕ್ಷ ಸಂಘಟನೆಗೆ ಒತ್ತು ನೀಡುವ ತೀರ್ಮಾನಕ್ಕೆ ಬಂದಿದೆ.
ಕಾಂಗ್ರೆಸ್ ನಲ್ಲಿ ನಾಯಕರ ಪಡೆ ಮಾತ್ರವಿದ್ದು ಕಾರ್ಯಕರ್ತರ ಪಡೆಯಿಲ್ಲ ಎಂಬ ಆರೋಪವಿದೆ. ಜತೆಗೆ ಬಹುತೇಕ ನಾಯಕರಲ್ಲಿ ತಳಮಟ್ಟಕ್ಕಿಳಿದು ಕಾರ್ಯಕರ್ತರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಮಾಡುವ ಸಾಮರ್ಥ್ಯವಿಲ್ಲ. ಅವರೇನಿದ್ದರೂ ಮಾರುದ್ದ ಭಾಷಣ, ಆರೋಪ ಮಾಡುವುದಕ್ಕೆ ಸೀಮಿತರಾಗಿದ್ದಾರೆ. ಅದನ್ನು ಮೀರಿ ಜನತೆಯೊಂದಿಗೆ ಬೆರೆತು ಪಕ್ಷ ಸಂಘಟನೆ ಮಾಡಿ ಚುನಾವಣೆಗೆ ತಯಾರಾಗುವ ಸಾಹಸಕ್ಕೆ ಇದೀಗ ರಾಷ್ಟ್ರೀಯ ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಕಾರ್ಯವೈಖರಿ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಿದೆ.












Click it and Unblock the Notifications