ಭ್ರಷ್ಟಾಚಾರದ ಬಗ್ಗೆ ಮಾತನಾಡಲೂ ಬಿಜೆಪಿ ಸರ್ಕಾರಕ್ಕೆ ಕಮಿಷನ್ ನೀಡಬೇಕೇ: ಕಾಂಗ್ರೆಸ್
ಬೆಂಗಳೂರು, ಅಕ್ಟೋಬರ್ 18: ಭ್ರಷ್ಟಾಚಾರದ ಬಗ್ಗೆ ಮಾತನಾಡಲೂ ಸಹ ಬಿಜೆಪಿ ಸರ್ಕಾರಕ್ಕೆ ಕಮಿಷನ್ ನೀಡಬೇಕೇ ಎಂದು ಕರ್ನಾಟಕ ಕಾಂಗ್ರೆಸ್ ಘಟಕ ಪ್ರಶ್ನಿಸಿದೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕೆಪಿಸಿಸಿ, 'ಬಿಜೆಪಿಯಲ್ಲಿರುವುದು ಅರ್ಧ ಭ್ರಷ್ಟರು, ಇನ್ನರ್ಧ ಪುಕ್ಕಲುಗಳು. ಅಹಂಕಾರ, ಭ್ರಷ್ಟಾಚಾರಗಳನ್ನು ಮೈಗೂಡಿಸಿಕೊಂಡಿರುವ ಈ ಸರ್ಕಾರದ ಸಚಿವರುಗಳಿಗೆ ತಮ್ಮದೇ ಪ್ರಣಾಳಿಕೆಯ ಭರವಸೆಗಳ ಬಗೆಗಿನ ಪ್ರಶ್ನೆಗಳಿಗೆ ಉತ್ತರಿಸುವ ಧೈರ್ಯವಿಲ್ಲ. ಬಿಜೆಪಿ ಪಕ್ಷದಲ್ಲಿರುವವರೆಲ್ಲ ಸುಳ್ಳಿನ ಸಾಮ್ರಾಜ್ಯದ ಸಾಮ್ರಾಟರು' ಎಂದು ವಾಗ್ದಾಳಿ ನಡೆಸಿದೆ.
'#PayCM ಈಗ, #SayCM ಆಗಲಿ, ರಾಜ್ಯದ ಜನತೆಗೆ ಉತ್ತರ ನೀಡಲಿ. ಚುನಾವಣೆಗೂ ಮೊದಲು ನೀಡಿದ ಭರವಸೆಗಳನ್ನು ಮರೆತು ವಚನಭ್ರಷ್ಟರಾದ ಬಿಜೆಪಿಯವರು ರಾಜ್ಯದ ಜನತೆಗೆ ಉತ್ತರ ನೀಡಬೇಕಿದೆ. ತಮ್ಮದೇ ಪಕ್ಷದ ಪ್ರಣಾಳಿಕೆಯ ಭರವಸೆಗಳ ಬಗ್ಗೆ ಮಾತಾಡಲು ಕೂಡ 40 ಪರ್ಸೆಂಟ್ ಕಮಿಷನ್ ನೀಡಬೇಕೆ ಬಸವರಾಜ ಬೊಮ್ಮಾಯಿ ಅವರೇ' ಎಂದು ಪ್ರಶ್ನಿಸಿದೆ.

'ತಮ್ಮದೇ ಪ್ರಣಾಳಿಕೆಯನ್ನು ಇಟ್ಟುಕೊಂಡು ಒಂದೇ ಒಂದು ಪತ್ರಿಕಾಗೋಷ್ಠಿ ನಡೆಸುವ ದಮ್ಮು ತಾಕತ್ತು ಇದೆಯೇ ಬಿಜೆಪಿಗೆ? ಎಷ್ಟು ಭರವಸೆಗಳನ್ನು ಈಡೇರಿಸಿದ್ದೇವೆ, ಈಡೇರಿಸಿಲ್ಲ ಎಂಬ ಲೆಕ್ಕ ಕೊಡಲು ಸಾಧ್ಯವೇ ರಾಜ್ಯದ ಜನತೆಗೆ ಪ್ರಣಾಳಿಕೆ ಮುಂದಿಟ್ಟುಕೊಂಡು ದಮ್ಮು ತಾಕತ್ತಿನ ಪ್ರದರ್ಶನ ಮಾಡಲು ಸಾಧ್ಯವೇ' ಎಂದು ಬಿಜೆಪಿಗೆ ಕೇಳಿದೆ.
'ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ 550 ಭರವಸೆಗಳನ್ನು ನೀಡಿತ್ತು. ಈ ವರೆಗೂ ನಾವು ಬಿಜೆಪಿ ನೀಡಿದ ಭರವಸೆಗಳ ಬಗ್ಗೆ 50 ಪ್ರಶ್ನೆಗಳನ್ನು ಕೇಳಿದ್ದೇವೆ. ಇದಕ್ಕೆ ಬಿಜೆಪಿ ನೀಡಿದ ಉತ್ತರ ಶೂನ್ಯ. ತಮ್ಮದೇ ಪ್ರಣಾಳಿಕೆಯಲ್ಲಿನ ಅಂಶಗಳ ಬಗ್ಗೆ ಬಿಜೆಪಿಗೆ ಮಾತನಾಡುವ ಧೈರ್ಯವಿರದಿರುವುದು ಸರ್ಕಾರದ ವಿಫಲತೆಗೆ ನಿದರ್ಶನ' ಎಂದು ಕಾಂಗ್ರೆಸ್ ಟೀಕಿಸಿದೆ.
'ಮ್ಯಾನೇಜ್ಮೆಂಟ್ ಸರ್ಕಾರ, ಬ್ಲ್ಯಾಕ್ಮೇಲ್ ಸರ್ಕಾರ, 40 ಪರ್ಸೆಂಟ್ ಕಮಿಷನ್ ಸರ್ಕಾರ, ತಳ್ಳುವ ಸರ್ಕಾರ, ಸಿಡಿ ಸರ್ಕಾರ. ಇವೆಲ್ಲವೂ ಬಿಜೆಪಿಯವರೇ ತಮ್ಮ ಸರ್ಕಾರಕ್ಕೆ ನೀಡಿದ ಬಿರುದುಗಳು. ವಚನಭ್ರಷ್ಟತೆಯ ಬಗ್ಗೆ, ವೈಫಲ್ಯದ ಸತ್ಯದ ಬಗ್ಗೆ, ಭ್ರಷ್ಟಾಚಾರದ ಬಗ್ಗೆ ಮಾತನಾಡಲೂ ಸಹ ಕಮಿಷನ್ ನೀಡಬೇಕೇ ಬಿಜೆಪಿ ಸರ್ಕಾರಕ್ಕೆ' ಎಂದು ಕೆಪಿಸಿಸಿ ಟ್ವೀಟಿಸಿದೆ.
'ಮ್ಯಾನೇಜ್ಮೆಂಟ್ ಸರ್ಕಾರದ ವೈಫಲ್ಯಗಳನ್ನು ಸಚಿವ ಮಾಧುಸ್ವಾಮಿ ಅವರೇ ಒಪ್ಪಿಕೊಳ್ಳುವ ಅನಿವಾರ್ಯತೆ ಇದೆ ಎಂದಾದರೆ ಸರ್ಕಾರದ ನಿಷ್ಕ್ರಿಯತೆ ಎಷ್ಟೆಂದು ಊಹಿಸಬಹುದು. ಸ್ವಚ್ಛ ಭಾರತ ಅನುಷ್ಠಾನದಲ್ಲಿ ಕರ್ನಾಟಕ ಕಳಪೆ ಸಾಧನೆ ತೋರಿದೆ, ಇದೇನಾ ಡಬಲ್ ಇಂಜಿನ್ ಅಭಿವೃದ್ಧಿ? ಪ್ರಧಾನಿ ಬಂದು ಇಲ್ಲಿ ಭಾಷಣ ಬಿಗಿಯುವಾಗ ಈ ಸಂಗತಿಗಳನ್ನು ನೆನಪಿಸುವಿರಾ ಬಿಜೆಪಿಯವರೇ' ಎಂದು ಪ್ರಶ್ನಿಸಿದೆ.

'ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಬೇಡಿಕೆಗಳ ಪೂರೈಸಲು ಸಮಿತಿ ರಚಿಸಿ, ಪರಿಹಾರ ಒದಗಿಸುತ್ತೇವೆ ಎಂದಿತ್ತು ಬಿಜೆಪಿ. ಅವರು ಬೀದಿಗಿಳಿದು ವಾರಗಟ್ಟಲೆ ಹೋರಾಟ ಮಾಡಿದ್ದರು. ಅವರ ಗೋಳು ಕೇಳಲು ಯಾವ ಸಮಿತಿಯೂ ಬರಲಿಲ್ಲ. ಯಾವ ಸಚಿವರೂ ಕೇಳಲಿಲ್ಲ. ಸಮಿತಿ ರಚನೆಗೆ ಇನ್ನೂ ಮುಹೂರ್ತ ಕೂಡಿ ಬರಲಿಲ್ಲವೇ' ಎಂದು ಬಿಜೆಪಿ ಸರ್ಕಾರಕ್ಕೆ ಕೆಪಿಸಿಸಿ ಕೇಳಿದೆ.
ಕರ್ನಾಟಕದಲ್ಲಿರುವುದು ಕಡುಭ್ರಷ್ಟ ಸರ್ಕಾರ: ರಾಹುಲ್ ಗಾಂಧಿ
ಭಾರತ್ ಜೋಡೊ ಯಾತ್ರೆಯ ನೇತೃತ್ವ ವಹಿಸಿರುವ ಕಾಂಗ್ರೆಸ್ ರಾಹುಲ್ ಗಾಂಧಿ, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರದ ವಿರುದ್ಧ ಕಳೆದ ವಾರ ಹರಿಹಾಯ್ದಿದ್ದರು.
ಕರ್ನಾಟಕದಲ್ಲಿ ಆಡಳಿತ ನಡೆಸುತ್ತಿರುವುದು ಕಡುಭ್ರಷ್ಟ ಸರ್ಕಾರವಾಗಿದೆ. ಇಲ್ಲಿ ಸರ್ಕಾರಿ ಉದ್ಯೋಗಗಳನ್ನು ಪಡೆದುಕೊಳ್ಳಲು ಲಂಚ ನೀಡಬೇಕಿರುವ ಅನಿವಾರ್ಯತೆ ಇದೆ. ಪಿಎಸ್ಐ ಹುದ್ದೆಗೆ ಲಕ್ಷಾಂತರ ರುಪಾಯಿಗಳನ್ನು ನೀಡಬೇಕಿದೆ. ರಾಜ್ಯದಲ್ಲಿ ಯಾವುದೇ ಕೆಲಸ ನಡೆಯಬೇಕೆಂದರೆ 40 ಪರ್ಸೆಂಟ್ ಹಣವನ್ನು ಕಮಿಷನ್ ರೂಪದಲ್ಲಿ ಕೊಡಬೇಕಿದೆ ಎಂದು ವಾಗ್ದಾಳಿ ನಡೆಸಿದ್ದರು.












Click it and Unblock the Notifications