ರಾಜೀನಾಮೆ ನೀಡಲು ಮುಂದಾಗಿದ್ದ ಸಚಿವ ಪ್ರಿಯಾಂಕ್ ಖರ್ಗೆ? ಕಾರಣ ಏನು?
Recommended Video

ಬೆಂಗಳೂರು, ಸೆಪ್ಟೆಂಬರ್ 22: ಯಾವ ಶಾಸಕರು ಯಾವಾಗ ರಾಜೀನಾಮೆ ನೀಡಿ ಸರ್ಕಾರ ಬೀಳಿಸುತ್ತಾರೋ ಎಂದು ಕಾಂಗ್ರೆಸ್-ಜೆಡಿಎಸ್ ಹೆದರಿ ಕೂತಿರುವ ಸಮಯದಲ್ಲೇ ಕಾಂಗ್ರೆಸ್ನ ಸಚಿವರೇ ಒಬ್ಬರು ಕೆಲವು ಹಿಂದೆ ರಾಜೀನಾಮೆಗೆ ಮುಂದಾಗಿದ್ದರು ಎಂಬ ಸುದ್ದಿ ತಡವಾಗಿ ಬೆಳಕಿಗೆ ಬಂದಿದೆ.
ಗುರುವಾರ ರಾತ್ರಿ ನಡೆದ ಸಂಪುಟ ಸಭೆಯಲ್ಲಿ ಕಾಂಗ್ರೆಸ್ನ ಸಮಾಜ ಕಲ್ಯಾಣ ಖಾತೆ ಸಚಿವ ಪ್ರಿಯಾಂಕ್ ಖರ್ಗೆ ಅವರೇ ರಾಜೀನಾಮೆ ನೀಡುವ ಮಾತನಾಡಿದ್ದರು ಎಂಬುದು ಬೆಳಕಿಗೆ ಬಂದಿದೆ. ಆದರೆ ರಾಜೀನಾಮೆಗೆ ಕಾರಣ ಸರ್ಕಾರ ಉರುಳಿಸುವುದಲ್ಲ, ಬದಲಿಗೆ ಕಾಯ್ದೆಯೊಂದರ ಜಾರಿಗೆ ಒತ್ತಡ ಹೇರುವುದು ಆಗಿತ್ತು.
ಹೌದು, ಪರಿಶಿಷ್ಟ ಜಾತಿ, ವರ್ಗದ ಅಧಿಕಾರಿಗಳಿಗೆ ಬಡ್ತಿ ವಿಷಯದ ಬಗ್ಗೆ ಮೈತ್ರಿ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದರಿಂದ ಬೇಸತ್ತ ಪ್ರಿಯಾಂಕ್ ಖರ್ಗೆ ಅವರು ಸಂಪುಟ ಸಭೆಯಲ್ಲಿ ರಾಜೀನಾಮೆ ಬೆದರಿಕೆ ಹಾಕಿದ್ದಾರೆ.

ದಲಿತ, ಹಿಂದಿಳಿದ ಅಧಿಕಾರಿಗಳ ಬಡ್ತಿ ವಿಚಾರ
ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲವು ಪ್ರಕರಣವನ್ನು ಸರ್ಕಾರದ ವಿವೇಚನೆಗೆ ಬಿಟ್ಟಿದೆ. ಅಲ್ಲದೆ ದಲಿತ, ಹಿಂದುಳಿದ ಅಧಿಕಾರಿಗಳಿಗೆ ಬಡ್ತಿ ನೀಡಬಾರದು ಎಂದು ಆದೇಶವನ್ನೂ ಹೊರಡಿಸಿಲ್ಲ ಆದರೂ ಸಹ ಮೈತ್ರಿ ಸರ್ಕಾರ ಈ ಬಗ್ಗೆ ಸ್ಪಷ್ಟ ನಿಲುವು ತಳೆದು ದಲಿತರಿಗೆ ಬಡ್ತಿ ನೀಡಲು ಆಸಕ್ತಿ ತೋರುತ್ತಿಲ್ಲ ಎಂದು ಖರ್ಗೆ ಸಂಪುಟ ಸಭೆಯಲ್ಲಿ ಅಸಮಾಧಾನ ಹೊರಹಾಕಿದ್ದಾರೆ. ಅವರಿಗೆ ಉಪಮುಖ್ಯಮಂತ್ರಿ ಪರಮೇಶ್ವರ್ ಸಹ ಬೆಂಬಲ ನೀಡಿದ್ದಾರೆ.

'ದಲಿತರ ಹಿತ ಕಾಯದ ಮೇಲೆ ಅಧಿಕಾರ ಬೇಡ'
ದಲಿತರ ಹಿತ ಕಾಯದೇ ಇದ್ದ ಮೇಲೆ ನಾನು ಸಚಿವನಾಗಿದ್ದು ಏನು ಪ್ರಯೋಜನ ಎಂದು ಭಾವಾವೇಶದಿಂದ ನುಡಿದ ಪ್ರಿಯಾಂಕ್ ಖರ್ಗೆ ಅವರು ರಾಜೀನಾಮೆಗೆ ಮುಂದಾಗಿದ್ದರು. ಆದರೆ ಸಿಎಂ ಕುಮಾರಸ್ವಾಮಿ ಅವರು ಪ್ರಿಯಾಂಕ್ ಖರ್ಗೆ ಅವರ ಮನವೊಲಿಸಿದರು.

ಸಮಾಧಾನಪಡಿಸಿದ ಕುಮಾರಸ್ವಾಮಿ
ಈ ಪ್ರಕರಣದ ಬಗ್ಗೆ ಈ ಕೂಡಲೇ ಕಾನೂನು ತಜ್ಞರ ಸಮಿತಿ ರಚಿಸಿ ಸಭೆ ಕರೆದು ಸಾಧಕ, ಭಾದಕ ಚರ್ಚಿಸಿ ಜಾರಿಗೆ ತರಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಅವರು ಪ್ರಿಯಾಂಕ್ ಖರ್ಗೆ ಹಾಗೂ ಪರಮೇಶ್ವರ್ ಅವರಿಗೆ ಭರವಸೆ ನೀಡಿದ್ದಾರೆ.

'ಒಬ್ಬನ ರಾಜೀನಾಮೆಯಿಂದ ಏನೂ ಆಗದು'
ತಮ್ಮ ರಾಜೀನಾಮೆ ಬೆದರಿಕೆ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ ಅವರು, ಒಬ್ಬ ಸಚಿವನ ರಾಜೀನಾಮೆಯಿಂದ ಸರ್ಕಾರಕ್ಕೆ ಏನೂ ಆಗುವುದಿಲ್ಲ ಎಂದು ಅಸಮಾಧಾನದಿಂದಲೇ ನುಡಿದಿದ್ದಾರೆ. ಪ್ರಿಯಾಂಕ್ ಖರ್ಗೆ ಅವರು ಸರ್ಕಾರದ ಮೇಲಿನ ಅಸಮಾಧಾನವನ್ನು ಕಾಯ್ದೆಯ ನೆಪದೊಂದಿಗೆ ತೀರಿಸಿಕೋಳ್ಳಲು ಯತ್ನಿಸುತ್ತಿದ್ದಾರೆ ಎಂಬ ಅನುಮಾನುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.












Click it and Unblock the Notifications