ದೆಹಲಿಯಲ್ಲಿ ಕಾಂಗ್ರೆಸ್ ನಾಯಕರ ಸಭೆ; ರಹಸ್ಯ ಬಿಚ್ಚಿಟ್ಟ ಬಿಜೆಪಿ!
ಬೆಂಗಳೂರು, ಡಿಸೆಂಬರ್ 14; ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನವದೆಹಲಿಯಲ್ಲಿ ಕರ್ನಾಟಕ ಕಾಂಗ್ರೆಸ್ ನಾಯಕರ ಸಭೆ ನಡೆಯಿತು. ಈ ಸಭೆಯ ರಹಸ್ಯವನ್ನು ಕರ್ನಾಟಕ ಬಿಜೆಪಿ ಟ್ವೀಟ್ ಮೂಲಕ ಬಿಚ್ಚಿಟ್ಟಿದೆ, ಕಾಂಗ್ರೆಸ್ ನಾಯಕರ ವಿರುದ್ಧ ಟೀಕೆ ಮಾಡಿದೆ.
ಬುಧವಾರ ಸರಣಿ ಟ್ವೀಟ್ ಮಾಡಿರುವ ಕರ್ನಾಟಕ ಬಿಜೆಪಿ, 'ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ನ ಒಳಜಗಳ ದಿನೇ ದಿನೆ ಹೆಚ್ಚಾಗಿ ಬೀದಿರಂಪವಾಗುತ್ತಿದೆ. ಇವರೆಲ್ಲ ದೇಶೋದ್ಧಾರಕ್ಕಾಗಿ ಗುದ್ದಾಡಿಕೊಳ್ಳುತ್ತಿಲ್ಲ' ಎಂದು ವ್ಯಂಗ್ಯವಾಡಿದೆ.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಜಗಳ ಬೀದಿಗೆ ಬಂದಿದೆ ಎಂದು ಕರ್ನಾಟಕ ಬಿಜೆಪಿ ಟ್ವೀಟ್ನಲ್ಲಿ ಹೇಳಿದೆ. ಉಭಯನಾಯಕರ ಜಗಳದ 'ತಾಜಾ ವಿವರಗಳು ನಿಮ್ಮ ಮುಂದೆ ಇಡ್ತೀವಿ ಕೇಳಿ' ಎಂದು ಬಿಜೆಪಿ ಹೇಳಿದೆ.
ಕರ್ನಾಟಕದಲ್ಲಿ 2023ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಕುರಿತು ಚರ್ಚಿಸಲು ಸೋಮವಾರ ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಡಿ. ಕೆ. ಶಿವಕುಮಾರ್, ಕೆ. ಸಿ. ವೇಣುಗೋಪಾಲ್, ಸಿದ್ದರಾಮಯ್ಯ ಸೇರಿದಂತೆ ವಿವಿಧ ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ಕರ್ನಾಟಕ ಬಿಜೆಪಿ ಮೊದಲ ಟ್ವೀಟ್
ಬುಧವಾರ ಮೊದಲ ಟ್ವೀಟ್ನಲ್ಲಿ ಕರ್ನಾಟಕ ಬಿಜೆಪಿ, 'ಚುನಾವಣೆ ಹತ್ತಿರ ಬರುತ್ತಿದ್ದಂತೆ ಕಾಂಗ್ರೆಸ್ನ ಒಳಜಗಳ ದಿನೇ ದಿನೆ ಹೆಚ್ಚಾಗಿ ಬೀದಿರಂಪವಾಗುತ್ತಿದೆ. ಇವರೆಲ್ಲ ದೇಶೋದ್ಧಾರಕ್ಕಾಗಿ ಗುದ್ದಾಡಿಕೊಳ್ಳುತ್ತಿಲ್ಲ. ಬದಲಿಗೆ ದೊಡ್ಡ ನಾಯಕರೆನಿಸಿಕೊಂಡವರು ಕೇವಲ ಅಧಿಕಾರಕ್ಕಾಗಿ ಮುನಿಸು-ಜಗಳ ಆರಂಭಿಸಿದ್ದಾರೆ. ಇದರ ತಾಜಾ ವಿವರಗಳು ನಿಮ್ಮ ಮುಂದೆ ಇಡ್ತೀವಿ ಕೇಳಿ' ಎಂದು ಹೇಳಿದೆ.

ಕಾಂಗ್ರೆಸ್ ಸಭೆಯ ರಹಸ್ಯ ಬಯಲು
ಕರ್ನಾಟಕ ಬಿಜೆಪಿ ಮತ್ತೊಂದು ಟ್ವೀಟ್ನಲ್ಲಿ ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಜಗಳ ಬೀದಿಗೆ ಬರುತ್ತಿದ್ದಂತೆ ಎಲ್ಲಿ ತನ್ನ ಮಗನ ಪ್ರಧಾನಿ ಕನಸು ಬೀದಿಪಾಲು ಆದೀತು ಎಂದು ಬೆದರಿದ ಸೋನಿಯಾ ಗಾಂಧಿ, ತಕ್ಷಣವೇ ತಮ್ಮ 'ಕೈ'ಗೊಂಬೆ ಮಲ್ಲಿಕಾರ್ಜುನ ಖರ್ಗೆಯವರನ್ನು ಕರೆಸಿ, ಜಗಳ ಬಂದ್ ಮಾಡಿಸಲು ತಾಕೀತು ಮಾಡಿದ್ದಾರೆ. ಇದಕ್ಕೆ 'ಜೀ ಹುಜೂರ್' ಎಂದು ಸಭೆ ಕರೆಸಿದ್ದು ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಬಿಜೆಪಿಯ 3ನೇ ಟ್ವೀಟ್
ಕರ್ನಾಟಕ ಬಿಜೆಪಿ ತನ್ನ ಮೂರನೇ ಟ್ವೀಟ್ನಲ್ಲಿ ಒಟ್ಟಾರೆಯಾಗಿ ಕಾಂಗ್ರೆಸ್ ನಾಯಕರ ಪ್ರಕಾರ ಕರ್ನಾಟಕ ಕಾಂಗ್ರೆಸ್ ಎಂಬುದು ದೇಶದ ಅಭಿವೃದ್ಧಿ ಮಾಡುವ ಯಾವುದೇ "ದುರುದ್ದೇಶ"ಗಳೇ ಇಲ್ಲದ ಶುದ್ಧ ಮನಸ್ಸಿನ ಭ್ರಷ್ಟ ಪಕ್ಷ. ಕರ್ನಾಟಕವನ್ನು ಎಟಿಎಂ ಮಾಡಿಕೊಳ್ಳುವ ಇವರ ಹುನ್ನಾರ ಇದೀಗ ಬಯಲಾಗಿದೆ. ಗುಜರಾತ್ನಲ್ಲಾದಂತೆ, ಕರ್ನಾಟಕದಲ್ಲೂ ಜನರು ಪಾಠ ಕಲಿಸುತ್ತಾರೆ ಎಂದು ಹೇಳಿದೆ.

ಚುನಾವಣೆಗೆ ತಿಂಗಳುಗಳು ಬಾಕಿ
ಗುಜರಾತ್, ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಬಳಿಕ ಕಾಂಗ್ರೆಸ್ ಪಕ್ಷ ಕರ್ನಾಟಕದತ್ತ ಗಮನಹರಿಸಿದೆ. ಹಿಮಾಚಲದಂತೆ ಕರ್ನಾಟಕದಲ್ಲಿಯೂ ಜಯಗಳಿಸಿ ಸರ್ಕಾರ ರಚನೆ ಮಾಡುವ ಉತ್ಸಾಹದಲ್ಲಿ ಪಕ್ಷವಿದೆ.
ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ದೆಹಲಿಯಲ್ಲಿ ಸೋಮವಾರ ಕಾಂಗ್ರೆಸ್ ನಾಯಕರ ಸಭೆ ನಡೆಯಿತು. ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಬಸ್ ಯಾತ್ರೆ, ಅಭ್ಯರ್ಥಿಗಳ ಆಯ್ಕೆ, ರಾಹುಲ್ ಗಾಂಧಿ ರಾಜ್ಯ ಪ್ರವಾಸ ಸೇರಿದಂತೆ ವಿವಿಧ ವಿಚಾರಗಳ ಕುರಿತು ಸಭೆಯಲ್ಲಿ ವಿವಿರವಾದ ಚರ್ಚೆಗಳು ನಡೆದಿವೆ.

75 ದಿನಗಳ ಕಾರ್ಯಸೂಚಿ
2023ರ ವಿಧಾನಸಭೆ ಚುನಾವಣೆ ತಯಾರಿ ಆರಂಭ ಮಾಡಿರುವ ಕಾಂಗ್ರೆಸ್ ಪಕ್ಷ 75 ದಿನಗಳ ಕಾರ್ಯಸೂಚಿ ಸಿದ್ಧಪಡಿಸಿದೆ. ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಈ ಕುರಿತು ಮಾಹಿತಿ ನೀಡಿದ್ದಾರೆ.
"ಕರ್ನಾಟಕ ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಸರ್ಕಾರವಾಗಿದೆ. ಸರ್ಕಾರದ ಶೇ 40ರಷ್ಟು ಭ್ರಷ್ಟಾಚಾರವನ್ನು ಮನೆ ಮನೆಗೆ ತಲುಪಿಸಲು ಪಕ್ಷ ಕಾರ್ಯತಂತ್ರ ರೂಪಿಸಿದೆ" ಎಂದು ಹೇಳಿದ್ದಾರೆ.












Click it and Unblock the Notifications