ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ ಹರಪನಹಳ್ಳಿ ಪಕ್ಷೇತರ ಶಾಸಕಿ ಲತಾ ಮಲ್ಲಿಕಾರ್ಜುನ- ಕಾಂಗ್ರೆಸ್‌ಗೆ ಇನ್ನಷ್ಟು ಬಲ

ಬೆಂಗಳೂರು, ಮೇ 14: ಹರಪನಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಲತಾ ಮಲ್ಲಿಕಾರ್ಜುನ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಶುಭಾಶಯ ಕೋರಿದ್ದಾರೆ. ಲತಾ ಮಲ್ಲಿಕಾರ್ಜುನ ಅವರು ಮಾಜಿ ಸಚಿವ, ಸಿದ್ದರಾಮಯ್ಯ ಆಪ್ತರಾಗಿದ್ದ ಎಂ ಪಿ ಪ್ರಕಾಶ್‌ ಅವರ ಮಗಳು. ಅವರು ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದರು.

ಈ ವಿಚಾರವಾಗಿ ಫೋಟೊವೊಂದನ್ನು ಟ್ವೀಟ್‌ ಮಾಡಿರುವ ಸಿದ್ದರಾಮಯ್ಯ, ಹರಪನಹಳ್ಳಿ ಕ್ಷೇತ್ರದಿಂದ ವಿಧಾನಸಭೆಗೆ ಪಕ್ಷೇತರ ಅಭ್ಯರ್ಥಿಯಾಗಿ ಆಯ್ಕೆಯಾಗಿರುವ ಲತಾ ಮಲ್ಲಿಕಾರ್ಜುನ ಅವರು ಇಂದು ನನ್ನನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಅವರಿಗೆ ಶುಭ ಹಾರೈಸಿದೆ' ಎಂದು ತಿಳಿಸಿದ್ದಾರೆ. ಶಾಸಕರಾಗಿ ಆಯ್ಕೆಯಾಗಿರುವ ಲತಾ ಮಲ್ಲಿಕಾರ್ಜುನ ಅವರು ಕಾಂಗ್ರೆಸ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ.

congress leader Siddaramaiah

ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮಹತ್ವಪೂರ್ಣ ವಿಜಯವನ್ನು ಕಾಂಗ್ರೆಸ್‌ ತನ್ನದಾಗಿಸಿಕೊಂಡಿದೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷವು ಕಳೆದ ವರ್ಷ ಹಿಮಾಚಲ ಪ್ರದೇಶದ ನಂತರ ಕರ್ನಾಟಕವನ್ನು ಕಳೆದುಕೊಂಡಿದೆ. ಕರ್ನಾಟಕದಲ್ಲಿ 69 ಸ್ಥಾನಗಳ ಅಂತರದಿಂದ ಸೋತಿದೆ.

ರಾಜ್ಯದಲ್ಲಿ ಕಾಂಗ್ರೆಸ್ ತನ್ನ ಇಬ್ಬರು ಪ್ರಮುಖ ನಾಯಕರಾದ ಡಿಕೆ ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರಲ್ಲಿ ಮುಖ್ಯಮಂತ್ರಿಯಾಗಿ ಒಬ್ಬರನ್ನು ಆಯ್ಕೆ ಮಾಡಬೇಕಿದೆ. ಇಂದು ಸಂಜೆ ಶಾಸಕಾಂಗ ಸಭೆ ಇದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಚುನಾಯಿತರಾದ ಶಾಸಕರು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ.

ಗೆಲುವು ಸಾಧಿಸಿದ ನಂತರ ಸಿದ್ದರಾಮಯ್ಯನವರು ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಒಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಅವರು ಕನ್ನಡಿಗರಿಗೆ ಧನ್ಯವಾದ ಹೇಳಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ ತಿಳಿಯಿರಿ.

congress leader Siddaramaiah

'ಈ ಫಲಿತಾಂಶ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುವಾದದ ವಿರುದ್ಧದ ಫಲಿತಾಂಶ. ಇದು ಕೇವಲ ಕಾಂಗ್ರೆಸ್ ಪಕ್ಷದ ಗೆಲುವಲ್ಲ, ಇದು ಕರ್ನಾಟಕದ ಗೆಲುವು. ಕನ್ನಡಿಗರ ಗೆಲುವು, ಪ್ರಜಾಪ್ರಭುತ್ವದ ಗೆಲುವು. ಈ ಗೆಲುವಿಗಾಗಿ ರಾಜ್ಯದ ಸಮಸ್ತ ಕನ್ನಡಿಗರೂ ಅಭಿನಂದಿಸುತ್ತೇನೆ.

ಯಾವುದೇ ಚುನಾವಣೆಯಲ್ಲಿ ಕೇವಲ ರಾಜಕೀಯ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಮಾತ್ರವಲ್ಲ ಲಕ್ಷಾಂತರ ಸಂಖ್ಯೆಯಲ್ಲಿ ಪಕ್ಷದ ಕಾರ್ಯಕರ್ತರಲ್ಲದ ಅಭಿಮಾನಿಗಳು ರಾತ್ರಿ ಹಗಲು ಶ್ರಮಪಟ್ಟಿರುತ್ತಾರೆ. ಅವರೆಲ್ಲರಿಗೂ ತುಂಬು ಹೃದಯದ ಕೃತಜ್ಞತೆಗಳು.

ಈ ಚುನಾವಣೆಯಲ್ಲಿ ನಮ್ಮ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕ ಗಾಂಧಿ ಅವರು ನಡೆಸಿರುವ ಪ್ರಯತ್ನವನ್ನು ಮರೆಯಲಾಗದು. ಬಹಳ ಮುಖ್ಯವಾಗಿ ಕರ್ನಾಟಕದ ಚುನಾವಣಾ ಪ್ರಚಾರ ಪ್ರಾರಂಭವಾಗಿದ್ದೇ ರಾಹುಲ್ ಗಾಂಧಿಯವರ ಭಾರತ ಜೋಡೋ ಯಾತ್ರೆಯಿಂದ. ಈ ಯಾತ್ರೆ ಇಡೀ ಕರ್ನಾಟಕದಲ್ಲಿ ಸಂಚಲನ ಉಂಟುಮಾಡಿತ್ತು. ನಮ್ಮ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿತ್ತು. ಈ ಫಲಿತಾಂಶದ ಶ್ರೇಯಸ್ಸು ಅವರಿಗೂ ಸಲ್ಲುತ್ತದೆ.

congress leader Siddaramaiah

ಅದೇ ರೀತಿ ಪ್ರಿಯಾಂಕ ಗಾಂಧಿಯವರ ಚುನಾವಣಾ ಪ್ರಚಾರ ಈ ಬಾರಿಯ ಹೊಸ ಆಕರ್ಷಣೆಯಾಗಿತ್ತು. ಬಹಳ ಮುಖ್ಯವಾಗಿ ಮಹಿಳಾ ಮತದಾರರ ಮೇಲೆ ಪ್ರಿಯಾಂಕ ಪ್ರಭಾವ ಬೀರಿದ್ದರು. ಅವರನ್ನು ನೋಡಿದ್ದ ಬಹಳಷ್ಟು ಮತದಾರರು ಶ್ರೀಮತಿ ಇಂದಿರಾ ಗಾಂಧಿಯವರನ್ನು ನೆನಪು ಮಾಡಿಕೊಂಡಿದ್ದರು. ಪಕ್ಷ ಪ್ರಿಯಾಂಕ ಗಾಂಧಿಯವರಿಗೆ ಕೃತಜ್ಞವಾಗಿದೆ.

ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಕೂಡಾ ತಮ್ಮೆಲ್ಲ ಬಿಡುವಿರದ ಕಾರ್ಯಕ್ರಮಗಳ ನಡುವೆಯೂ ರಾಜ್ಯಕ್ಕೆ ಬಂದು ಪ್ರಚಾರ ನಡೆಸಿದ್ದಾರೆ. ಕನ್ನಡಿಗನೊಬ್ಬ ಎಐಸಿಸಿ ಅಧ್ಯಕ್ಷರಾಗಿರುವುದು ಕೂಡಾ ಕನ್ನಡಿಗ ಮತದಾರರ ಮೇಲೆ ಪ್ರಭಾವ ಬೀರಿದಂತೆ ಕಾಣುತ್ತಿದೆ.

ಈ ಫಲಿತಾಂಶ ಅನಿರೀಕ್ಷಿತ ಅಲ್ಲ. ಜನರ ಜೊತೆ ಸಂಪರ್ಕದಲ್ಲಿರುವವರಿಗೆ ಇದು ನಿರೀಕ್ಷಿತ ಫಲಿತಾಂಶ. ಭ್ರಷ್ಟಾಚಾರ, ಬೆಲೆ ಏರಿಕೆ, ಕೋಮುವಾದ, ಕನ್ನಡ-ಕನ್ನಡಿಗ ವಿರೋಧಿ ನಿಲುವು, ದುರಾಡಳಿತ ಹೀಗೆ ಪ್ರತಿಯೊಂದು ವಿಷಯದಲ್ಲಿಯೂ ಜನ ರೋಸಿಹೋಗಿದ್ದರು. ರೈತರು, ಕಾರ್ಮಿಕರು, ಮಹಿಳೆಯರು, ಯುವಕರು ಹೀಗೆ ಪ್ರತಿಯೊಂದು ವರ್ಗದ ಜನ ಕೂಡಾ ಬಿಜೆಪಿ ಪಕ್ಷದ ಸೋಲನ್ನು ಬಯಸಿದ್ದರು.

ನಾಲ್ಕು ವರ್ಷಗಳ ಬಿಜೆಪಿ ಆಳ್ವಿಕೆಯಲ್ಲಿ ಕರ್ನಾಟಕ ಖಂಡಿತ ಹತ್ತು ವರ್ಷಗಳಷ್ಟು ಹಿಂದಕ್ಕೆ ಹೋಗಿದೆ, ಭ್ರಷ್ಟಾಚಾರ ಮತ್ತು ದುರಾಡಳಿತದಿಂದಾಗಿ ರಾಜ್ಯದ ಆರ್ಥಿಕ ಸ್ಥಿತಿ ಸಂಪೂರ್ಣ ಹದಗೆಟ್ಟಿ ಹೋಗಿದೆ. ಇವುಗಳನ್ನೆಲ್ಲ ಹಳಿಗೆ ಕರೆತರುವ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಆದರೆ ಈ ಫಲಿತಾಂಶ ಕೇವಲ ಬಿಜೆಪಿ ದುರಾಡಳಿತದ ವಿರುದ್ಧದ ಜನಮತ ಮಾತ್ರ ಅಲ್ಲ, ಇದು ಕಾಂಗ್ರೆಸ್ ಪಕ್ಷದ ಪರವಾಗಿರುವ ಫಲಿತಾಂಶ ಕೂಡಾ ಹೌದು.

ಇದು ಸುಭದ್ರ ಸರ್ಕಾರಕ್ಕಾಗಿ ಜನ ನೀಡಿರುವ ಮತಗಳಾಗಿವೆ. ಕಳೆದ ನಾಲ್ಕು ವರ್ಷಗಳ ಬಿಜೆಪಿ ಆಡಳಿತವನ್ನು ರಾಜ್ಯದ ಮತದಾರರು 2013ರಿಂದ 2018ರ ಕಾಂಗ್ರೆಸ್ ಆಡಳಿತದ ಜೊತೆ ಖಂಡಿತ ಹೋಲಿಸಿ ಮತನೀಡಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಹೊರತುಪಡಿಸಿದರೆ ರಾಜ್ಯದಲ್ಲಿ ಬೇರೆ ಯಾವ ಪಕ್ಷಗಳು ಕೂಡಾ ಸುಭದ್ರ ಸರ್ಕಾರ ನೀಡಿರುವ ಉದಾಹರಣೆಗಳಿಲ್ಲ.

2013-2018ರ ಅವಧಿಯ ನಮ್ಮ ಆಡಳಿತದಲ್ಲಿ ನಾವು ಜನತೆಗೆ ನೀಡಿದ್ದ ಎಲ್ಲ ಭರವಸೆಗಳನ್ನೂ ಈಡೇರಿಸಿದ್ದೇವೆ. ನಮ್ಮ ದಕ್ಷ ಮತ್ತು ಜನಪರ ಆಡಳಿತವನ್ನು ಜನ ಮರೆತಿಲ್ಲ ಎನ್ನುವುದನ್ನು ಕೂಡಾ ಫಲಿತಾಂಶ ತೋರಿಸುತ್ತಿದೆ. ಆದ್ದರಿಂದ ಈ ಫಲಿತಾಂಶ ಕೇವಲ ನೆಗೆಟಿವ್ ವೋಟ್ ಅಲ್ಲ, ಇದು ಪಾಸಿಟಿವ್ ವೋಟ್ ಕೂಡಾ ಹೌದು ಎನ್ನುವುದು ನನ್ನ ಅಭಿಪ್ರಾಯ. ರಾಜ್ಯದಲ್ಲಿ ಧರ್ಮ ವಿಭಜನೆ ಮತ್ತು ಧರ್ಮ ದ್ವೇಷದ ಹಿಂದುತ್ವದ ರಾಜಕೀಯವನ್ನು ರಾಜ್ಯದ ಮತದಾರರು ತಿರಸ್ಕರಿಸಿದ್ದಾರೆ.

ರಾಜ್ಯದ ಮತದಾರರು ಬಿಜೆಪಿಯ ಹಿಂದುತ್ವದ ರಾಜಕೀಯವನ್ನು ತಿರಸ್ಕರಿಸಿ ಕಾಂಗ್ರೆಸ್ ಪಕ್ಷದ ಬಂಧುತ್ವದ ರಾಜಕೀಯವನ್ನು ಪುರಸ್ಕರಿಸಿದ್ದಾರೆ. ಈ ಫಲಿತಾಂಶ ಕೇವಲ ಬಿಜೆಪಿಯ ಭ್ರಷ್ಟಾಚಾರ, ದುರಾಡಳಿತ ಮತ್ತು ಕೋಮುದ್ವೇಷದ ವಿರುದ್ಧದ ಜನಮತ ಮಾತ್ರ ಅಲ್ಲ, ಇದು ಜೆಡಿಎಸ್ ಪಕ್ಷದ ಸ್ವಾರ್ಥ ಮತ್ತು ಅವಕಾಶವಾದಿ ರಾಜಕಾರಣದ ವಿರುದ್ಧದ ಜನಮತ ಕೂಡಾ ಹೌದು.

ನಮ್ಮ ಸರ್ಕಾರದ ಮೇಲೆ ದೊಡ್ಡ ಜವಾಬ್ದಾರಿ ಇದೆ. ಪ್ರಣಾಳಿಕೆಯ ಮೂಲಕ ರಾಜ್ಯದ ಜನತೆಗೆ ನೀಡಿರುವ ಭರವಸೆಗಳನ್ನು ನಾವು ಈಡೇರಿಸುತ್ತೇವೆ ಎನ್ನುವುದನ್ನು ರಾಜ್ಯದ ಮತದಾರರು ಬಲವಾಗಿ ನಂಬಿದ್ದಾರೆ. ಇದಕ್ಕೆ ಕಾರಣ ಹಿಂದಿನ ನಮ್ಮ ಸರ್ಕಾರದ ಕಾಲದಲ್ಲಿ ನಾವು ಪ್ರಣಾಳಿಕೆಯ ಮೂಲಕ ನೀಡಿರುವ ಎಲ್ಲ ಭರವಸೆಗಳನ್ನು ಈಡೇರಿಸಿರುವುದು.

ಪ್ರಣಾಳಿಕೆಯಲ್ಲಿ ನೀಡಿರುವ ಎಲ್ಲ ಭರವಸೆಗಳನ್ನು ನಾವು ಈಡೇರಿಸುತ್ತೇವೆ. ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ನಮ್ಮ ಐದು ಗ್ಯಾರಂಟಿಗಳನ್ನು ಜಾರಿಗೆ ತರುತ್ತೇವೆ. ರಾಜ್ಯದ ಜನತೆ ಇನ್ನು ನೆಮ್ಮದಿಯಿಂದ ಇರಬಹುದು. ರಾಜ್ಯದ ಜನತೆಯ ಕಲ್ಯಾಣ ಮಾತ್ರವಲ್ಲ ಶಾಂತಿ, ನೆಮ್ಮದಿ ಮತ್ತು ಸೌಹಾರ್ದತೆಯ ಬದುಕು ಕೂಡಾ ನಮ್ಮ ಗ್ಯಾರಂಟಿ.

ನಮ್ಮ ಪಕ್ಷದ ಕಾರ್ಯಕರ್ತರು ಸಂಯಮದಿಂದ ವಿಜಯೋತ್ಸವವನ್ನು ಆಚರಿಸಬೇಕು. ಎದುರಾಳಿಗಳು ಸೋಲಿನ ಹತಾಶೆಯಿಂದ ಪ್ರಚೋದಿಸಿದರೂ ನಮ್ಮ ಕಾರ್ಯಕರ್ತರು ಅಹಿತಕರ ಘಟನೆಗಳಿಗೆ ಅವಕಾಶ ನೀಡಬಾರದು. ಕಾಂಗ್ರೆಸ್ ಪಕ್ಷದ ಅಭೂತಪೂರ್ವ ಗೆಲುವಿಗಾಗಿ ದುಡಿದ ಪಕ್ಷದ ಕಾರ್ಯಕರ್ತರಿಗೂ, ಮುಖಂಡರಿಗೂ, ನಾಯಕರಿಗೂ ಹಾಗೂ ಮತನೀಡಿ ಆಶೀರ್ವದಿಸಿದ ಎಲ್ಲಾ ಮತದಾರ ಬಂಧುಗಳಿಗೂ ಮತ್ತೊಮ್ಮೆ ಧನ್ಯವಾದಗಳು. ನಾಡಿನ ಸಮಗ್ರ ಅಭಿವೃದ್ಧಿಯೇ ನಮ್ಮ ಆದ್ಯತೆ. ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+