ಅಸ್ತಿತ್ವಕ್ಕೆ ಬಂದಿಲ್ಲ ಹೊಸ ಸರ್ಕಾರ, ತಿಂಗಳ ಸಂಬಳದ ಕತೆ ಏನು?
ಬೆಂಗಳೂರು, ಜುಲೈ 25: 15ನೇ ವಿಧಾನಸಭೆಯ ಮುಂಗಾರು ಅಧಿವೇಶನದಲ್ಲಿ ಎಚ್ ಡಿ ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ವಿಶ್ವಾಸಮತ ಪರೀಕ್ಷೆಯಲ್ಲಿ ಸೋಲು ಕಂಡಿದೆ. ಹೊಸ ಸರ್ಕಾರ ರಚನೆಗೆ ಬಿಜೆಪಿ ಕೂಡಾ ಆತುರ ತೋರುತ್ತಿಲ್ಲ, ಪರಿಸ್ಥಿತಿ ಈಗಿರುವಾಗ ಜುಲೈ ತಿಂಗಳ ಸಂಬಳ ಕೈ ಸೇರುವುದೋ ಇಲ್ಲವೋ ಎಂಬ ಆತಂಕದಲ್ಲಿ ಸರ್ಕಾರಿ ನೌಕರರು ಚಿಂತೆಗೀಡಾಗಿದ್ದಾರೆ.
ಬಿ.ಎಸ್ ಯಡಿಯೂರಪ್ಪನವರ ನೇತೃತ್ವದ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರುವುದು ಇನ್ನೂ ವಿಳಂಬವಾಗುವ ಸಾಧ್ಯತೆ ಇದೆ. ಈ ಬಗ್ಗೆ ಬಿಜೆಪಿ ಹೈಕಮಾಂಡ್ ನಾಳೆ ನಿರ್ಧರಿಸಬಹುದು ಎಂಬ ಸುದ್ದಿಯಿದೆ. 3 ಶಾಸಕರ ಅನರ್ಹತೆ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ತನ್ನ ಮುಂದಿನ ಹೆಜ್ಜೆ ಇಡಲಿದೆ.

ಈ ನಡುವೆ ಸರ್ಕಾರಿ ನೌಕರರಿಗೆ ಸಂಬಳದ ಚಿಂತೆ ಎದುರಾಗಿದೆ. ಜುಲೈ 31ರೊಳಗೆ ಬಜೆಟ್ ಅಂಗೀಕಾರವಾಗದಿದ್ದರೆ ಖಜಾನೆಗೆ ಹಣ ಸೇರುವುದಿಲ್ಲ, ಲಕ್ಷಾಂತರ ಸರ್ಕಾರಿ ನೌಕರರಿಗೆ ತಿಂಗಳ ಸಂಬಳ ಕೈ ಸೇರುವುದಿಲ್ಲ.
ಜುಲೈ 31 ರೊಳಗಾಗಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದು ಹಣಕಾಸು ವಿಧೇಯಕ ಮಂಡನೆಯಾಗಿ ಚರ್ಚೆಯಾಗಿ, ಸದನದಲ್ಲಿ ಪಾಸ್ ಆದ ಬಳಿಕ ಸಂಬಳದ ಸಿಗಲಿದೆ. ಸದ್ಯದ ಪರಿಸ್ಥಿತಿ ನೋಡಿದರೆ ಹೊಸ ಸರ್ಕಾರ ಸ್ಥಾಪನೆ ಹಾಗೂ ಬಿಲ್ ಪಾಸ್ ಆಗುವುದು ಕಷ್ಟಕರವಾಗಿದೆ.
ಪರಿಹಾರ ಏನಿದೆ?: ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ನೌಕರರ ಹಿತದೃಷ್ಟಿಯಿಂದ ರಾಜ್ಯಪಾಲರು ಅಖಾಡಕ್ಕೆ ಇಳಿಯಬೇಕಾಗುತ್ತದೆ. 15ನೇ ವಿಧಾನಸಭೆಯಲ್ಲಿ ಅಮಾನತಿನಲ್ಲಿಟ್ಟು, ರಾಷ್ಟ್ರಪತಿ ಆಳ್ವಿಕೆ ಹೇರಬಹುದು. ಸದ್ಯ ಲೋಕಸಭೆ ಅಧಿವೇಶನ ಜಾರಿಯಲ್ಲಿರುವುದರಿಂದ ವಿಧೇಯಕಕ್ಕೆ ಸಮ್ಮತಿಯನ್ನು ಸಂಸತ್ತಿನಲ್ಲಿ ಪಡೆಯಬಹುದು. ಕೇಂದ್ರ ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಬಹುದು.
ಬಿಜೆಪಿ ಸರ್ಕಾರ ರಚನೆ, ಬಹುಮತ?: ಇದಾದ ಬಳಿಕ, ಸರ್ಕಾರ ರಚನೆಗೆ ಬಿಜೆಪಿ ಮುಂದಾದರೆ ಬಹುಮತ ಸಾಬೀತುಪಡಿಸಲು ಸೂಚಿಸಬಹುದು. ಮೊನ್ನೆ ರೀತಿ ಸದನಕ್ಕೆ 20 ಮಂದಿ ಗೈರು ಹಾಜರಾದರೆ, ಹಾಲಿ ಸದಸ್ಯರ ಸಂಖ್ಯಾಬಲ ಲೆಕ್ಕಾಚಾರದಲ್ಲಿ ಬಿಜೆಪಿ ಗೆಲುವು ಸಾಧಿಸಿ ಸರ್ಕಾರ ರಚಿಸಬಹುದು.
ಆದರೆ, ರಾಜೀನಾಮೆ ಸಲ್ಲಿಸಿರುವ ಪೈಕಿ 3 ಅನರ್ಹರಾಗಿದ್ದು, ಮಿಕ್ಕ 14 ಜನ ವಾಪಸ್ ಬಂದು ರಾಜೀನಾಮೆ ವಾಪಸ್ ಪಡೆದರೆ, ಅಥವಾ ಸದನಕ್ಕೆ ಹಾಜರಾಗಿ ವಿಶ್ವಾಸಮತದಲ್ಲಿ ಪಾಲ್ಗೊಳ್ಳಲು ಬಯಸಿದರೆ ಮತ್ತೆ ಲೆಕ್ಕಾಚಾರ ಬದಲಾಗಲಿದೆ. ತಾಂತ್ರಿಕವಾಗಿ ಕಾಂಗ್ರೆಸ್ ಪಕ್ಷದಲ್ಲೇ ಉಳಿದಿರುವುದರಿಂದ ಮತ್ತೆ ಈ ಶಾಸಕರಿಗೆ ವಿಪ್ ಜಾರಿಯಾಗಲಿದೆ. ವಿಪ್ ಉಲ್ಲಂಘಿಸಿ, ಅಡ್ಡ ಮತದಾನ ಮಾಡಿದರೆ, ಪಕ್ಷದಿಂದ ಉಚ್ಚಾಟನೆ, ಶಾಸಕರ ಸ್ಥಾನದಿಂದ ಅನರ್ಹತೆ ಭೀತಿ ಎದುರಾಗಲಿದೆ.












Click it and Unblock the Notifications