ಸೋನಿಯಾ ಅನುಮತಿ ಇದ್ದಿದ್ದಲ್ಲಿ 2ನೇ ಅಭ್ಯರ್ಥಿ ಕಣದಲ್ಲಿ ಯಾಕೆ: ಏನಿದು ರಾಜಕೀಯ ಮೇಲಾಟ?
ರಾಜ್ಯದಲ್ಲಿ ಕಾಂಗ್ರೆಸ್ ಆಡುತ್ತಿರುವ ರಾಜಕೀಯ ಒಂದಾದರೆ, ವಿರೋಧ ಪಕ್ಷದ ನಾಯಕ ಸಿದ್ದರಾಯಮ್ಮ ಆಡುತ್ತಿರುವ ರಾಜಕೀಯ ಆಟ ಇನ್ನೊಂದು. ಕಾಂಗ್ರೆಸ್ಸಿನ ಎರಡನೇ ಅಭ್ಯರ್ಥಿ ಮತ್ತು ಜೆಡಿಎಸ್ ಅಭ್ಯರ್ಥಿ ರಾಜ್ಯಸಭೆಗೆ ನಾಮಪತ್ರ ಸಲ್ಲಿಸಿದ ನಂತರ ಮತ್ತೊಮ್ಮೆ ಕೆಪಿಸಿಸಿಯ ಬಣ ರಾಜಕೀಯ ಮತ್ತೊಮ್ಮೆ ಜಗಜ್ಜಾಹೀರಾಗಿದೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಸತ್ಯ.
ಕಾಂಗ್ರೆಸ್ಸಿನ ಎರಡನೇ ಅಭ್ಯರ್ಥಿ ನಾಮಪತ್ರ ಸಲ್ಲಿಸುವ ವೇಳೆ ರಾಜ್ಯ ಕಾಂಗ್ರೆಸ್ಸಿನಲ್ಲಿ ಇದೆ ಎನ್ನಲಾಗುತ್ತಿರುವ ಡಿಕೆಶಿ ಮತ್ತು ಸಿದ್ದರಾಮಯ್ಯ ಬಣದವರು ಹಾಜರಿದ್ದರು. ಆದರೆ, ಇಲ್ಲಿ ಸಿದ್ದರಾಮಯ್ಯ ಬಣದ ಪ್ಲ್ಯಾನ್ ಅನ್ನು ಮಟ್ಟ ಹಾಕಬೇಕು ಎನ್ನುವುದು ಒಂದು ಕಡೆಯಾದರೆ, ಕುಮಾರಸ್ವಾಮಿಯವರ ಲೆಕ್ಕಾಚಾರವನ್ನು ಉಲ್ಟಾ ಮಾಡಬೇಕು ಎನ್ನುವುದು ಇನ್ನೊಂದು ಕಡೆ.
ಇವರಿಬ್ಬರ ಅಂದರೆ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯನವರ ರಾಜಕೀಯ ಮೇಲಾಟ ಎನ್ನುವುದಕ್ಕಿಂತ ಪ್ರತಿಷ್ಠೆಯ ಜಿದ್ದಿನಲ್ಲಿ ಬಿಜೆಪಿಯ ಮೂರನೇ ಅಭ್ಯರ್ಥಿಗೆ ಲಾಭವಾಗುತ್ತದೆ ಎನ್ನುವುದನ್ನು ಅರಿಯದ ರಾಜಕೀಯ ದಡ್ಡರು ಕಾಂಗ್ರೆಸ್ ಅಥವಾ ಜೆಡಿಎಸ್ಸಿನಲ್ಲಿ ಇರಲಿಕ್ಕಿಲ್ಲ.
ಆದರೂ, ನನಗೆ ಒಂದೇಟು ಬಿದ್ದರೆ ವಿರೋಧಿಗೆ ಹತ್ತು ಏಟು ಬೀಳಬೇಕು ಎನ್ನುವ ಲೆಕ್ಕಾಚಾರದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರು ಇದ್ದಂತಿದೆ. ಹಾಗಾದರೆ, ಬಲೀ ಕಾ ಬಕ್ರಾ ಆಗುತ್ತಿರುವವರು ಯಾರು? ಕುಪೇಂದ್ರ ರೆಡ್ಡಿಯೋ ಅಥವಾ ಮನ್ಸೂರ್ ಆಲಿ ಖಾನ್ ಅವರಾ?
ಟಿಕೆಟ್ ನೀಡುವ ವಿಚಾರದಲ್ಲಿ ದೇವೇಗೌಡ್ರ ಕುಟುಂಬದಲ್ಲಿ ಒಮ್ಮತವಿರಲಿಲ್ಲ
ಕುಪೇಂದ್ರ ರೆಡ್ಡಿಯವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ದೇವೇಗೌಡ್ರ ಕುಟುಂಬದಲ್ಲಿ ಒಮ್ಮತವಿರಲಿಲ್ಲ ಎನ್ನುವ ಮಾತಿದೆ. ಎಚ್.ಡಿ.ಕುಮಾರಸ್ವಾಮಿಯವರು ವೀರೇಂದ್ರ ಅವರಿಗೆ ಟಿಕೆಟ್ ನೀಡಬೇಕೆಂದು ಗೌಡ್ರಿಗೆ ಒತ್ತಾಯಿಸಿದ್ದರು. ಆದರೆ, ಎಚ್.ಡಿ.ರೇವಣ್ಣ ಅವರು ಕುಪೇಂದ್ರ ರೆಡ್ಡಿಗೆ ಟಿಕೆಟಿ ಗಿಟ್ಟಿಸಿಕೊಡುವಲ್ಲಿ ಯಶಸ್ವಿಯಾಗಿದ್ದರು. ಈ ಮುನಿಸಿಂದಲೇ ಕುಮಾರಸ್ವಾಮಿ, ಆರೋಗ್ಯ ತಪಾಸಣೆಯ ಹೆಸರಿನಲ್ಲಿ ಸಿಂಗಾಪುರಕ್ಕೆ ತೆರಳಿದ್ದು ಎನ್ನುವ ಮಾತಿದೆ.

ದೇವೇಗೌಡ್ರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕರೆಮಾಡಿ ಬೆಂಬಲ ಕೋರಿದ್ದರು
ಕುಪೇಂದ್ರ ರೆಡ್ಡಿಯವರಿಗೆ ಟಿಕೆಟ್ ಘೋಷಣೆಯಾಗುವುದಕ್ಕೂ ಮುನ್ನ, ದೇವೇಗೌಡ್ರು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಕರೆಮಾಡಿ ಬೆಂಬಲ ಕೋರಿದ್ದರು. ಅಲ್ಲಿಂದ ಹೆಚ್ಚುವರಿ ಮತದ ಭರವಸೆ ಸಿಕ್ಕ ನಂತರವಷ್ಟೇ ಜೆಡಿಎಸ್ ಅಭ್ಯರ್ಥಿಯ ಹೆಸರನ್ನು ಪ್ರಕಟಿಸಿತ್ತು. ಇದನ್ನು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಮತ್ತು ರೇವಣ್ಣ ಬಹಿರಂಗವಾಗಿಯೇ ಮಾಧ್ಯಮಗಳ ಮುಂದೆ ಹೇಳಿದ್ದರು. ಆದಾಗ್ಯೂ, ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು ಯಾಕೆ ಎನ್ನುವುದಿಲ್ಲಿ ಪ್ರಶ್ನೆ.

ಸಿದ್ದರಾಮಯ್ಯ ಆಖಾಡಕ್ಕೆ ಇಳಿದು, ಮನ್ಸೂರ್ ಖಾನ್ ಅವರನ್ನು ಮುನ್ನಲೆಗೆ
ಕಾಂಗ್ರೆಸ್ ಮೂಲದ ಪ್ರಕಾರ ಪಕ್ಷೇತರ ಅಭ್ಯರ್ಥಿಯ ರೂಪದಲ್ಲಿ ಮತ್ತು ಅಲ್ಪಸಂಖ್ಯಾತ ಸಮುದಾಯದ ನಾಯಕರನ್ನು ಜೆಡಿಎಸ್ ಅಭ್ಯರ್ಥಿಯನ್ನಾಗಿ ನಿಲ್ಲಿಸಿದರೆ ಮಾತ್ರ ಬೆಂಬಲ ಎನ್ನುವ ಮಾತನ್ನು ಜೆಡಿಎಸ್ ನಾಯಕರಿಗೆ ಹೇಳಲಾಗಿತ್ತಂತೆ. ಆದರೆ, ಕುಪೇಂದ್ರ ರೆಡ್ಡಿಯವರನ್ನು ಜೆಡಿಎಸ್ ತನ್ನ ಅಧಿಕೃತ ಅಭ್ಯರ್ಥಿಯನ್ನಾಗಿ ನಿಲ್ಲಿಸಿದ್ದರಿಂದ ಸಿದ್ದರಾಮಯ್ಯ ಆಖಾಡಕ್ಕೆ ಇಳಿದು, ಮನ್ಸೂರ್ ಖಾನ್ ಅವರನ್ನು ಮುನ್ನಲೆಗೆ ತಂದರು.

ಕಾಂಗ್ರೆಸ್-ಜೆಡಿಎಸ್ ಪ್ರತಿಷ್ಠೆಯ ಸಮರ ಬಿಜೆಪಿಗೆ ಅನುಕೂಲ
ಒಟ್ಟಿನಲ್ಲಿ ಕಾಂಗ್ರೆಸ್-ಜೆಡಿಎಸ್ ಪ್ರತಿಷ್ಠೆಯ ಸಮರ ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆಯೇ ಹೆಚ್ಚು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ,"122 ಶಾಸಕರ ಬೆಂಬಲ ಇರುವುದರಿಂದ ಗೆಲುವಿನ ವಿಚಾರದಲ್ಲಿ ಯಾವುದೇ ಭಯವಿಲ್ಲ, ಮೂರೂ ಸ್ಥಾನವನ್ನು ಗೆಲ್ಲುತ್ತೇವೆ"ಎಂದು ಹೇಳಿದ್ದಾರೆ. ಒಟ್ಟಿನಲ್ಲಿ, ಸೋನಿಯಾ ಅವರೊಂದಿಗೆ ದೇವೇಗೌಡ್ರು ಮಾತನಾಡಿಯೇ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ ಎನ್ನುವ ಜೆಡಿಎಸ್ ನಾಯಕರ ಮಾತಿನ ಹಿಂದಿನ ಮರ್ಮವೇನು ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ.












Click it and Unblock the Notifications