Karnataka Elections 2023: ಕಾಂಗ್ರೆಸ್ಗೆ ಬಲವಾದ ನೆಲೆ- ಆಂತರಿಕ ವರದಿಯಲ್ಲಿ ಮಹತ್ವದ ಅಂಶಗಳು- ಏನೇನಿದೆ? ತಿಳಿಯಿರಿ
ಕರ್ನಾಟಕದಲ್ಲಿ ಕಾಂಗ್ರೆಸ್ 'ಬಲವಾದ ನೆಲೆಯನ್ನು' ಹೊಂದಿದೆ ಎಂದು ಪಕ್ಷದ ಆಂತರಿಕ ವರದಿಗಳು ಹೇಳಿವೆ. ಈ ವಿಚಾರಕ್ಕೆ ಸಂಬಂಧಿಸಿದ ವರದಿಯನ್ನು ಉನ್ನತ ನಾಯಕತ್ವದ ಮುಂದೆ ಇರಿಸಲಾಗಿದೆ. ಈ ವರದಿಯಲ್ಲಿ ಯಾವ ಮಹತ್ವದ ಅಂಶಗಳಿವೆ ಎಂದು ತಿಳಿಯಲು ಇದನ್ನು ಓದಿ.
ಬೆಂಗಳೂರು, ಫೆಬ್ರವರಿ 28: ಅಸೆಂಬ್ಲಿ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿವೆ. ಕರ್ನಾಟಕದಲ್ಲಿ ಕಾಂಗ್ರೆಸ್ 'ಬಲವಾದ ನೆಲೆಯನ್ನು' ಹೊಂದಿದೆ ಎಂದು ಪಕ್ಷದ ಆಂತರಿಕ ವರದಿಗಳು ಹೇಳಿವೆ. ಈ ವಿಚಾರಕ್ಕೆ ಸಂಬಂಧಿಸಿದ ವರದಿಯನ್ನು ಉನ್ನತ ನಾಯಕತ್ವದ ಮುಂದೆ ಇರಿಸಲಾಗಿದೆ. ಈ ವರದಿಯಲ್ಲಿ ಯಾವ ಮಹತ್ವದ ಅಂಶಗಳಿವೆ ಎಂದು ತಿಳಿಯಲು ಇದನ್ನು ಓದಿ.

ಮತದಾರರ ಪಟ್ಟಿ ಪರಿಷ್ಕರಣೆ ಮೇಲೆ ನಿಗಾ
2018-2022 ರ ಪ್ರಧಾನ ಕಾರ್ಯದರ್ಶಿಗಳ ವರದಿಯು ಮತದಾರರ ಪಟ್ಟಿ ಪರಿಷ್ಕರಣೆ ಮೇಲೆ ನಿಗಾ ಇಡಲು ರಾಜ್ಯ ನಾಯಕತ್ವವನ್ನು ಕೇಳಿದೆ ಎಂದು ತಿಳಿದುಬಂದಿದೆ. ಅಧಿಕಾರಿಗಳನ್ನು ಬಳಿಸಿಕೊಂಡು ಬಿಜೆಪಿಯು ವಿಶೇಷವಾಗಿ ಅಲ್ಪಸಂಖ್ಯಾತರು ಹಾಗೂ ಕಾಂಗ್ರೆಸ್ ಅನ್ನು ಬೆಂಬಲಿಸುವ ಸಮುದಾಯಗಳ ಮತಗಳನ್ನು ಅಳಿಸಿಹಾಕಲು ಬಿಜೆಪಿ ಸರ್ಕಾರ ತಂತ್ರ ರೂಪಿಸಿದ್ದು, ಇದರ ಮೇಲೆ ತೀವ್ರ ನಿಗಾ ಇಡುವಂತೆ ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ.

ಅಸೆಂಬ್ಲಿ ಚುನಾವಣೆಗೆ ಮುನ್ನ ಪಕ್ಷದ ಚಾಣಾಕ್ಷ ನಡೆ
ಮುಂಬರುವ ಅಸೆಂಬ್ಲಿ ಚುನಾವಣೆಗೆ ಮುನ್ನ ಪಕ್ಷವು ಚಾಣಾಕ್ಷ ನಡೆಯನ್ನು ಅನುಸರಿಸುತ್ತಿದೆ. ಎಲ್ಲ ನಾಯಕರೂ ಸಕ್ರಿಯವಾಗಿ ತೊಡಗಿಕೊಂಡಿದ್ದಾರೆ. ನೀತಿ ನಿಯಮಗಳ ಪಾಲನೆಯಾಗುತ್ತಿದೆ. ವಿವಿಧ ಕಾರ್ಯಕ್ರಮಗಳು, ಪ್ರತಿಭಟನೆಗಳು, ಆಂದೋಲನಗಳು, ಪಾದಯಾತ್ರೆ, ಕೋವಿಡ್ -19 ಸಮಯದಲ್ಲಿ ಪಕ್ಷದಿಂದಾದ ಸೇವೆಗಳು ಪಕ್ಷಕ್ಕೆ ಸಹಾಯ ಮಾಡುತ್ತಿವೆ. ಉಪಚುನಾವಣೆ, ಎಂಎಲ್ಸಿ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಮಯದಲ್ಲಿ ಪಕ್ಷವು ಏಕತೆ ಮೆರೆದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ಗೆ ಉತ್ತಮ ಜನಬೆಂಬಲ ವ್ಯಕ್ತವಾಗುತ್ತಿದೆ ಎಂದು ವರದಿ ಹೇಳಿದೆ.

ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ
ಭ್ರಷ್ಟಾಚಾರದ ವಿರುದ್ಧ ಕಾಂಗ್ರೆಸ್ನ ಪ್ರತಿಭಟನೆಗಳು ಬಿಜೆಪಿ ಪಕ್ಷದೊಳಗೆ ತುಂಬಾ ಆತಂಕವನ್ನು ಸೃಷ್ಟಿಸಿದೆ ಎಂದು ವರದಿಯಲ್ಲಿ ತಿಳಿದುಬಂದಿದೆ. ಬಿಜೆಪಿಯ ಪ್ರಬಲ ನಾಯಕ ಬಿಎಸ್ ಯಡಿಯೂರಪ್ಪ ಅವರು ಬಸವರಾಜ ಬೊಮ್ಮಾಯಿ ಅವರಿಗೆ ಅವಕಾಶ ನೀಡಿದರು. ಯಡಿಯೂರಪ್ಪ ಅವರನ್ನು ಬಲಿಪಶು ಮಾಡಲಾಯಿತು. ಬೊಮ್ಮಾಯಿ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿತು ಎಂಬ ನಿರೂಪಣೆಯನ್ನು ಜನರಲ್ಲಿ ಬಿತ್ತುವಲ್ಲಿ ಕಾಂಗ್ರೆಸ್ ಯಶಸ್ವಿಯಾಗಿದೆ ಎಂದು ವರದಿಯಲ್ಲಿದೆ.

ಕರ್ನಾಟಕದಲ್ಲಿ ಮಹತ್ವದ ಬೆಳವಣಿಗೆ
ಕರ್ನಾಟಕದ ಚುನಾವಣೆಯು ವಿವಿಧ ರಾಜ್ಯಗಳ ಚುನಾವಣೆಗೆ ಪ್ರೇರಣೆ ನೀಡಲಿದೆ. ಇದು ಮಹತ್ವದ ಬೆಳವಣಿಗೆಯೊಂದಕ್ಕೆ ಸಾಕ್ಷಿಯಾಗಲಿದೆ. 2024 ರ ಲೋಕಸಭಾ ಚುನಾವಣೆಗೂ ಇದು ದಿಕ್ಸೂಚಿ ಆಗಲಿದೆ. ಶಿಸ್ತು, ಸಂಯಮ ಹಾಗೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಕಾಂಗ್ರೆಸ್ ಚುನಾವಣೆಗಳಲ್ಲಿ ಗೆಲ್ಲಬಹುದು ಎಂಬುದನ್ನು ರಾಜ್ಯ ವಿಧಾನಸಭೆ ಚುನಾವಣೆಯು ತಿಳಿಸಿಕೊಡಲಿದೆ ಎಂದು ವರದಿಯಲ್ಲಿ ಹೇಳಲಾಗಿದೆ. ಈ ವಿಚಾರಗಳ ಬಗ್ಗೆ ರಾಯಪುರದಲ್ಲಿ ನಡೆದ ಕಾಂಗ್ರೆಸ್ನ ಮಹಾ ಅಧಿವೇಶದಲ್ಲಿ ದೀರ್ಘವಾಗಿ ಚರ್ಚಿಸಲಾಗಿದೆ ಎಂದು ತಿಳಿದುಬಂದಿದೆ.

ಸುರ್ಜೇವಾಲಾ ನೇತೃತ್ವದಲ್ಲಿ ವರದಿ
ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರ ನೇತೃತ್ವದಲ್ಲಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ರಾಜ್ಯಾದ್ಯಂತ ಯಾತ್ರೆಗಳು, ಪ್ರಾದೇಶಿಕ ಸಮಸ್ಯೆಗಳನ್ನು ಮುನ್ನೆಲೆಗೆ ತರುವ ವಿಶೇಷ ಕಾರ್ಯಕ್ರಮಗಳು, ಮನೆ-ಮನೆ ಪ್ರಚಾರ ಮತ್ತು ಬೂತ್ ಸಮಿತಿಗಳ ಮೇಲೆ ಕೇಂದ್ರೀಕರಿಸಲು ಕಾಂಗ್ರೆಸ್ ನಾಯಕತ್ವ ನಿರ್ಧರಿಸಿದೆ.
‘ಚುನಾವಣೆ ಮುಗಿಯುವವರೆಗೆ ತಮ್ಮ ವೈಯಕ್ತಿಕ ಕೆಲಸಗಳನ್ನು ಬದಿಗಿಟ್ಟು ಕೆಲಸ ಮಾಡುವುದಾಗಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಜ್ಞೆ ಮಾಡಿದ್ದಾರೆ' ಎಂದು ತಿಳಿದುಬಂದಿದೆ.

ಕಾಂಗ್ರೆಸ್ನ ಎಚ್ಚರಿಕೆಯ ನಡೆ
ಕೋವಿಡ್ -19 ಲಾಕ್ಡೌನ್ ಸಮಯದಲ್ಲಿ ಪಾದರಾಯನಪುರದಲ್ಲಿ ನಡೆದ ಗುಂಪು ದಾಳಿಯನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ. ಮುಸ್ಲಿಂ ಮತ ಬ್ಯಾಂಕ್ಗೆ ಹೆದರಿ ಪಕ್ಷವು ಈ ಘಟನೆಯನ್ನು ಖಂಡಿಸುವುದಿಲ್ಲ ಎಂದು ಸರ್ಕಾರ ಮತ್ತು ಮಾಧ್ಯಮಗಳು ಟೀಕಿಸಿದ್ದವು. ಆದರೆ, ಕಾಂಗ್ರೆಸ್ ನಾಯಕತ್ವವು ಸಮುದಾಯದೊಂದಿಗೆ ಮಾತನಾಡಿ ಘಟನೆಯನ್ನು ಖಂಡಿಸಿತು. ಇಂತಹ ಎಚ್ಚರಿಕೆಯ ನಡೆಗಳು ಕಾಂಗ್ರೆಸ್ಗೆ ಬಹಳ ಸಹಕಾರಿಯಾಗಲಿವೆ ಎಂದು ವರದಿ ಹೇಳಿದೆ.

ಮೊದಲು ಸಮುದಾಯದ ಸಮ್ಮತಿ
ಮೊದಲು ಸಮುದಾಯದ ಸಮ್ಮತಿಯನ್ನು ಪಡೆದುಕೊಳ್ಳಬೇಕು. ಆ ನಂತರ ಘಟನೆಯನ್ನು ಖಂಡಿಸಬೇಕು. ಇಂತಹ ಎಚ್ಚರಿಕೆಯ ಕ್ರಮಗಳು ಪರಿಸ್ಥಿತಿಯನ್ನು ನಿಭಾಯಿಸುವ ಪ್ರಬುದ್ಧ ಮಾರ್ಗವೆಂದು ಪಕ್ಷ ಪರಿಗಣಿಸಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಶಿವಕುಮಾರ್ ಅವರನ್ನು ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವುದು ಪಕ್ಷಕ್ಕೆ ಲಾಭ ತಂದುಕೊಟ್ಟಿದೆ ಎಂದು ವರದಿ ಹೇಳಿದೆ.












Click it and Unblock the Notifications