ಡಿಕೆಶಿ ಮುಂದೆ ಹೈಕಮಾಂಡ್ ಇಟ್ಟ ಸಂಧಾನ ಸೂತ್ರ ಏನು?
ಬೆಂಗಳೂರು, ಮೇ 18; ಕರ್ನಾಟಕದ ಮುಖ್ಯಮಂತ್ರಿ ಯಾರು? ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ನಡುವೆ ಸಂಧಾನ ಸೂತ್ರ ಸಿದ್ಧಪಡಿಸಿರುವ ಹೈಕಮಾಂಡ್ ಹಗ್ಗಜಗ್ಗಾಟಕ್ಕೆ ತೆರೆ ಎಳೆದಿದೆ. ಮೊದಲ ಅವಧಿಗೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿದ್ದಾರೆ.
ಬುಧವಾರ ತಡರಾತ್ರಿ ತನಕ ನಡೆದ ಸಭೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ ಮುಖ್ಯಮಂತ್ರಿ ಹುದ್ದೆಯ ಬಿಕ್ಕಟ್ಟು ಶಮನ ಮಾಡಿದ್ದಾರೆ. ಸಿಎಂ ಪಟ್ಟಕ್ಕಾಗಿ ಪಟ್ಟು ಹಿಡಿದು ಕುಳಿತಿದ್ದ ಡಿ. ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ಹೈಕಮಾಂಡ್ ಸಂಧಾನ ಸೂತ್ರಕ್ಕೆ ಒಪ್ಪಿಗೆ ನೀಡಿದ್ದಾರೆ.

ಗುರುವಾರ ಸಂಜೆ 7 ಗಂಟೆಗೆ ಕೆಪಿಸಿಸಿ ಕಚೇರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದೆ. ಇದಕ್ಕೂ ಮೊದಲು ದೆಹಲಿಯಲ್ಲಿ ಹೈಕಮಾಂಡ್ ನಾಯಕರು ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಯಾರು? ಎಂದು ಘೋಷಣೆ ಮಾಡುವ ನಿರೀಕ್ಷೆ ಇದೆ. ನೂತನ ಮುಖ್ಯಮಂತ್ರಿಗಳ ಪ್ರಮಾಣ ವಚನ ಸಮಾರಂಭ ಮೇ 20ರಂದು ನಡೆಯಲಿದೆ.
30-30 ತಿಂಗಳ ಅಧಿಕಾರ ಹಂಚಿಕೆ ಸೂತ್ರ ಇದಾಗಿದೆ. ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ. ಡಿ. ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ. ಪಕ್ಷದ ಹಿತದೃಷ್ಟಿಯಿಂದ ಪಕ್ಷದ ನಾಯಕರ ಆದೇಶ ಪಾಲಿಸುತ್ತಿರುವ ಡಿ. ಕೆ. ಶಿವಕುಮಾರ್ 30 ತಿಂಗಳ ಬಳಿಕ ಮುಖ್ಯಮಂತ್ರಿ ಪಟ್ಟ ಬಿಟ್ಟುಕೊಡಬೇಕು ಎಂಬ ಷರತ್ತು ಹಾಕಿದ್ದಾರೆ.

ಡಿಕೆಶಿ ಸಂಧಾನ ಸೂತ್ರ; ಮುಖ್ಯಮಂತ್ರಿ ಪಟ್ಟಕ್ಕೆ ಪಟ್ಟು ಹಿಡಿದಿದ್ದ ಡಿ. ಕೆ. ಶಿವಕುಮಾರ್ ಉಪ ಮುಖ್ಯಮಂತ್ರಿ ಪಟ್ಟಕ್ಕೆ ಒಪ್ಪಿದ್ದು ಹೇಗೆ?. ಇದಕ್ಕೆ ಕಾರಣ ಪಕ್ಷ ನೀಡಿರುವ ಆಫರ್ಗಳು. ಹೌದು ಹೈಕಮಾಂಡ್ ಸಂಧಾನಸೂತ್ರಕ್ಕೆ ಡಿ. ಕೆ. ಶಿವಕುಮಾರ್ ಒಪ್ಪಿಗೆ ನೀಡಿದ್ದಾರೆ.
ಸಂಧಾನ ಸೂತ್ರ 1; ಡಿ. ಕೆ. ಶಿವಕುಮಾರ್ ಒಬ್ಬರೇ ಉಪ ಮುಖ್ಯಮಂತ್ರಿಯಾಗಿರುತ್ತಾರೆ. ಮೊದಲು ಪಕ್ಷ 3 ಉಪಮುಖ್ಯಮಂತ್ರಿ ಹುದ್ದೆ ರಚನೆ ಮಾಡಲು ಚಿಂತನೆ ನಡೆಸಿತ್ತು. ಆದರೆ ಈಗಿನ ಮಾಹಿತಿಯಂತೆ ಕೇವಲ ಒಬ್ಬರು ಉಪಮುಖ್ಯಮಂತ್ರಿ ಇರುತ್ತಾರೆ. ಅದು ಡಿ. ಕೆ. ಶಿವಕುಮಾರ್ ಮಾತ್ರ. ಬೇರೆ ಯಾರನ್ನೂಉಪಮುಖ್ಯಮಂತ್ರಿ ಮಾಡುವುದಿಲ್ಲ ಎಂದು ಪಕ್ಷ ಭರವಸೆ ನೀಡಿದೆ.
ಸಂಧಾನ ಸೂತ್ರ 2; ಉಪಮುಖ್ಯಮಂತ್ರಿಯಾಗುವ ಡಿ. ಕೆ. ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿಯೂ ಮುಂದುವರೆಯಲಿದ್ದಾರೆ. ಇವರು ಡಿಸಿಎಂ ಆದ ಬಳಿಕ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಆಗುವುದಿಲ್ಲ. ಪಕ್ಷ, ಸರ್ಕಾರ ಎರಡು ಹುದ್ದೆಗಳಲ್ಲಿಯೂ ಅವರು ಮುಂದುವರೆಯಲಿದ್ದಾರೆ.
ಸಂಧಾನ ಸೂತ್ರ 3; ಉಪಮುಖ್ಯಮಂತ್ರಿಯಾಗಿ ಡಿ. ಕೆ. ಶಿವಕುಮಾರ್ ಇರಲಿದ್ದಾರೆ. ಅವರ ಬಣಕ್ಕೆ 7 ಸಚಿವ ಸ್ಥಾನಗಳನ್ನು ನೀಡಲಾಗುತ್ತದೆ. ಡಿ. ಕೆ. ಶಿವಕುಮಾರ್ಗೆ ಪ್ರಮುಖ ಖಾತೆಗಳ ಹೊಣೆ ಸಿಗಲಿದೆ.
ಬುಧವಾರ ತಡರಾತ್ರಿಯ ಸಭೆಯಲ್ಲಿ ಸಂಧಾನಸೂತ್ರ ಸಿದ್ಧಪಡಿಸಿ ಉಭಯ ನಾಯಕರನ್ನು ಒಪ್ಪಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ನಿವಾಸದಲ್ಲಿ ಗುರುವಾರ ಬೆಳಗ್ಗೆ ಸಿದ್ದರಾಮಯ್ಯ, ಡಿ. ಕೆ. ಶಿವಕುಮಾರ್ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾರೆ. ಉಪಹಾರ ಕೂಟದ ಬಳಿಕ ನಾಯಕರು ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಬಳಿಕ ಬೆಂಗಳೂರಿಗೆ ಆಗಮಿಸಲಿದ್ದಾರೆ.
ಮುಖ್ಯಮಂತ್ರಿಯಾಗುವ ಸಿದ್ದರಾಮಯ್ಯ ಬಳಿಯಲ್ಲಿಯೇ ಹಣಕಾಸು ಖಾತೆ ಇರಲಿದೆ. ಉಪಮುಖ್ಯಮಂತ್ರಿಯಾಗುವ ಡಿ. ಕೆ. ಶಿವಕುಮಾರ್ ಕಂದಾಯ, ಇಂಧನ ಖಾತೆಗಳ ಜವಾಬ್ದಾರಿ ವಹಿಸಿಕೊಳ್ಳವ ನಿರೀಕ್ಷೆ ಇದೆ. ತಮ್ಮ ಬಣದಲ್ಲಿ ಯಾರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು? ಎಂದು ಅವರೇ ತೀರ್ಮಾನ ಕೈಗೊಳ್ಳಲಿದ್ದಾರೆ.
ಡಿ. ಕೆ. ಶಿವಕುಮಾರ್ ಮನವೊಲಿಕೆಯಲ್ಲಿ ಸೋನಿಯಾ ಗಾಂಧಿ ಮಹತ್ವದ ಪಾತ್ರ ವಹಿಸಿದ್ದಾರೆ. ಶಿಮ್ಲಾದಲ್ಲಿರುವ ಅವರು ವಿಡಿಯೋ ಕರೆ ಮಾಡಿ ಡಿ. ಕೆ. ಶಿವಕುಮಾರ್ ಜೊತೆ ಮಾತನಾಡಿದ್ದು, 30 ತಿಂಗಳ ಬಳಿಕ ಮುಖ್ಯಮಂತ್ರಿ ಮಾಡುತ್ತೇವೆ ಎಂಬ ಭರವಸೆಯನ್ನು ಕೊಟ್ಟಿದ್ದಾರೆ. ಸದಾ ಪಕ್ಷದ ನಾಯಕರ ಆದೇಶ ಪಾಲಿಸುವ ಡಿ. ಕೆ. ಶಿವಕುಮಾರ್ ಇದಕ್ಕೆ ಸಹ ಒಪ್ಪಿಗೆ ನೀಡಿದ್ದಾರೆ.












Click it and Unblock the Notifications