ಹೈಕಮಾಂಡ್ ಬುಲಾವ್: ದೆಹಲಿಗೆ ದೌಡಾಯಿಸಿದ ಪರಮೇಶ್ವರ್
ಕೆಪಿಸಿಸಿ ಅಧ್ಯಕ್ಷರ ಸ್ಥಾನ ಕುರಿತ ಚರ್ಚೆಗಾಗಿಯೇ ಪರಮೇಶ್ವರ್ ಅವರನ್ನು ದೆಹಲಿಗೆ ಕರೆಯಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ನ ಉನ್ನತ ಮೂಲಗಳು ಖಚಿತಪಡಿಸಿವೆ.
ಬೆಂಗಳೂರು, ಮೇ 12: ರಾಜ್ಯ ಕಾಂಗ್ರೆಸ್ (ಕೆಪಿಸಿಸಿ) ಅಧ್ಯಕ್ಷರ ಪಟ್ಟ ಹಸ್ತಾಂತರ ಕುರಿತಂತೆ ನಿರ್ಧಾರ ಕೈಗೊಳ್ಳಬೇಕಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್, ಕೆಪಿಸಿಸಿ ಅಧ್ಯಕ್ಷ ಹಾಗೂ ಗೃಹ ಸಚಿವರ ಜಿ. ಪರಮೇಶ್ವರ್ ಅವರನ್ನು ದಿಢೀರನೆ ದೆಹಲಿಗೆ ಕರೆಯಿಸಿಕೊಂಡಿದೆ.
ಕೆಪಿಸಿಸಿ ಅಧ್ಯಕ್ಷಗಿರಿಗಾಗಿ ಲಾಭಿ ನಡೆಯುತ್ತಿರುವ ಈ ಹೊತ್ತಿನಲ್ಲಿ ಪರಮೇಶ್ವರ್ ಅವರ ಈ ದೆಹಲಿ ದೌಡು ತೀವ್ರ ಕುತೂಹಲ ಹುಟ್ಟಿಸಿದೆ. ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ, ರಾಜ್ಯದಲ್ಲಿ ಕಾಂಗ್ರೆಸ್ ಉಸ್ತುವಾರಿ ಹೊಣೆಯನ್ನು ಹೊತ್ತಿರುವ ವೇಣುಗೋಪಾಲ್ ಅವರು, ಇತ್ತೀಚೆಗೆ ರಾಜ್ಯ ಕಾಂಗ್ರೆಸ್ ನಾಯಕರ, ಕಾಂಗ್ರೆಸ್ ಶಾಸಕರ ಅಭಿಪ್ರಾಯಗಳನ್ನು ಪಡೆದು ಆ ಎಲ್ಲಾ ವಿವರಗಳನ್ನು ದೆಹಲಿಗೆ ರವಾನಿಸಿದ್ದಾರೆ. ಅದರ ಬೆನ್ನಲ್ಲೇ ಈಗ ಪರಮೇಶ್ವರ್ ಅವರಿಗೆ ಹೈಕಮಾಂಡ್ ಕರೆ ನೀಡಿರುವುದು ಸಹಜವಾಗಿ ಎಲ್ಲರನ್ನೂ ಆಕರ್ಷಿಸಿದೆ.
ಗುರುವಾರ (ಮೇ 11) ರಾತ್ರಿಯೇ ಪರಮೇಶ್ವರ್ ಅವರು ದೆಹಲಿ ತಲುಪಿದ್ದು, ಶುಕ್ರವಾರ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ ಪಕ್ಷದ ಹಿರಿಯ ನಾಯಕರನ್ನು ಭೇಟಿಯಾಗುವ ಸಾಧ್ಯತೆಗಳಿವೆ. ಕೆಪಿಸಿಸಿ ಅಧ್ಯಕ್ಷರ ಸ್ಥಾನ ಕುರಿತ ಚರ್ಚೆಗಾಗಿಯೇ ಪರಮೇಶ್ವರ್ ಅವರನ್ನು ದೆಹಲಿಗೆ ಕರೆಯಿಸಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ ನ ಉನ್ನತ ಮೂಲಗಳು ಖಚಿತಪಡಿಸಿವೆ.