ಕರ್ನಾಟಕ ಚುನಾವಣೆ: ಪ್ರಧಾನಿ ಮೋದಿ ಮೇಲಿನ ಕಾಂಗ್ರೆಸ್ ವೈಯಕ್ತಿಕ ದಾಳಿಗಳು ಬಿಜೆಪಿಗೆ ಸಹಾಯಕವೇ?
ಬೆಂಗಳೂರು, ಏಪ್ರಿಲ್. 30: ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಧಾಣಿ ಮೊದಿಯವರ ವಿರುದ್ಧ ವಾಗ್ದಾಳಿ ನಡೆಸಿದ್ದರು. ಬಳಿಕ ತಮ್ಮ ಹೇಳಿಕೆಯ ಉದ್ದೇಶ ಅದಲ್ಲ ಎಂದೂ ಸ್ಪಷ್ಟನೆ ಕೂಡ ನೀಡಿದ್ದರು. ಆದರೆ, ಬಿಜೆಪಿ ಮತ್ತು ಪ್ರಧಾನಿ ಮೋದಿ ಈ ವಿಷಯವನ್ನು ಮತ್ತಷ್ಟು ದೊಡ್ಡದು ಮಾಡುತ್ತಿದ್ದಾರೆ. ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿ ನಾಯಕರು ವೈಯಕ್ತಿಕ ದಾಳಿಗೆ ಇಳಿದಿದ್ದಾರೆ.
ಇದೇ ಮಾತನ್ನು ಉಲ್ಲೇಖಿಸಿ ಎಲ್ಲಾ ಸಾರ್ವಜನಿಕ ಸಭೆಗಳಲ್ಲೂ ಮಾತನಾಡುತ್ತಿರುವ ಪ್ರಧಾನಿ ಮೋದಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಕಾಂಗ್ರೆಸ್ ತನ್ನ ಮೇಲೆ ದಾಳಿ ಮಾಡಿದಷ್ಟೂ ಬಿಜೆಪಿ ಬೆಳೆಯುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಚುನಾವಣಾ ಪ್ರಚಾರದಲ್ಲಿ ಹೇಳಿದ್ದಾರೆ.

ಶನಿವಾರ ಬೀದರ್ನಲ್ಲಿ ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಮೋದಿ, "ಬಡವರು, ದೀನದಲಿತರು ಮತ್ತು ದಲಿತರಿಗಾಗಿ ಯಾರು ಕೆಲಸ ಮಾಡಿದರೂ ಕಾಂಗ್ರೆಸ್ ಟೀಕಿಸುತ್ತದೆ. ಈ ಹಿಂದೆ ಕಾಂಗ್ರೆಸ್ ನಾಯಕರು ಡಾ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು "ರಾಷ್ಟ್ರದ್ರೋಹಿ" ಮತ್ತು "ದಗಾಬಾಜ್" ಎಂದು ಕರೆಯುವ ಮೂಲಕ ಅವಮಾನಿಸಿದ್ದರು. ಈಗ ವೀರ್ ಸಾವರ್ಕರ್ ಅವರನ್ನು ಅವಮಾನಿಸುತ್ತಿದ್ದಾರೆ" ಎಂದು ಆರೋಪಿಸಿದ್ದಾರೆ.
ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ನಾಯಕರು ತಮ್ಮನ್ನು "ಚೌಕಿದಾರ್ ಚೋರ್ ಹೈ" ಎಂಬ ಘೋಷಣೆಯೊಂದಿಗೆ ಗುರಿಯಾಗಿಸಿಕೊಂಡಿದ್ದರು. ಬಳಿಕ ಮೋದಿ ಚೋರ್ ಹೈ ಎಂದು ನಿಂದಿಸಿದರು. ಈಗ ಅವರು ಇಡೀ ಮೋದಿ ಸಮುದಾಯವನ್ನು ಕೀಳಾಗಿ ಕಾಣುತ್ತಿದ್ದಾರೆ. ಅವರು ವೈಯಕ್ತಿಕ ದಾಳಿ ಮಾಡಿದಾಗಲೆಲ್ಲಾ ನಾನು ಮತ್ತು ಬಿಜೆಪಿ ಬಲಗೊಳ್ಳುತ್ತದೆ ಎಂದು ಹೇಳಿದ್ದಾರೆ.

ಕೇಂದ್ರ ಮತ್ತು ಕರ್ನಾಟಕದಲ್ಲಿ ಬಿಜೆಪಿ ಸರ್ಕಾರದ ಸಾಧನೆಗಳನ್ನು ಪಟ್ಟಿ ಮಾಡಿರುವ ಅವರು, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕೇಂದ್ರವು ಪ್ರತಿ ರೈತ ಕುಟುಂಬಕ್ಕೆ ವರ್ಷಕ್ಕೆ 6 ಸಾವಿರ ರೂ. ರಾಜ್ಯ ಸರ್ಕಾರವು 4,000 ರೂ.ಗಳನ್ನು ಹೆಚ್ಚುವರಿಯಾಗಿ ಸೇರಿಸಿದೆ, ಈ ಯೋಜನೆಯಡಿಯಲ್ಲಿ ಒಟ್ಟು ಮೊತ್ತವನ್ನು ವರ್ಷಕ್ಕೆ 10,000 ರೂಪಾಯಿ ಎಂದು ತಿಳಿಸಿದ್ದಾರೆ
*ಹಿಂದಿನ ಸರ್ಕಾರ ರೈತರಿಗಾಗಿ ಕೇಂದ್ರದೊಂದಿಗೆ ಒಟ್ಟಾಗಿ ಕೆಲಸ ಮಾಡಲಿಲ್ಲ*
"ನಾವು ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಘೋಷಿಸಿದಾಗ, ಕರ್ನಾಟಕದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರದಲ್ಲಿತ್ತು. ರೈತರ ವಿವರ ನೀಡುವಲ್ಲಿ ಕೇಂದ್ರಕ್ಕೆ ರಾಜ್ಯ ಸರ್ಕಾರ ಸಹಕಾರ ನೀಡಿಲ್ಲ. ಆದರೆ ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ವಿವರ ನೀಡಿತು. ಇದರಿಂದಾಗಿ ಕರ್ನಾಟಕದ ರೈತರು ಈ ನೆರವು ಪಡೆಯುತ್ತಿದ್ದಾರೆ. ಈ ಕಾರಣದಿಂದಾಗಿ ನಾವು ಡಬಲ್ ಇಂಜಿನ್ ಸರ್ಕಾರದ ಪ್ರಾಮುಖ್ಯತೆಯನ್ನು ಒತ್ತಿ ಹೇಳುತ್ತಿದ್ದೇವೆ" ಎಂದು ಕಾಂಗ್ರೆಸ್, ಜೆಡಿಎಸ್ ವಿರುದ್ಧ ಕಿಡಿಕಾರಿದ್ದಾರೆ.
ಕೇಂದ್ರ ಮತ್ತು ರಾಜ್ಯಗಳಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿದ್ದರೆ, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಗಮನ ಸೆಳೆಯುತ್ತವೆ . ಎಲ್ಲಾ ಯೋಜನೆಗಳು ಮತ್ತು ಕಾರ್ಯಕ್ರಮಗಳು ಯಾವುದೇ ತೊಂದರೆಗಳಿಲ್ಲದೆ ಫಲಾನುಭವಿಗಳನ್ನು ತಲುಪುತ್ತವೆ. ಹೀಗಾಗಿಯೇ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸ್ಪಷ್ಟ ಜನಾದೇಶ ನೀಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಜನತೆಗೆ ಮನವಿ ಮಾಡಿದ್ದಾರೆ.












Click it and Unblock the Notifications