ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿ ಪ್ರಕಟ, ಕನ್ನಡಿಗರೇ ಕಣಕ್ಕೆ
ಬೆಂಗಳೂರು, ಮಾರ್ಚ್ 11; ಇದೇ ತಿಂಗಳು 23 ರಂದು ನಡೆಯಲಿರುವ ನಾಲ್ಕು ರಾಜ್ಯಸಭಾ ಸದಸ್ಯರ ಚುನಾವಣೆಗೆ ಕಾಂಗ್ರೆಸ್ ತನ್ನ 3 ಅಭ್ಯರ್ಥಿಗಳನ್ನು ಘೋಷಿಸಿದೆ.
ನಾಸಿರ್ ಹುಸೇನ್, ಎಲ್.ಹನುಮಂತಯ್ಯ, ಜಿ.ಸಿ.ಚಂದ್ರಶೇಖರ್ ಅವರುಗಳನ್ನು ಕಾಂಗ್ರೆಸ್ ಪಕ್ಷವು ರಾಜ್ಯಸಭೆ ಚುನಾವಣಾ ಅಭ್ಯರ್ಥಿಗಳನ್ನಾಗಿ ಘೋಷಿಸಿದೆ. ಕಾಂಗ್ರೆಸ್ ಪಕ್ಷದ ಸಂಖ್ಯಾ ಬಲದಿಂದ ಇಬ್ಬರು ಸದಸ್ಯರನ್ನು ಅದು ರಾಜ್ಯಸಭೆಗೆ ಕಳುಹಿಸಬಹುದಾಗಿದೆ. ಬಿಜೆಪಿಯು ಒಬ್ಬರನ್ನು ಕಳಿಸಬಹುದಾಗಿದೆ ಇನ್ನೊಂದು ಸ್ಥಾನಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ತಿಕ್ಕಾಟ ನಡೆಯಲಿದೆ.

ರಾಹುಲ್ ಗಾಂಧಿ ಅವರು ಸ್ಯಾಮ್ ಪಿತ್ರೋಡಾ, ಮೀರಾ ಕುಮಾರಿ ಅವರುಗಳನ್ನು ರಾಜ್ಯಸಭೆಗೆ ಆರಿಸಲು ಸೂಚಿಸಿದ್ದರು ಆದರೆ ಸಿದ್ದರಾಮಯ್ಯ ಅವರು ಕನ್ನಡಿಗರನ್ನೇ ರಾಜ್ಯಸಭೆಗೆ ಆಯ್ಕೆ ಮಾಡುವುದು ಉತ್ತಮವೆಂದು, ಚುನಾವಣೆ ಸಮಯದಲ್ಲಿ ಅನ್ಯರನ್ನು ಆಯ್ಕೆ ಮಾಡುವುದು ಸರಿ ಅಲ್ಲವೆಂದು ರಾಹುಲ್ ಅವರಿಗೆ ಮನವರಿಕೆ ಮಾಡಿದ ಮೇಲೆ ಇದೀಗ ಮೂರು ಮಂದಿ ಕನ್ನಡಿಗರನ್ನೇ ಆಯ್ಕೆ ಮಾಡಿದ್ದಾರೆ.
ಒಂದು ರಾಜ್ಯಸಭಾ ಸ್ಥಾನವನ್ನು ತಮಗೆ ಬಿಟ್ಟುಕೊಡಿ ಎಂದು ಜೆಡಿಎಸ್ ಈಗಾಗಲೇ ಕಾಂಗ್ರೆಸ್ ಬಳಿ ಮನವಿ ಮಾಡಿತ್ತು ಆದರೆ ಸಿದ್ದರಾಮಯ್ಯ ಅವರು ಮನವಿಯನ್ನು ತಿರಸ್ಕರಿಸಿದ್ದರು ಹಾಗಾಗಿ ಮೂರನೇ ಸ್ಥಾನಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಪೈಪೋಟಿ ನಡೆಯಲಿದೆ.
ಜೆಡಿಎಸ್ ನಿಂದ ಈಗಾಗಲೇ ಫಾರುಕ್ ಅವರು ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ, ಬಿಜೆಪಿ ಯಲ್ಲಿ ಇನ್ನೂ ಅಭ್ಯರ್ಥಿ ಅಂತಿಮವಾಗಿಲ್ಲ. ಮೊದಲು ಕೇಳಿಬಂದಿದ್ದ ರಾಜೀವ್ ಚಂದ್ರಶೇಖರ್ ಮತ್ತು ವಿಜಯ ಸಂಕೇಶ್ವರ್ ಅವರ ಹೆಸರನ್ನು ಬದಿಗೆ ಸರಿಸಿ ಶಿವಮೊಗ್ಗ ಜಿಲ್ಲಾ ಬಿಜೆಪಿ ಅಧ್ಯಕ್ಷ ರುದ್ರೇಗೌಡ ಅವರನ್ನು ರಾಜ್ಯಸಭೆಗೆ ಕಳಿಸುವ ಎಲ್ಲಾ ಲಕ್ಷಣ ಗೋಚರಿಸುತ್ತಿದೆ. ಇದರ ಜೊತೆಗೆ ರಾಯಚೂರಿನ ಎನ್.ಶಂಕರಪ್ಪ ಅವರ ಹೆಸರೂ ಸಹ ರೇಸಿನಲ್ಲಿದೆ.












Click it and Unblock the Notifications