ಸರ್ಕಾರಕ್ಕೆ ಈಶ್ವರ್ ಖಂಡ್ರೆ ಸವಾಲ್: ಕೊರೊನಾಗೆ ಲಾಕ್ಡೌನ್ ಪರಿಹಾರವೇ?
ಬೆಂಗಳೂರು, ಮೇ 07: ಕೊರೊನಾವೈರಸ್ ಸಾಂಕ್ರಾಮಿಕ ಪಿಡುಗಿನ ಎರಡನೇ ಅಲೆಯನ್ನು ಕಟ್ಟಿ ಹಾಕಲು ಕರ್ನಾಟಕ ಸರ್ಕಾರ ಲಾಕ್ಡೌನ್ ನಿಯಮಗಳನ್ನು ಜಾರಿಗೊಳಿಸಿದೆ. ಆದರೆ ಬಡ ಹಾಗೂ ಕೂಲಿ ಕಾರ್ಮಿಕರ ಸಹಾಯಕ್ಕೆ ಯಾವ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ ಪ್ರಶ್ನೆ ಮಾಡಿದ್ದಾರೆ.
"ಸರ್ಕಾರ ಮೇ10-24ರವರೆಗೆ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ. ಆದರೆ ಬಡವರಿಗೆ ಅನ್ನ, ವಸ್ತ್ರ, ವಸತಿ ಅತ್ಯಂತ ಮುಖ್ಯ. ಬಡವರಿಗೆ, ಆಟೋ, ಟ್ಯಾಕ್ಸಿ ಡ್ರೈವರ್ ಗಳಿಗೆ, ಬೀದಿಬದಿ ವ್ಯಾಪಾರಿಗಳು, ವಲಸೆ ಕಾರ್ಮಿಕರಿಗೆ ಯಾವ ರೀತಿಯ ಆರ್ಥಿಕ ನೆರವು & ಆಹಾರ ಧಾನ್ಯ ನೀಡುವ ಬಗ್ಗೆ ಪ್ರಸ್ತಾಪಿಸಿಲ್ಲ. ಕೂಡಲೇ ಈ ಕುರಿತಂತೆಯೂ ಸರ್ಕಾರ ಸ್ಪಷ್ಟಪಡಿಸಬೇಕು" ಎಂದು ಸಲಹೆ ನೀಡಿದ್ದಾರೆ.
ರಾಜ್ಯದಲ್ಲಿ ಮೇ 10ರ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆವರೆಗೂ ಲಾಕ್ಡೌನ್ ಜಾರಿಯಲ್ಲಿ ಇರಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅಧಿಕೃತವಾಗಿ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರಕ್ಕೆ ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ ಅವರು ಸರಣಿ ಟ್ವೀಟ್ ಮೂಲಕ ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ಈ ಕುರಿತು ಒಂದು ವರದಿ ಇಲ್ಲಿದೆ ಓದಿ.
|
ಸರ್ಕಾರ ವೈದ್ಯಕೀಯ ವ್ಯವಸ್ಥೆ ಬಗ್ಗೆ ಸ್ಪಷ್ಟಪಡಿಸಲಿ
"ಸರ್ಕಾರ ಮೇ 10ರಿಂದ ಮೇ 24ರವರೆಗೆ ಲಾಕ್ಡೌನ್ ಘೋಷಿಸಿದೆ. ಆದರೆ ನಿತ್ಯ ಕೊವಿಡ್ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳ ಹೆಚ್ಚಳ, ಆಕ್ಸಿಜನ್ ಪೂರೈಕೆಗೆ ಸೂಕ್ತ ವ್ಯವಸ್ಥೆ, ರೆಮಿಡಿಸಿವಿರ್ ಸೇರಿ ಇತರ ಔಷಧಗಳ ಸಮರ್ಪಕ ಪೂರೈಕೆ ಬಗ್ಗೆಯೂ ರಾಜ್ಯದ ಜನತೆಗೆ ಸ್ಪಷ್ಟಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.

ಲಾಕ್ಡೌನ್ ಜಾರಿಗೊಳಿಸುವುದೇ ಕೊರೊನಾಗೆ ಪರಿಹಾರವಲ್ಲ
"ಕೊವಿಡ್ ಚಿಕಿತ್ಸೆಗೆ ಅಗತ್ಯವಾದ ಔಷಧ (ಆಂಟಿಬಯಾಟಿಕ್ಸ್ ಮತ್ತು ಪ್ಯಾರಸೆಟಮಾಲ್) ಕೊರತೆ ಆಗದಂತೆ ಈಗಲೇ ಎಚ್ಚರ ವಹಿಸಲಿ. ಕೊರೊನಾಗೆ ಲಾಕ್ಡೌನ್ ಪರಿಹಾರವಲ್ಲ. ಅದು ಕೇವಲ ನಿಯಂತ್ರಣಕ್ಕೆ ಒಂದು ಸಾಧನ. ಮಿಗಿಲಾಗಿ ಮುಂದಿನ ಅಲೆಯನ್ನು ಎದುರಿಸಲು ಪೂರ್ವಸಿದ್ಧತೆಗೆ ಸರ್ಕಾರಕ್ಕೆ ಸಿಗುವ ಕಾಲಾವಕಾಶ", ಎಂದು ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಸರ್ಕಾರ ಕೊರೊನಾ ಮೂರನೇ ಅಲೆ ಎದುರಿಸಲು ಸಿದ್ಧವಾಗಲಿ
"ಕಳೆದ 1 ವರ್ಷದಿಂದ ನಿದ್ರಾವಸ್ಥೆಯಲ್ಲಿರುವ ಸರ್ಕಾರ ಈಗಲಾದರೂ 3ನೇ ಅಲೆ ಎದುರಿಸಲು ಸಿದ್ಧತೆ ಮಾಡಿಕೊಳ್ಳಲಿ, ಪ್ರಸಕ್ತ 2ನೇ ಅಲೆಯ ತೀವ್ರತೆ ನೋಡಿದರೆ, ರಾಜ್ಯಕ್ಕೆ ತುರ್ತಾಗಿ ಬೇಕಾಗಿರುವುದು ತಾತ್ಕಾಲಿಕ ಆಸ್ಪತ್ರೆಗಳು, ಆಕ್ಸಿಜನ್, ರೆಮಿಡಿಸಿವಿರ್, ಪ್ಯಾರಾಸೆಟಮಾಲ್, ಆಂಟಿಬಯಾಟಿಕ್ಸ್, ವೆಂಟಿಲೇಟರ್ ಮತ್ತು ಐ.ಸಿ.ಯು. ಬೆಡ್ ಗಳು", ಎಂದು ಟ್ವೀಟ್ ಮಾಡಿದ್ದಾರೆ.

ಸಾರ್ವಜನಿಕರಿಗಾಗಿ ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಿ
"ಈ ಎಲ್ಲದರ ಕೊರತೆಯಿಂದ ಜನ ಹಾದಿ ಬೀದಿಯಲ್ಲಿ ಸಾಯುತ್ತಿದ್ದಾರೆ. ತಕ್ಷಣ ಸರ್ಕಾರ ಆರೋಗ್ಯ ಮೂಲಸೌಕರ್ಯ ಹೆಚ್ಚಳಕ್ಕೆ ಗಮನ ಹರಿಸಲಿ. ಈ ಲಾಕ್ ಡೌನ್ ಅವಧಿಯಲ್ಲಿ ಎಷ್ಟು ಆಸ್ಪತ್ರೆ, ಹಾಸಿಗೆ & ವೆಂಟಿಲೇಟರ್ ಸೌಲಭ್ಯ ಹೆಚ್ಚಿಸಲಾಗುತ್ತಿದೆ, ಐ.ಸಿ.ಯು & ಆಕ್ಸಿಜನ್ ಬೆಡ್ ಎಷ್ಟು ಹೆಚ್ಚಳ ಮಾಡಲಾಗುತ್ತಿದೆ ಎಂಬ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ನೀಡಲಿ" ಎಂದು ಕಾಂಗ್ರೆಸ್ ಮುಖಂಡ ಈಶ್ವರ್ ಖಂಡ್ರೆ ಆಗ್ರಹಿಸಿದ್ದಾರೆ.












Click it and Unblock the Notifications