ಸಿದ್ದರಾಮಯ್ಯ, ಜಾರ್ಜ್ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು
Recommended Video

ಬೆಂಗಳೂರು, ಅಕ್ಟೋಬರ್ 05 : ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ವಿರುದ್ಧ ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಲಾಗಿದೆ. ಬಿಜೆಪಿ ನಗರ ಜಿಲ್ಲೆ ವಕ್ತಾರ ಎನ್.ಆರ್.ರಮೇಶ್ ದೂರು ನೀಡಿದವರು.
ಬೆಂಗಳೂರು ನಗರದಲ್ಲಿ ಕಸ ವಿಲೇವಾರಿಗೆ ಬಿಬಿಎಂಪಿ ಮಾಡುತ್ತಿದ್ದ ವೆಚ್ಚದಲ್ಲಿ ದಿಢೀರ್ ಹೆಚ್ಚಳವಾಗಿದೆ. ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ಎನ್.ಆರ್.ರಮೇಶ್ ದೂರು ನೀಡಿದ್ದು, ಜಾರಿ ನಿರ್ದೇಶನಾಲಯ (ಇ.ಡಿ) ದೂರನ್ನು ಸ್ವೀಕಾರ ಮಾಡಿದೆ.

2016ರ ಫೆಬ್ರವರಿ ತನಕ ಕಸ ವಿಲೇವಾರಿಗಾಗಿ ಬಿಬಿಎಂಪಿ ವರ್ಷಕ್ಕೆ 385 ಕೋಟಿ ವೆಚ್ಚ ಮಾಡುತ್ತಿತ್ತು. ಈಗ ಈ ಮೊತ್ತವು 1066 ಕೋಟಿಗಳಿಗೆ ಹೆಚ್ಚಳವಾಗಿದೆ. ಹಣ ಲೂಟಿ ಹೊಡೆಯುವ ಸಲುವಾಗಿ ಮೊತ್ತ ಹೆಚ್ಚಿಸಿಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಕೇಂದ್ರ ಸರ್ಕಾರ ಸ್ವಚ್ಚ ಭಾರತ ಯೋಜನೆ ಅಭಿಯಾನದ ಅನ್ವಯ ಬಿಡುಗಡೆ ಮಾಡಿರುವ 146.10 ಕೋಟಿ ಸಹ ಇದರಲ್ಲಿ ಸೇರಿದೆ. ಆದ್ದರಿಂದ, ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡು, ತನಿಖೆ ನಡೆಸುವಂತೆ ದೂರಿನಲ್ಲಿ ಎನ್.ಆರ್.ರಮೇಶ್ ಮನವಿ ಮಾಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಬಿಬಿಎಂಪಿ ಆಯುಕ್ತ ಮಂಜುನಾಥ ಪ್ರಸಾದ್, ಜಂಟಿ ಆಯುಕ್ತ (ಆರೋಗ್ಯ) ಸರ್ಫರಾಜ್ ಖಾನ್ ವಿರುದ್ಧ ದೂರು ನೀಡಲಾಗಿದೆ.
'ಕೇಂದ್ರ ಸರ್ಕಾರದ ಹಣ ದುರ್ಬಳಕೆ ಆಗಿರುವ ಕಾರಣ ಸಿಬಿಐಗೂ ದೂರು ನೀಡಲಾಗಿದೆ. ಲೋಕಾಯುಕ್ತ ಮತ್ತು ಎಸಿಬಿಗೂ ದೂರು ನೀಡಲಾಗುತ್ತದೆ' ಎಂದು ಎನ್.ಆರ್.ರಮೇಶ್ ಹೇಳಿದ್ದಾರೆ.












Click it and Unblock the Notifications