ಕಂದಾಯ, ಮುಜರಾಯಿ ಇಲಾಖೆ ಪ್ರಗತಿ ಪರಿಶೀಲಿಸಿದ ಸಿಎಂ ಯಡಿಯೂರಪ್ಪ
ಬೆಂಗಳೂರು, ಮೇ 26: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಕಂದಾಯ ಹಾಗೂ ಮುಜರಾಯಿ ಇಲಾಖೆ ಪ್ರಗತಿ ಪರಿಶೀಲನಾ ಸಭೆ ವಿಧಾನಸೌಧದಲ್ಲಿ ಜರುಗಿತು.
ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ, ಅನುಭವ ಮಂಟಪ ಸ್ಥಾಪನೆಗೆ 100 ಕೋಟಿ ರೂ.ಗಳನ್ನು ಒದಗಿಸಲು ನಿರ್ಧರಿಸಲಾಯಿತು. ಭೂ ಸುಧಾರಣೆಯ ಅಡಿಯಲ್ಲಿ 164 ತಾಲ್ಲೂಕುಗಳಲ್ಲಿ ಭೂ ನ್ಯಾಯ ಮಂಡಳಿ ರಚಿಲು ಮುಖ್ಯಮಂತ್ರಿ ಸೂಚಿಸಿದರು.
ಡ್ರೋನ್ ಆಧಾರಿತ ಸರ್ವೆ ಸಮಿತ್ವ ಯೋಜನೆಯಡಿ 16000 ಗ್ರಾಮಗಳನ್ನು ಗುರುತಿಸಲಾಗಿದೆ. ಗ್ರಾಮ ನಿವಾಸಿಗಳಿಗೆ ಅವರ ವಾಸಸ್ಥಳದ ಆಸ್ತಿಗಳಿಗೆ ಪ್ರಾಪರ್ಟಿ ಕಾರ್ಡ್ ವಿತರಿಸುವ ಯೋಜನೆ ಇದಾಗಿದೆ. ದೇಶದ 7 ರಾಜ್ಯಗಳ ಪೈಕಿ ಕರ್ನಾಟಕ ರಾಜ್ಯದಲ್ಲಿಯೂ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಯೋಜನೆಯ ಅನುಷ್ಠಾನವನ್ನು ತ್ವರಿತವಾಗಿ ಕಾರ್ಯಗತಗೊಳಿಸಲು ಮುಖ್ಯಮಂತ್ರಿ ಸೂಚಿಸಿದರು.

ಮುಜರಾಯಿ ಇಲಾಖೆ
ಮುಜರಾಯಿ ಇಲಾಖೆಗೆ ಸಂಬಂಧಿಸಿದಂತೆ, ಆಂಧ್ರಪ್ರದೇಶದ ತಿರುಮಲ ಕರ್ನಾಟಕ ಛತ್ರಕ್ಕೆ ಸೇರಿದ ಸ್ಥಳಗಳಲ್ಲಿ ನೂತನ ವಸತಿ ಗೃಹಗಳ ನಿರ್ಮಾಣಕ್ಕೆ 200 ಕೋಟಿ ರೂ.ಗಳ ಅನುದಾನ ಮಂಜೂರು ಮಾಡುವ ಬಗ್ಗೆ ಚರ್ಚಿಸಲಾಯಿತು. ಕೂಡಲೇ ಕಾಮಗಾರಿ ಪ್ರಾರಂಭಕ್ಕೆ ಕ್ರಮವಹಿಸಲು ಸೂಚನೆ ನೀಡಲಾಯಿತು. ಕಾಮಗಾರಿಯ ಅಂದಾಜು ವೆಚ್ಚ ಹಾಗೂ ಕೊಠಡಿಗಳ ಅಳತೆಯನ್ನು ಮತ್ತೊಮ್ಮೆ ಪರಿಶೀಲಿಸಲು ಮುಖ್ಯಮಂತ್ರಿಗಳು ಆದೇಶಿಸಿದರು.

ಆನ್ ಲೈನ್ ಬುಕಿಂಗ್ ಸೇವೆಯ ವಿಸ್ತರಣೆ
50 ದೇವಸ್ಥಾನಗಳಿಗೆ ಆನ್ ಲೈನ್ ಬುಕಿಂಗ್ ಸೇವೆಯ ವಿಸ್ತರಣೆ ಮಾಡಲಾಗಿದೆ. ಸರಳ ವಿವಾಹ ಯೋಜನೆಯಲ್ಲಿ 50 ಜನರಿಗೆ ಸೀಮಿತಗೊಳಿಸಿ ಮದುವೆ ಮಾಡಿಸಲು ತೀರ್ಮಾನ ಮಾಡಲಾಯಿತು.

ನೋಂದಣಿ ಮತ್ತು ಮುದ್ರಾಂಕ ಇಲಾಖೆ
ನೋಂದಣಿ ಮತ್ತು ಮುದ್ರಾಂಕ ಇಲಾಖೆಗೆ ಸಂಬಂಧಿಸಿದಂತೆ ಕೋವಿಡ್ 19 ಹಿನ್ನೆಲೆಯಲ್ಲಿ 2020-21 ನೇ ಸಾಲಿನಲ್ಲಿ 3524 ಕೋಟಿ ರೂ.ಗಳಷ್ಟು ಕಡಿಮೆ ರಾಜಸ್ವ ಸಂಗ್ರಹವಾಗಬಹುದೆಂದು ಅಂದಾಜಿಸಲಾಗಿದೆ.

ಮುದ್ರಾಂಕ ಶುಲ್ಕ ಶೇ 5 ರಿಂದ 2 ಕ್ಕೆ
ಕೈಗೆಟಕುವ ದರಗಳ ಮನೆಗಳನ್ನು ಪ್ರೋತ್ಸಾಹಿಸಲು ರೂ.20 ಲಕ್ಷ ಮೌಲ್ಯದ ಅಪಾರ್ಟ್ಮೆಂಟ್ಗಳ ಮೊದಲ ನೊಂದಣಿಗೆ ಮುದ್ರಾಂಕ ಶುಲ್ಕವನ್ನು ಶೇ 5 ರಿಂದ 2 ಕ್ಕೆ ಇಳಿಸಲು ಹಾಗೂ ರೂ.35 ಲಕ್ಷ ಮೌಲ್ಯದವರೆಗಿನ ನೊಂದಣಿಗೆ ಶೇ 5 ರಿಂದ ಶೇ. 3 ಕ್ಕೆ ಇಳಿಸಲು ಮುಖ್ಯಮಂತ್ರಿಗಳು ಸೂಚಿಸಿದರು. ಸಭೆಯಲ್ಲಿ ಕಂದಾಯ ಸಚಿವ ಆರ್.ಅಶೋಕ್, ಮೀನುಗಾರಿಕೆ, ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಎಸ್.ಆರ್.ವಿಶ್ವನಾಥ್, ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್, ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಉಪಸ್ಥಿತರಿದ್ದರು.












Click it and Unblock the Notifications