ದರ್ಶನ್, ಜಗ್ಗೇಶ್ ಹುಲಿ ಉಗುರು ಪ್ರಕರಣ: ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?
ಬೆಂಗಳೂರು, ಅಕ್ಟೋಬರ್ 25: ಕುತ್ತಿಗೆಯಲ್ಲಿ ಅಸಲಿ ಹುಲಿಯ ಉಗುರು ಇರುವ ಲಾಕೆಟ್ ಧರಿಸಿದ ಆರೋಪದ ಮೇಲೆ ಕನ್ನಡ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧವಾಗಿದೆ. ಇದೀಗ ಈ ಪ್ರಕರಣದಲ್ಲಿ ಹಲವರಿಗೆ ಸಂಕಷ್ಟ ಎದುರಾಗಿದ್ದು, ಕನ್ನಡ ಚಿತ್ರರಂಗದ ನಟ ದರ್ಶನ್ ವಿರುದ್ಧ ಪ್ರಕರಣ ದಾಖಲಾಗಿದೆ. ಹಾಗೂ ಬಿಜೆಪಿ ಮುಖಂಡ, ನಟ ಜಗ್ಗೇಶ್ ಹುಲಿಯ ಉಗುರು ಇರುವ ಲಾಕೆಟ್ ಧರಿಸಿರುವ ವಿಡಿಯೋ ವೈರಲ್ ಆಗಿದೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ಹುಲಿ ಉಗುರು ಧರಿಸಿದ ಬಗ್ಗೆ ನಟರಾದ ದರ್ಶನ್ ಹಾಗೂ ಜಗ್ಗೇಶ್ ಅವರ ಪ್ರಕರಣ ದಾಖಲಾಗಿರುವ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲ. ಪೊಲೀಸ್ ಇಲಾಖೆಯಿಂದ ಮಾಹಿತಿ ಪಡೆದು ಪರಿಶೀಲಿಸಲಾಗುವುದು ಎಂದು ತಿಳಿಸಿದರು.

ತೋಟಗಾರಿಕೆ ಪಿತಾಮಹ ಡಾ.ಎಂ.ಹೆಚ್.ಮರೀಗೌಡ ಪ್ರತಿಮೆ ಅನಾವರಣಗೊಳಿಸಿ ಮಾತನಾಡಿದ ಅವರು, ತೋಟಗಾರಿಕೆ ಪಿತಾಮಹ ಡಾ.ಎಂ.ಹೆಚ್.ಮರೀಗೌಡ ಅವರ ಕಾಲದಲ್ಲಿ ಕರ್ನಾಟಕದಲ್ಲಿ ತೋಟಗಾರಿಕಾ ಕ್ಷೇತ್ರ ಅಭಿವೃದ್ಧಿಯ ರೂವಾರಿಯಾಗಿದ್ದರು. ಸರ್ಕಾರಿ ಅಧಿಕಾರಿಯಾಗಿ ನಿಷ್ಠೆ ಹಾಗೂ ಬದ್ಧತೆಯಿಂದ ತೋಟಗಾರಿಕೆ ಕ್ಷೇತ್ರದ ಬೆಳವಣಿಗೆಗೆ ಶ್ರಮಿಸಿದರು. ಮೈಸೂರಿನ ಕೇಂದ್ರ ಸ್ಥಳದಲ್ಲಿರುವ ಕರ್ಜನ್ ಪಾರ್ಕ್ನಲ್ಲಿ ಡಾ.ಎಂ.ಹೆಚ್.ಮರೀಗೌಡರ ಕಂಚಿನ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಡಾ.ಎಂ.ಹೆಚ್.ಮರೀಗೌಡರ ಸಾಧನೆಗಳು ಎಲ್ಲರಿಗೂ ಸ್ಪೂರ್ತಿ ತರಲಿದೆ ಎಂದು ತಿಳಿಸಿದರು.
ಏನಿದು ಹುಲಿ ಉಗುರು ಪ್ರಕರಣ..?
ಹುಲಿ ಉಗುರಿನ ಲಾಕೆಟ್ ಧರಿಸಿದ್ದರು ಎನ್ನುವ ಕಾರಣ್ಕಕಾಗಿ ಕನ್ನಡ ಬಿಗ್ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಬಂಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತೋಷ್ ಆಪ್ತ ರಂಜಿತ್ ಹಾಗೂ ಚಿನ್ನದಂಗಡಿ ಮಾಲೀಕನಿಗೆ ನೋಟಿಸ್ ಜಾರಿ ಮಾಡಲಾಗಿತ್ತು.
ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕನ್ನಡ ಚಿತ್ರರಂಗದ ನಟರು ಹಾಗೂ ಗಣ್ಯರು ಹುಲಿ ಉಗುರಿನ ಪೆಂಡೆಂಟ್ ಧರಿಸಿರುವ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ನಟ ದರ್ಶನ್ ಫೋಟೋವೊಂದರಲ್ಲಿ ಹುಲಿ ಉಗುರಿನ ಪೆಂಡೆಂಟ್ ಧರಿಸಿರುವುದು ಕಂಡು ಬಂದಿದೆ. ಇನ್ನು ಬಿಜೆಪಿ ಮುಖಂಡ ನಟ ಜಗ್ಗೇಶ್, ಹುಲಿ ಉಗುರಿನ ಪೆಂಡೆಂಟ್ ತೋರಿಸುತ್ತಾ, 'ಇದನ್ನು ನನ್ನ ತಾಯಿ ಕೊಟ್ಟಿದ್ದಾರೆ. ಮಗ ಹುಲಿಯಂತೆ ಇರಲಿ ಎಂದು ಇಪ್ಪತ್ತನೇ ವರ್ಷದ ಹುಟ್ಟುಹಬ್ಬದಲ್ಲಿ ಕೊಟ್ಟಿದ್ದರು' ಎಂದು ಹೇಳುವ ವಿಡಿಯೋ ವೈರಲ್ ಆಗಿದೆ. ಅಲ್ಲದೇ ಅವದೂತ ಚಿಕ್ಕಮಗಳೂರಿನ ಗೌರಿಗದ್ದೆಯ ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತ ಫೋಟೋ ಕೂಡ ವೈರಲ್ ಆಗಿದೆ.












Click it and Unblock the Notifications