ಯೋಗದ ಮಹತ್ವ ಬಿಚ್ಚಿಟ್ಟ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜ. 10 : 'ಯೋಗಕ್ಕೆ ವೈಜ್ಞಾನಿಕವಾದ ನೆಲಗಟ್ಟಿದೆ. ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗಾಭ್ಯಾಸದ ಅಗತ್ಯವಿದೆ' ಎಂದು ಸಿಎಂ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ. ಯೋಗ ಕಲಿಯಲು ವಯಸ್ಸಿನ ಮಿತಿ ಇಲ್ಲ ಎಂದು ಸಿಎಂ ಹೇಳಿದ್ದಾರೆ.
ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ಒಲಂಪಿಕ್ ಸಂಸ್ಥೆ ಮತ್ತು ಶ್ವಾಸ ಯೋಗ ಸಂಸ್ಥೆ ಹಮ್ಮಿಕೊಂಡಿದ್ದ ಕರ್ನಾಟಕ ಯೋಗ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ನಮ್ಮ ದೇಶದಲ್ಲೇ ಹುಟ್ಟಿದ ಯೋಗಕ್ಕೆ ವೈಜ್ಞಾನಿಕ ನೆಲೆಗಟ್ಟಿದೆ ಎಂದು ಹೇಳಿದರು.

ಜಂಜಾಟ, ಒತ್ತಡ ಮತ್ತಿತರ ಸಮಸ್ಯೆಗಳಿಂದ ಮಾನಸಿಕ ಸ್ವಾಸ್ಥ್ಯ ಹಾಳಾಗುತ್ತದೆ. ಮನಸ್ಸು ಮತ್ತು ದೇಹದ ಆರೋಗ್ಯಕ್ಕಾಗಿ ಯೋಗ, ಪ್ರಾಣಾಯಾಮ ಮೈಗೂಡಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಪುರಾತನ ಕಾಲದಲ್ಲಿಯೂ ಜನರು ಯೋಗಾಭ್ಯಾಸ ಮಾಡುತ್ತಿದ್ದರು ಎಂದರು. [ಹೆಲಿಕಾಪ್ಟರ್ ಅವಘಡದಿಂದ ಸಿದ್ದು ಪಾರಾದದ್ದು ಹೇಗೆ?]

ಯೋಗಾಭ್ಯಾಸದಿಂದ ಜೀವನ ಕ್ರಮ ಬದಲಾಗುತ್ತದೆ ಎಂದು ಹೇಳಿದ ಸಿಎಂ ಸಿದ್ದರಾಮಯ್ಯ, ಯೋಗ ಕಲಿಯಲು ವಯಸ್ಸಿನ ಮಿತಿ ಇಲ್ಲ. ನನಗೀಗ 67 ವರ್ಷ. ಕಳೆದ ಮೂರು ತಿಂಗಳಿಂದ ಯೋಗ ಮಾಡುತ್ತಿದ್ದೇನೆ. ಈ ಮೂರು ತಿಂಗಳಲ್ಲಿ ಬಹಳಷ್ಟು ಬದಲಾವಣೆ ಕಂಡಿದ್ದೇನೆ ಎಂದು ಸ್ವಂತಃ ಅನುಭವ ಹಂಚಿಕೊಂಡರು.

ಗೃಹ ಸಚಿವ ಕೆ.ಜೆ.ಜಾರ್ಜ್ ಅವರು ಆರು ದಿನದಿಂದ ಯೋಗಾಭ್ಯಾಸ ಪ್ರಾರಂಭಿಸಿದ್ದಾರೆ. ಸಚಿವ ಆಂಜನೇಯ ಕೂಡ ಯೋಗ ಮಾಡುತ್ತಾರೆ. ದೇಶಪಾಂಡೆ ಅವರು ನಾಳೆಯಿಂದ ಪ್ರಾರಂಭಿಸಲಿದ್ದಾರೆ ಎಂದು ಸಿದ್ದರಾಮಯ್ಯ ತಮ್ಮ ಸಂಪುಟ ಸಹೋದ್ಯೋಗಿಗಳು ಯೋಗ ಮಾಡುವ ಬಗ್ಗೆ ಮಾಹಿತಿ ನೀಡಿದರು.

ಸಮಾರಂಭದಲ್ಲಿ ಪಾಲ್ಗೊಂಡಿದ್ದ ಪ್ರವಾಸೋದ್ಯಮ ಸಚಿವರ ಆರ್.ವಿ.ದೇಶಪಾಂಡೆ ಅವರು, ಪ್ರವಾಸೋದ್ಯಮ ತಾಣಗಳಲ್ಲಿ ಯೋಗ ಕೇಂದ್ರಗಳನ್ನು ಸ್ಥಾಪನೆ ಮಾಡುವ ಕುರಿತು ಪರಿಶೀಲಿಸಲಾಗುತ್ತಿದೆ. ಯೋಗವನ್ನು ಪಠ್ಯದಲ್ಲಿ ಸೇರಿಸಲು ಶಿಕ್ಷಣ ಇಲಾಖೆಯಿಂದ ಚಿಂತನೆ ನಡೆದಿದೆ ಎಂದು ಹೇಳಿದರು.

ವಾಚನಾನಂದ ಸ್ವಾಮೀಜಿ, ಸಚಿವರಾದ ರೋಷನ್ಬೇಗ್, ಕೆ.ಜೆ.ಜಾರ್ಜ್, ಎಚ್.ಸಿ.ಮಹದೇವಪ್ಪ, ಎಚ್.ಆಂಜನೇಯ, ವಿಧಾನಪರಿಷತ್ ಸದಸ್ಯರಾದ ಗೋವಿಂದರಾಜು, ಎಚ್.ಎಂ.ರೇವಣ್ಣ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.













Click it and Unblock the Notifications