ವಿಶ್ರಾಂತಿಗೆ ತೆರಳಿದ ಸಿಎಂ ಸಿದ್ದು, ಬಿಜೆಪಿ ಗುದ್ದು!
ಬೆಂಗಳೂರು, ಏ. 22 : ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡ ನಂತರ ವಿಶ್ರಾಂತಿ ಪಡೆಯಲು ಸಿಎಂ ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಏ.26ರವರೆಗೆ ಸಿಎಂ ಬೆಂಗಳೂರಿನಲ್ಲೇ ವಿಶ್ರಾಂತಿ ಪಡೆಯಲಿದ್ದಾರೆ. ಆದರೆ, ಚುನಾವಣಾ ಪ್ರಚಾರದಿಂದ ಸುಸ್ತಾಗಿರುವ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಖಾಯಂ ಆಗಿ ವಿಶ್ರಾಂತಿ ಪಡೆಯಲಿ ಎಂದು ಪ್ರತಿಪಕ್ಷ ಬಿಜೆಪಿ ಟೀಕಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಲವು ಸಚಿವರು ವೈಟ್ ಫೀಲ್ಡ್ ನಲ್ಲಿರುವ "ಸೌಖ್ಯ ಇಂಟರ್ ನ್ಯಾಷನಲ್ ಹೋಲಿಸ್ಟಿಕ್ ಹೆಲ್ತ್ ಸೆಂಟರ್'ಗೆ ಸೋಮವಾರ ಸಂಜೆ ತೆರಳಿದ್ದಾರೆ. ಏ.26ರವರೆಗೆ ಸಿಎಂ ಮತ್ತು ಸಚಿವರು ಇಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ. ಸಿದ್ದರಾಮಯ್ಯ ವಿಶ್ರಾಂತಿಗಾಗಿ ಕೇರಳಕ್ಕೆ ತೆರಳಲಿದ್ದಾರೆ ಎಂಬ ಮಾತುಗಳಿದ್ದವು. ಆದರೆ, ಅವರು ಬೆಂಗಳೂರಿನಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. [ತಮಿಳುನಾಡಿನಲ್ಲಿ ಸಿಎಂ ಪ್ರಚಾರ]

ಬಿಜೆಪಿ ಲೇವಡಿ : ಚುನಾವಣಾ ಪ್ರಚಾರ ಮಾಡಿ ಸುಸ್ತಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ವಿಶ್ರಾಂತಿ ಪಡೆಯಲಿ ಎಂದು ಮಾಜಿ ಮುಖ್ಯಮಂತ್ರಿ ಮತ್ತು ವಿಧಾನಪರಿಷತ್ ಪ್ರತಿಪಕ್ಷ ನಾಯಕ ಡಿ.ವಿ.ಸದಾನಂದಗೌಡ ಸಲಹೆ ಮಾಡಿದ್ದಾರೆ. 113 ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಂಡು ಮುಖ್ಯಮಂತ್ರಿಗಳು ಸುಸ್ತಾಗಿದ್ದಾರಂತೆ. [ಸಿದ್ದರಾಮಯ್ಯಗೆ ಹೈಕಮಾಂಡ್ ಎಚ್ಚರಿಕೆ ನಿಜವಂತೆ]
ರಾಜ್ಯ ಕಟ್ಟಲು ಹೊರಟವರ ಬಾಯಿಂದ ಯಾವತ್ತೂ ಸುಸ್ತು ಎಂಬ ಮಾತು ಬರಬಾರದು. ಹೀಗಾಗಿ ಚುನಾವಣೆ ಪ್ರಚಾರ ಮಾಡಿ ಸುಸ್ತಾಗಿರುವ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿದು, ವಿಶ್ರಾಂತಿಗೆ ಮೊರೆ ಹೋಗುವುದು ಸೂಕ್ತ ಎಂದು ಸದಾನಂದ ಗೌಡರು ಲೇವಡಿ ಮಾಡಿದರು.
ಅವರು ಮೂರ್ಖರು : ಡಿವಿ ಸದಾನಂದ ಗೌಡರ ಮಾತಿಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ, ಚುನಾವಣೆ ಪ್ರಚಾರದಲ್ಲಿ ಪಾಲ್ಗೊಂಡ ನಂತರ ವಿಶ್ರಾಂತಿ ಪಡೆಯುವುದು ಸಹಜ ಪ್ರಕ್ರಿಯೆ. ಇದರಿಂದ ಸರ್ಕಾರದ ದೈನಂದಿನ ಕೆಲಸ- ಕಾರ್ಯಗಳಿಗೆ ಅಡ್ಡಿಯಾಗುವುದಿಲ್ಲ. ಮುಖ್ಯಮಂತ್ರಿಗಳು ಕುರ್ಚಿಯಿಂದ ಇಳಿದು ಕಾಯಂ ವಿಶ್ರಾಂತಿ ಪಡೆಯಲಿ ಎಂಬ ಹೇಳಿಕೆ ನೀಡುವ ಬಿಜೆಪಿಯವರಿಗೆ ತಲೆ ಸರಿಯಿಲ್ಲ. ಅವರು ಮೂರ್ಖರು ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.











Click it and Unblock the Notifications