ಸಿದ್ದರಾಮಯ್ಯ ಆಡಳಿತ ಹೇಗಿದೆ? ಸುರೇಶ್ ಕುಮಾರ್ ಸಂದರ್ಶನ
ಬೆಂಗಳೂರು, ಜ.20 : 'ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ಜನರ ನಿರೀಕ್ಷೆಗಳನ್ನು ಹುಸಿಗೊಳಿಸಿದ್ದಾರೆ. ಆಡಳಿತ ನಡೆಸಿದ ಅನುಭವವಿದೆ ಎಂಬ ಕಾರಣಕ್ಕೆ ಜನರು ಅವರ ಮೇಲೆ ಅಪಾರ ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಜನರಿಗೆ ನಿರಾಸೆಯಾಗಿದೆ' ಎಂದು ಮಾಜಿ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.
ಒನ್ ಇಂಡಿಯಾಕ್ಕೆ ಸಂದರ್ಶನ ನೀಡಿರುವ ರಾಜಾಜಿನಗರ ಶಾಸಕ ಮತ್ತು ಹಿರಿಯ ಬಿಜೆಪಿ ನಾಯಕ ಸುರೇಶ್ ಕುಮಾರ್, ಸಿದ್ದರಾಮಯ್ಯ ಸರ್ಕಾರ, ದೆಹಲಿ ವಿಧಾನಸಭೆ ಚುನಾವಣೆ ಮುಂತಾದ ವಿಚಾರಗಳ ಕುರಿತು ಮಾತನಾಡಿದ್ದಾರೆ. ಸಂದರ್ಶನದ ವಿವರ ಇಲ್ಲಿದೆ ನೋಡಿ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ಹೇಗಿದೆ?
ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಜನರ ನಿರೀಕ್ಷೆಗಳನ್ನು ಹುಸಿ ಮಾಡಿದೆ. ಆಡಳಿತದ ಅನುಭವವಿದೆ ಎಂಬ ಕಾರಣಕ್ಕೆ ಜನರು ಸಿಎಂ ಮೇಲೆ ಅಪಾರ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರು. ಆದರೆ, ಈಗ ಆ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ. [ಕಿರಣ್ ಬೇಡಿ ದೆಹಲಿ ಸಿಎಂ ಅಭ್ಯರ್ಥಿ]
ಇಂದಿನ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ನೋಡಿದರೆ ಅವರು ಮತ್ತು ಸಚಿವರು ಆಡಳಿತಕ್ಕಿಂತ ಇತರ ಚಟುವಟಿಕೆಗಳಲ್ಲಿ ಬ್ಯುಸಿಯಾಗಿದ್ದಾರೆ ಎಂಬುದು ತಿಳಿದುಬರುತ್ತದೆ. ಆಡಳಿತ ಮೇಲೆ ಅವರ ಗಮನವನ್ನೇ ಹರಿಸುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲನ್ನು ಕಂಡ ಬಳಿಕವೂ ನಾಕಯಕರ ವರ್ತನೆಗಳು ಬದಲಾಗಿಲ್ಲ.
ಸಿದ್ದರಾಮಯ್ಯ ಸರ್ಕಾರ ಏಕೆ ಜನರಿಗೆ ನಿರಾಸೆ ಮಾಡುತ್ತಿದೆ?
ಕರ್ನಾಟಕದ ಕಾಂಗ್ರೆಸ್ ಸರ್ಕಾರ ಯಾರ ಸಲಹೆಯಂತೆ ಕಾರ್ಯನಿರ್ವಹಿಸುತ್ತಿದೆ ಎಂಬುದು ತಿಳಿದಿಲ್ಲ. ನಾವು ಬಿಜೆಪಿ ವಿರೋಧಿ ಎಂದು ತೋರಿಸಿಕೊಳ್ಳಲು ಅವರು ಪ್ರಯತ್ನ ಪಡುತ್ತಿದ್ದಾರೆ. ಮೊದಲು ಶಾದಿ ಭಾಗ್ಯ ಯೋಜನೆ ಆರಂಭಿಸಿದರು, ನಂತರ ಮೂಡನಂಬಿಕೆ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾದದರು ಹೀಗೆ ಬಿಜೆಪಿಯ ವಿರುದ್ಧವಾಗಿದ್ದೇವೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ.

ಕರ್ನಾಟಕ ಬಿಜೆಪಿಗೆ ಹೊಸ ಮುಖದ ಅಗತ್ಯವಿದೆಯೇ?
ಕರ್ನಾಟಕದ ವಿಧಾನಸಭೆ ಚುನಾವಣೆಗೆ ಬಹಳಷ್ಟು ಸಮಯ ಬಾಕಿ ಉಳಿದಿದೆ. 2018ಕ್ಕೆ ಚುನಾವಣೆ ಇದೆ. ನಾವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯತ್ತ ಗಮನಹರಿಸಿದ್ದೇವೆ. ಹೊಸ ಮುಖದ ಅಗತ್ಯದ ಬಗ್ಗೆ ತಿಳಿದಿಲ್ಲ ನಾವೆಲ್ಲರೂ ಒಟ್ಟಾಗಿ ಪಕ್ಷಕ್ಕಾಗಿ ಕೆಲಸ ಮಾಡುತ್ತೇವೆ.
ಕಿರಣ್ ಬೇಡಿ ಬಗ್ಗೆ ಏನು ಹೇಳುವಿರಿ?
ಕಿರಣ್ ಬೇಡಿ ಪರಿಚಯ ಜನರಿಗೆ ಚೆನ್ನಾಗಿ ಇದೆ. ಐಪಿಎಸ್ ಅಧಿಕಾರಿಯಾಗಿ ಕೆಲಸ ಮಾಡುವಾಗಲೂ ಅವರು ಉತ್ತಮ ಹೆಸರುಗಳಿಸಿದ್ದರು. ನಿವೃತ್ತಿ ನಂತರವೂ ಅವರು ಸಮಾಜ ಸೇವೆಯನ್ನು ಮುಂದುವರೆಸಿದ್ದರು ಮತ್ತು ನೂರಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ. ಸದ್ಯ ಅವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.
ಸಿಎಂ ಅಭ್ಯರ್ಥಿಯಾಗಿ ಕಿರಣ್ ಬೇಡಿ ಘೋಷಣೆ ಮಾಡಿದ ಬಗ್ಗೆ?
ಕಳೆದ ಕೆಲವು ದಿನಗಳಿಂದ ಬಿಜೆಪಿ ಯಾವ ಚುನಾವಣೆಯಲ್ಲಿಯೂ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಘೋಷಣೆ ಮಾಡಿರಲಿಲ್ಲ. ಆದರೆ, ಎಲ್ಲಾ ರಾಜ್ಯಗಳನ್ನು ಒಂದೇ ದೃಷ್ಟಿಯಿಂದ ನೋಡುವಂತಿಲ್ಲ. ದೆಹಲಿಯ ಪರಿಸ್ಥಿತಿಯೇ ಬೇರೆಯಾಗಿದೆ. ಕಿರಣ್ ಬೇಡಿ ಹೆಸರನ್ನು ಘೋಷಣೆ ಮಾಡಿದ್ದರಿಂದ ಪಕ್ಷಕ್ಕೆ ಹೆಚ್ಚಿನ ಬಲ ಬಂದಂತಾಗಿದೆ.












Click it and Unblock the Notifications