ಕೇವಲ 24 ಗಂಟೆಯಲ್ಲಿ ಮಹಿಳೆಗೆ ನ್ಯಾಯ ದೊರಕಿಸಿಕೊಟ್ಟ ಕುಮಾರಸ್ವಾಮಿ
ಬೆಂಗಳೂರು, ಸೆಪ್ಟೆಂಬರ್ 04: ಜನತಾದರ್ಶನಕ್ಕೆ ಬಂದು ತನ್ನ ಕಷ್ಟ ಹೇಳಿಕೊಂಡಿದ್ದ ಮಹಿಳೆಯೊಬ್ಬರಿಗೆ ಕೇವಲ 24 ಗಂಟೆಯಲ್ಲಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಸಿಎಂ ಕುಮಾರಸ್ವಾಮಿ.
ಶನಿವಾರ ಸಿಎಂ ಅವರ ಜನತಾದರ್ಶನಕ್ಕೆ ಬಂದಿದ್ದ ಮಧ್ಯಪ್ರದೇಶದ ಮೂಲದ ಬೆಂಗಳೂರಿನ ನಿವಾಸಿ ವಂದನಾ ಅವರು, ತಮಗೆ ವಿಕೆಸಿ ಬಿಲ್ಡರ್ಸ್ ಎಂಬ ಸಂಸ್ಥೆಯಿಂದ ಮೋಸವಾಗುತ್ತಿರುವ ಬಗ್ಗೆ ಅವಲತ್ತುಕೊಂಡಿದ್ದರು.
ಮಹಿಳೆ ವಂದನಾ ಅವರ ಸಮಸ್ಯೆ ಆಲಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು, ಅವರು ತಂದಿದ್ದ ದಾಖಲೆಗಳನ್ನೆಲ್ಲಾ ನೋಡಿ ಅಲ್ಲಿಯೇ ಇದ್ದ ಪೊಲೀಸ್ ಅಧಿಕಾರಿಗಳಿಗೆ ಪ್ರಕರಣದ ತನಿಖೆ ನಡೆಸುವಂತೆ ಸೂಚಿಸಿದ್ದರು. ಅದರಂತೆ ಕಾರ್ಯ ನಿರ್ವಹಿಸಿದ ಪೊಲೀಸರು ವಂದನಾ ಅವರಿಗೆ ಕೇವಲ 24 ಗಂಟೆಯಲ್ಲಿ ನ್ಯಾಯ ದೊರಕಿಸಿಕೊಟ್ಟಿದ್ದಾರೆ.
ಇಂದು ಸಿಎಂ ಕಚೇರಿಗೆ ಬಂದಿದ್ದ ಮಹಿಳೆ ವಂದನಾ ಸಿಎಂ ಕುಮಾರಸ್ವಾಮಿ ಅವರಿಗೆ ಹಾಗೂ ತಮಗೆ ನ್ಯಾಯ ದೊರಕಿಸಿಕೊಡಲು ಸಹಾಯ ಮಾಡಿದ ಪೊಲೀಸರಿಗೆ ಧನ್ಯವಾದ ಹೇಳಿದರು.

64 ಲಕ್ಷ ಕೊಟ್ಟು ಮೋಸ ಹೋಗಿದ್ದ ವಂದನಾ
ವಂದನಾ ಅವರು ವಿಕೆಸಿ ಬಿಲ್ಡರ್ಸ್ಗೆ 64 ಲಕ್ಷ ಕೊಟ್ಟು ಮನೆಯೊಂದನ್ನು ಕಳೆದ ವರ್ಷದ ಅಂತ್ಯದಲ್ಲಿ ಕೊಂಡುಕೊಂಡಿದ್ದರು. ಆದರೆ ವಿಕೆಸಿ ಡೆವೆಲಪರ್ಸ್ನ ಚೌರಾಸಿಯಾ ಮನೆಯನ್ನು ರಿಜಿಸ್ಟರ್ ಮಾಡಿಸಿರಲಿಲ್ಲ. ನೊಂದಾವಣಿ ಮಾಡಿಸಿಕೊಳ್ಳುವುದು ಖರೀದಿದಾರರ ಹಕ್ಕು ಆದರೆ ಚೌರಾಸಿಯಾ ಬೇಕೆಂದೆ ನೊಂದಾವಣಿ ಮಾಡಿಸಿರಲಿಲ್ಲ.

ಪರೋಕ್ಷವಾಗಿ ಬೆದರಿಕೆ ಹಾಕಿದ್ದ ಚೌರಾಸಿಯಾ
ವಂದನಾ ಅವರು ಮನೆ ನೊಂದಾವಣಿ ಬಗ್ಗೆ ಕೇಳಿದಾಗಲೆಲ್ಲಾ ಮುಂದಕ್ಕೆ ಹಾಕುತ್ತಲೇ ಬಂದರು. ಅಷ್ಟೆ ಅಲ್ಲದೆ ಪರೋಕ್ಷವಾಗಿ ಬೆದರಿಕೆ ಸಹ ಹಾಕುತ್ತಿದ್ದರು. ಇದರಿಂದ ನೊಂದ ವಂದನಾ ಅವರು ಸಿಎಂ ಅವರ ಜನತಾ ದರ್ಶನಕ್ಕೆ ಬಂದು ಕುಮಾರಸ್ವಾಮಿ ಅವರ ಬಳಿ ತಮ್ಮ ನೋವು ತೋಡಿಕೊಂಡರು.

ಸಿಎಂ ಸೂಚನೆಯಂತೆ ದೂರು ದಾಖಲು
ಸಿಎಂ ಅವರ ಸೂಚನೆಯಂತೆ ಮಾರುತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಯಿತು. ಡಿಸಿಪಿ ಅಹ್ಮದ್ ಅಹಾದ್ ಅವರು ವಿಕೆಸಿ ಡೆವಲಪರ್ಸ್ ಮೇಲೆ ವಂಚನೆ ಪ್ರಕರಣವನ್ನು ದಾಖಲಿಸಿದರು. ಕೂಡಲೇ ಎಚ್ಚೆತ್ತ ಚೌರಾಸಿಯಾ ಸೋಮವಾರವೇ ವಂದನಾ ಅವರ ಮನೆ ರೆಜಿಸ್ಟರ್ ಮಾಡಿ ಕೊಟ್ಟಿದ್ದಾರೆ. ವಂದನಾ ಅವರು ಠಾಣೆಯಲ್ಲಿ ದೂರು ನೀಡಿದ ಕೇವಲ 24 ಗಂಟೆಯಲ್ಲಿ ಅವರಿಗೆ ನ್ಯಾಯ ದೊರೆತಿದೆ.

ತಮ್ಮ ಸಂಪಾದನೆಯಲ್ಲ ಮನೆಗೆ ಕೊಟ್ಟಿದ್ದ ವಂದನಾ
ಎಸ್ಬಿಐ ನಲ್ಲಿ ಸಾಲ ಪಡೆದು, ಸ್ವಂತ ಉಳಿತಾಯದ ಹಣವನ್ನೆಲ್ಲಾ ಹಾಕಿ ಕೊಂಡಿದ್ದ ಮನೆ, ಸಿಎಂ ಕುಮಾರಸ್ವಾಮಿ ಅವರಿಂದ ಮರಳಿ ಬಂದಿದ್ದಕ್ಕೆ ಸಂತೋಶಿತರಾಗಿದ್ದಾರೆ ವಂದನಾ. ಇಂದು ಸೇಲ್ ಡೀಡ್ ಕಾಪಿಯನ್ನು ಸಿಎಂ ಅವರ ಕೈಯಿಂದಲೇ ವಂದನಾ ಅವರು ಪಡೆದುಕೊಂಡು ತಮ್ಮ ಧನ್ಯವಾದಗಳನ್ನು ಕುಮಾರಸ್ವಾಮಿ ಅವರಿಗೆ ಹೇಳಿದರು.

ಸಿಎಂ ನನಗಾಗಿ ಸಮಯ ಕೊಟ್ಟರು
ಒಬ್ಬ ಮುಖ್ಯಮಂತ್ರಿಯಾಗಿ ಅವರು ತಮ್ಮ 25 ನಿಮಿಷ ಅಮೂಲ್ಯ ಸಮಯವನ್ನು ನನಗಾಗಿ ಕೊಟ್ಟರು. ನಾನು ಹೇಳಿದ ದೂರನ್ನು ಕಿವಿಗೊಟ್ಟ ಕೇಳಿದರು. ನಾನು ತೋರಿಸಿದ ದಾಖಲೆಗಳನ್ನು ತಾಳ್ಮೆಯಿಂದ ನೋಡಿದರು. ನನಗೆ ಅನ್ಯಾಯವಾಗಿದೆ ಎಂದು ಮನದಟ್ಟಾದ ಕೂಡಲೇ ಪೊಲೀಸರಿಗೆ ಸೂಚನೆ ನೀಡಿದರು. ಪೊಲೀಸರು ಅತಿ ಶೀಘ್ರವಾಗಿ ತನಿಖೆ ನಡೆಸಿ ಅಲ್ಲಿ-ಇಲ್ಲಿ ಅಲೆಸದೆ ಬಹಳ ಸೌಜನ್ಯದಿಂದ ವರ್ತಿಸಿ ಕೇವಲ 24 ಗಂಟೆಯಲ್ಲಿ ನನಗೆ ನ್ಯಾಯ ಒದಗಿಸಿದರು. 64 ಲಕ್ಷ ಹಣ ಕೈತಪ್ಪಿಹೋಗುತ್ತದೆ ಎಂದು ಭಯಭೀತಳಾಗಿದ್ದೆ ಆದರೆ ಈಗ ನೆಮ್ಮದಿಯಿಂದ್ದೇನೆ ಎಂದು ವಂದನಾ ಹೇಳಿದರು.












Click it and Unblock the Notifications