ವಿಧಾನಸೌಧಕ್ಕೆ ಇನ್ನೂ ಆಗಮಿಸದ ಸಿಎಂ ಎಚ್.ಡಿ.ಕುಮಾರಸ್ವಾಮಿ!
ಬೆಂಗಳೂರು, ಜುಲೈ 23 : ಕರ್ನಾಟಕ ವಿಧಾನಸಭೆಯಲ್ಲಿ ವಿಶ್ವಾಸಮತದ ಮೇಲೆ ಚರ್ಚೆಗಳು ನಡೆಯುತ್ತಿವೆ. 10 ಗಂಟೆಗೆ ಕಲಾಪ ಆರಂಭವಾಗಿದೆ. ಆದರೆ, ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಇಲ್ಲಿಯ ತನಕ ವಿಧಾನಸೌಧಕ್ಕೆ ಆಗಮಿಸಿಲ್ಲ.
ಮಂಗಳವಾರದ ವಿಧಾನಸಭೆ ಕಲಾಪ ಆರಂಭವಾಗಿದೆ. ಮತ್ತೊಂದು ಕಡೆ ಸ್ಪೀಕರ್ ಕಚೇರಿಯಲ್ಲಿ ಶಾಸಕರ ಅನರ್ಹತೆ ಕುರಿತು ವಿಚಾರಣೆ ನಡೆಯುತ್ತಿದೆ. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಮಾತ್ರ ವಿಧಾನಸೌಧಕ್ಕೆ ಆಗಮಿಸಿಲ್ಲ. ಸಿಎಂ ನಡೆ ಕುತೂಹಲಕ್ಕೆ ಕಾರಣವಾಗಿದೆ.

ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ತಾಜ್ ವೆಸ್ಟ್ ಎಂಡ್ ಹೋಟೆಲ್ನಲ್ಲಿಯೇ ಇದ್ದಾರೆ. ಬೆಳಗ್ಗೆ ಅವರು ಎಚ್. ಡಿ. ದೇವೇಗೌಡರ ನಿವಾಸಕ್ಕೆ ಭೇಟಿ ಕೊಟ್ಟಿದ್ದರು. ಬಳಿಕ ಹೋಟೆಲ್ಗೆ ವಾಪಸ್ ಆಗಿದ್ದು, ಸದನಕ್ಕೆ ಇನ್ನೂ ಆಗಮಿಸಿಲ್ಲ.
ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ತಾಜ್ ವೆಸ್ಟ್ ಎಂಡ್ ಹೋಟೆಲ್ಗೆ ತೆರಳಿ ಕುಮಾರಸ್ವಾಮಿ ಅವರ ಜೊತೆ ಒಂದು ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಬಳಿಕ ಅವರು ವಿಧಾನಸೌಧಕ್ಕೆ ಆಗಮಿಸಿದರು. ಆದರೆ, ಸಿಎಂ ಹೋಟೆಲ್ನಲ್ಲಿಯೇ ಇದ್ದಾರೆ.
ಸೋಮವಾರವೂ ಭೋಜನ ವಿರಾಮದ ಬಳಿಕ ಎಚ್. ಡಿ. ಕುಮಾರಸ್ವಾಮಿ ಸದನಕ್ಕೆ ಆಗಮಿಸಿರಲಿಲ್ಲ. ಸಂಜೆ ಕೆಲವು ಹೊತ್ತು ಸದನದಲ್ಲಿದ್ದು ಬಳಿಕ ವಾಪಸ್ ಆಗಿದ್ದರು. ರಾತ್ರಿ 11.40ಕ್ಕೆ ಕಲಾಪವನ್ನು ಮಂಗಳವಾರಕ್ಕೆ ಮುಂದೂಡುವಾಗ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಇಬ್ಬರೂ ಸದನದಲ್ಲಿರಲಿಲ್ಲ.












Click it and Unblock the Notifications