ಸಾರಿಗೆ ಇಲಾಖೆ ನೌಕರರಿಗೆ ತಕ್ಷಣ ವೇತನ ಪಾವತಿ; ಸಿಎಂ ಸೂಚನೆ
ಬೆಂಗಳೂರು, ನವೆಂಬರ್ 16: ಕರ್ನಾಟಕದ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ಕರ್ನಾಟಕ ಸರ್ಕಾರ ಸಿಹಿ ಸುದ್ದಿ ನೀಡಿದೆ. ಒಟ್ಟು 1.35 ಲಕ್ಷ ಸಿಬ್ಬಂದಿಗೆ ವೇತನ ನೀಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಸಾರಿಗೆ ಸಚಿವ ಮತ್ತು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪರನ್ನು ಭೇಟಿಯಾಗಿದ್ದರು. ಕೆ. ಎಸ್. ಆರ್. ಟಿ. ಸಿ ಹಾಗೂ ಇತರ ನಿಗಮಗಳ ಸಿಬ್ಬಂದಿಗಳಿಗೆ ವೇತನ ನೀಡಲು ಅಗತ್ಯವಾದ ಅನುದಾನ ಬಿಡುಗಡೆ ಮಾಡಲು ಮನವಿ ಸಲ್ಲಿಸಿದರು.
ಯಡಿಯೂರಪ್ಪ ಭೇಟಿ ಬಳಿಕ ಮಾತನಾಡಿದ ಸಚಿವರು, "ಯಡಿಯೂರಪ್ಪ ಭೇಟಿಯಾಗಿ ಮನವಿ ಸಲ್ಲಿಸಿದ್ದೇವೆ. ಮನವಿಗೆ ಸ್ಪಂದಿಸಿರುವ ಅವರು, 624 ಕೋಟಿ ರೂಪಾಯಿ ನೀಡುವುದಕ್ಕೆ ಒಪ್ಪಿಗೆ ನೀಡಿದ್ದಾರೆ. ತಕ್ಷಣ 2 ತಿಂಗಳ ವೇತನ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ" ಎಂದರು.
"ಯಡಿಯೂರಪ್ಪ ಅವರು ಸಾರಿಗೆ ನಿಗಮಗಳ ನೌಕರರ ಡಿಸೆಂಬರ್ ತಿಂಗಳ ವೇತನ ಬಿಡುಗಡೆ ಮಾಡುವ ಭರವಸೆಯನ್ನು ನೀಡಿದ್ದಾರೆ' ಎಂದು ಸಾರಿಗೆ ಸಚಿವರು ಹೇಳಿದರು. ದೀಪಾವಳಿ ಸಂದರ್ಭದಲ್ಲಿ ವೇತನ ಬಿಡುಗಡೆ ಮಾಡದ ಕುರಿತು ಚರ್ಚೆಗಳು ಆರಂಭವಾಗಿದ್ದವು.

ವೇತನ ಪಾವತಿ ಆಗಿರಲಿಲ್ಲ
ಕೆಎಸ್ಆರ್ಟಿಸಿ, ಬಿಎಂಟಿಸಿ, ವಾಯುವ್ಯ ಕರ್ನಾಟಕ, ಈಶಾನ್ಯ ಕರ್ನಾಟಕ ಸೇರಿದಂತೆ ನಾಲ್ಕು ಸಾರಿಗೆ ನಿಗಮಗಳ ನೌಕರರಿಗೆ ನವೆಂಬರ್ 14 ಕಳೆದರೂ ಅಕ್ಟೋಬರ್ ತಿಂಗಳ ವೇತನ ಆಗಿರಲಿಲ್ಲ. ಇದರಿದಿಂದಾಗಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನೌಕರರು ಸಂಕಷ್ಟಕ್ಕೆ ಸಿಲುಕಿದ್ದರು.

ಹಣ ಬಿಡುಗಡೆಗೆ ಮನವಿ
ಕೋವಿಡ್ ಲಾಕ್ ಡೌನ್ ಘೋಷಣೆ ಪರಿಣಾಮ ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಅಕ್ಟೋಬರ್ನಿಂದ ಡಿಸೆಂಬರ್ ತನಕ ಪ್ರತಿ ತಿಂಗಳು ಸಿಬ್ಬಂದಿ ವೇತನ ಪಾವತಿಗೆ ತಲಾ 211 ಕೋಟಿಯಂತೆ 634 ಕೋಟಿ ಬಿಡುಗಡೆ ಮಾಡಬೇಕು ಎಂದು ಅಕ್ಟೋಬರ್ 15ರಂದು ಸಾರಿಗೆ ಇಲಾಖೆ ಹಣಕಾಸು ಇಲಾಖೆಗೆ ಪತ್ರ ಬರೆದಿತ್ತು. ಆದರೆ, ಇಲಾಖೆ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿತ್ತು.

ಸಂಪನ್ಮೂಲ ಸಂಗ್ರಹ ಮಾಡಿಕೊಳ್ಳಿ
ಏಪ್ರಿಲ್ನಿಂದ ಸೆಪ್ಟೆಂಬರ್ ತನಕ ಸಿಬ್ಭಂದಿ ವೇತನ ಪಾವತಿ ಮಾಡಲು ಹಣಕಾಸು ಇಲಾಖೆ 1,499.08 ಕೋಟಿಯನ್ನು ಸಾರಿಗೆ ಇಲಾಖೆಗೆ ನೀಡಿತ್ತು. ಬಳಿಕ ಸಂಪನ್ಮೂಲವನ್ನು ಸಂಗ್ರಹ ಮಾಡಿಕೊಳ್ಳಬೇಕು ಎಂದು ಷರತ್ತು ಸಹ ಹಾಕಲಾಗಿತ್ತು. ಆದ್ದರಿಂದ, ಮತ್ತೆ ಹಣಕಾಸು ನೆರವು ನೀಡಲು ಆಕ್ಷೇಪ ವ್ಯಕ್ತಪಡಿಸಿತ್ತು.
Recommended Video

ಸಾರಿಗೆ ಸಚಿವರ ಹೇಳಿಕೆ
ವೇತನ ಪಾವತಿ ವಿಳಂಬದ ಬಗ್ಗೆ ಮಾತನಾಡಿದ್ದ ಸಾರಿಗೆ ಸಚಿವ ಲಕ್ಷ್ಮಣ ಸವದಿ, "ಕೋವಿಡ್ ಕಾರಣದಿಂದ ಬಸ್ ಸಂಚಾರಕ್ಕೆ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿದೆ. ಇದರಿಂದ ನಮಗೆ ಖರ್ಚು ಹೆಚ್ಚಾಗುತ್ತಿದೆ. ಹೀಗಾಗಿ ವೇತನ ಕೊಡಲು ನಮ್ಮ ಬಳಿ ಹಣವಿಲ್ಲ" ಎಂದು ಹೇಳಿದ್ದರು.












Click it and Unblock the Notifications