ಉಪ ಚುನಾವಣೆ ಗೆಲ್ಲಲು ತಂತ್ರ ಹಣೆಗೆ ಯಡಿಯೂರಪ್ಪ!
ಬೆಂಗಳೂರು, ನವೆಂಬರ್ 17 : 15 ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಟಿಕೆಟ್ ಹಂಚಿಕೆ ಪ್ರಕ್ರಿಯೆ ಮುಗಿದಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳನ್ನು ಗೆಲ್ಲಲು ತಂತ್ರ ರೂಪಿಸುತ್ತಿದ್ದಾರೆ.
ನವೆಂಬರ್ 18ರ ಸೋಮವಾರದಿಂದ ಯಡಿಯೂರಪ್ಪ 15 ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯವನ್ನು ಆರಂಭಿಸಲಿದ್ದಾರೆ. ಮೊದಲು ಹೊಸಕೋಟೆ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರವಾಗಿ ಅವರು ಮತಯಾಚನೆ ಮಾಡಲಿದ್ದಾರೆ.
ಎಲ್ಲಾ ಕ್ಷೇತ್ರಗಳ ಪ್ರಚಾರಕ್ಕೆ ಯಡಿಯೂರಪ್ಪ ಒಂದು ದಿನ ಮೀಸಲಿಟ್ಟಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್ ಉಪ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಿಸಬಾರದು ಎಂದು ಯಡಿಯೂರಪ್ಪ ನಾಯಕರಿಗೆ ಸೂಚನೆ ನೀಡಿದ್ದಾರೆ.
2018ರ ಚುನಾವಣೆಯಲ್ಲಿ ನಾವು ಕೆಲಸ ಮಾಡಿದ ಅಭ್ಯರ್ಥಿ ಪರವಾಗಿ ಈ ಬಾರಿ ಕೆಲಸ ಮಾಡಬೇಕಿದೆ. ಆದರೆ, ಅನಿವಾರ್ಯವಾಗಿದೆ. ಎಲ್ಲಾ ಅಸಮಾಧಾನ ಬದಿಗಿಟ್ಟು, ಒಟ್ಟಾಗಿ ಅನರ್ಹ ಶಾಸಕರ ಗೆಲುವಿಗೆ ದುಡಿಯೋಣ ಎಂದು ಯಡಿಯೂರಪ್ಪ ಕರೆ ಕೊಟ್ಟಿದ್ದಾರೆ.

ಎಲ್ಲಾ ಕ್ಷೇತ್ರದಲ್ಲೂ ಒಂದು ದಿನ ಪ್ರಚಾರ
ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸೋಮವಾರದಿಂದ ಉಪ ಚುನಾವಣೆ ಪ್ರಚಾರ ಆರಂಭಿಸಲಿದ್ದಾರೆ. ಎಲ್ಲಾ 15 ಕ್ಷೇತ್ರಗಳಲ್ಲೂ ಒಂದು ದಿನ ಅವರು ಪ್ರಚಾರ ಮಾಡಲಿದ್ದಾರೆ. ಕೆಲವು ಕ್ಷೇತ್ರದಲ್ಲಿ ಈಗಾಗಲೇ ಸಮಾವೇಶಗಳನ್ನು ಮಾಡಿ ಅವರು ಹಲವಾರು ಕೊಡುಗೆಗಳನ್ನು ಘೋಷಣೆ ಮಾಡಿದ್ದಾರೆ. ಅನರ್ಹ ಶಾಸಕರನ್ನು ಗೆಲ್ಲಿಸಬೇಕು ಎಂದು ಯಡಿಯೂರಪ್ಪ ಪಣ ತೊಟ್ಟಿದ್ದಾರೆ.

ಉಸ್ತುವಾರಿಗಳ ಜೊತೆ ಸಭೆ
ಯಡಿಯೂರಪ್ಪ 15 ಕ್ಷೇತ್ರದ ಉಸ್ತುವಾರಿಗಳ ಜೊತೆ ನಿರಂತರ ಸಭೆ ನಡೆಸಲಿದ್ದಾರೆ. ಕ್ಷೇತ್ರದಲ್ಲಿನ ಬೆಳವಣಿಗೆ ಬಗ್ಗೆ ಕ್ಷಣ-ಕ್ಷಣದ ಮಾಹಿತಿ ಸಂಗ್ರಹಿಸಲಿದ್ದಾರೆ. ಅದರಲ್ಲೂ ಟಿಕೆಟ್ ವಿಚಾರಕ್ಕೆ ಅಸಮಾಧಾನ ಉಂಟಾದ ಕ್ಷೇತ್ರದತ್ತ ಯಡಿಯೂರಪ್ಪ ಹೆಚ್ಚು ಗಮನ ಹರಿಸಿದ್ದಾರೆ.

ಎಲ್ಲಾ ಮುಖಂಡರಿಗೆ ಸೂಚನೆ
ಮುಖ್ಯಮಂತ್ರಿ ಯಡಿಯೂರಪ್ಪ ಪ್ರಚಾರ ನಡೆಸುವ ಸಂದರ್ಭದಲ್ಲಿ ಪಕ್ಷದ ಬೂತ್ ಮಟ್ಟದ ನಾಯಕರು, ಕಾರ್ಯಕರ್ತರು ತಪ್ಪದೇ ಹಾಜರಾಗಬೇಕು ಎಂದು ಸೂಚನೆ ನೀಡಲಾಗಿದೆ. ಸ್ವತಃ ಮುಖ್ಯಮಂತ್ರಿಗಳೇ ಪ್ರಚಾರ ನಡೆಸುವುದರಿಂದ ಕ್ಷೇತ್ರದಲ್ಲಿರುವ ಅಸಮಾಧಾನ ಶಮನಗೊಳ್ಳುವ ನಿರೀಕ್ಷೆ ಇದೆ.

ಯಡಿಯೂರಪ್ಪ ಭರವಸೆ
ಅನರ್ಹ ಶಾಸಕರಿಗೆ ಯಡಿಯೂರಪ್ಪ ನೀಡಿದ್ದ ಭರವಸೆಯಂತೆ ಪ್ರಚಾರ ಕಾರ್ಯದಲ್ಲಿ ತೊಡಗಲಿದ್ದಾರೆ. ಎಲ್ಲಾ ಕ್ಷೇತ್ರದಲ್ಲೂ ತಾವೇ ಬಂದು ಪ್ರಚಾರ ಮಾಡುತ್ತೇನೆ ಎಂದು ಅವರು ಪಕ್ಷ ಸೇರುವಾಗ ಭರವಸೆ ನೀಡಿದ್ದರು.












Click it and Unblock the Notifications