ಸದನದಲ್ಲಿ ಸಿದ್ದರಾಮಯ್ಯನವರ ಬಾಯಿ ಮುಚ್ಚಿಸಿದ ಸಿಎಂ ಬೊಮ್ಮಾಯಿ ಡೆಡ್ಲಿ ಸ್ಪೀಚ್
ಬೆಳಗಾವಿ, ಡಿ 23: ಕರ್ನಾಟಕ ಧಾರ್ಮಿಕ ಸ್ವಾತಂತ್ರ್ಯ ಹಕ್ಕು ಸಂರಕ್ಷಣಾ ವಿಧೇಯಕ - 2021 ಕುರಿತು ಸದನದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಏರುಧ್ವನಿಯಲ್ಲಿ ಚರ್ಚೆ ನಡೆಯುತ್ತಿದೆ. "ನಾನು ಮಹಾತ್ಮ ಗಾಂಧೀಜಿಯವರ ಅನುಯಾಯಿ ಆದರೆ, ಕುರುಡು ಅನುಯಾಯಿ ಅಲ್ಲ" ಎನ್ನುವ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರ ಹೇಳಿಕೆ ಸದನದಲ್ಲಿ ಮತ್ತಷ್ಟು ಗದ್ದಲಕ್ಕೆ ಕಾರಣವಾಯಿತು.
ದೇಶದಲ್ಲಿ ಹಿಂದೂ, ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮತದವರು ಎಷ್ಟು ಜನ 2001ರಲ್ಲಿ ಇದ್ದರು, 2011ರಲ್ಲಿ ಎಷ್ಟು ಜನ ಆದರು ಎನ್ನುವ ಅಂಕಿಅಂಶವನ್ನು ಸಿದ್ದರಾಮಯ್ಯ ಸದನದಲ್ಲಿ ಇಟ್ಟರು. ನಿಮ್ಮ ಅಂಕಿಅಂಶ ತಪ್ಪು ಎಂದು ಬಿಜೆಪಿಯವರು ಪ್ರತ್ಯುತ್ತರ ನೀಡಿದರು.
"ಉತ್ತರ ಪ್ರದೇಶ, ಮಧ್ಯ ಪ್ರದೇಶ ಮತ್ತು ಗುಜರಾತ್ ನಲ್ಲಿನ ಮತಾಂತರ ನಿಷೇಧ ಕಾಯಿದೆಗೂ, ಇಲ್ಲಿ ಮಂಡಿಸುತ್ತಿರುವ ಕಾಯಿದೆಗೂ ಏನೂ ವ್ಯತ್ಯಾಸವಿಲ್ಲ. ಬಹುಷಃ ಇದನ್ನು ಒಬ್ಬರಿಂದಲೇ ಬರೆಸಿರಬೇಕು. ಇದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿಡನ್ ಅಜೆಂಡಾ"ಎಂದು ಸಿದ್ದರಾಮಯ್ಯನವರು ಆಕ್ರೋಶ ವ್ಯಕ್ತ ಪಡಿಸಿದರು.
ಸಿದ್ದರಾಮಯ್ಯನವರು ವಿಧೇಯಕದ ಹಿಂದಿನ ಬಿಜೆಪಿಯ ಗುರಿ ಮತ್ತು ಅದರ ನ್ಯೂನ್ಯತೆಗಳನ್ನು ಸದನದಲ್ಲಿ ಇಡುತ್ತಿದ್ದಾಗ, ಮುಖ್ಯಮಂತ್ರಿ ಸಂವಿಧಾನದ ಪುಸ್ತಕವನ್ನು ಇಟ್ಟುಕೊಂಡು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಬಾಯಿಯನ್ನು ಆ ವೇಳೆ ಮುಚ್ಚಿಸಿದರು.

ಸಿದ್ದರಾಮಯ್ಯನವರು ಖುಷಿಯಾಗಿರಬೇಕು, ಅದಕ್ಕಾಗಿ ಹಾಗೆ ಹೇಳಿದೆ
ವಿರೋಧ ಪಕ್ಷದ ನಾಯಕರೇ ಎನ್ನುವ ಬದಲು ಮಾನ್ಯ ಮುಖ್ಯಮಂತ್ರಿಗಳೇ ಎಂದು ಸಿದ್ದರಾಮಯ್ಯನವರನ್ನು ಸಂಬೋಧಿಸಿದ ಸಿಎಂ ಬೊಮ್ಮಾಯಿ, "ಸಿದ್ದರಾಮಯ್ಯನವರು ಖುಷಿಯಾಗಿರಬೇಕು, ಅದಕ್ಕಾಗಿ ಹಾಗೆ ಹೇಳಿದೆ. ಈಗ, ಶೆಡ್ಯೂಲ್ ಕಾಸ್ಟ್ ನವರಿಗೆ ಹೆಚ್ಚಿನ ಭದ್ರತೆಯನ್ನು ಕೊಟ್ಟರೆ ನಿಮಗಾಗುವ ತೊಂದರೆ ಏನು? ಆ ವರ್ಗದ ಮಹಿಳೆಯರ ಪರಿಸ್ಥಿತಿ ನಮಗೆ ಗೊತ್ತಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷವಾದರೂ ಅವರು ಸಮಾಜದಲ್ಲಿ ಯಾವ ರೀತಿ ತುಳಿತಕ್ಕೆ ಒಳಗಾಗಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಬೇರೆಯವರು ಅದರ ದುರ್ಲಾಭವನ್ನು ಪಡೆದುಕೊಳ್ಳುತ್ತಿರುವುದೂ ನಮಗೆ ಅರಿತಿದೆ" ಎಂದು ಬೊಮ್ಮಾಯಿ ಹೇಳಿದರು.

ಆಮಿಷಕ್ಕೆ ಒಳಪಡಿಸಿ ಮತಾಂತರ ಮಾಡಿದವರಿಗೆ ಶಿಕ್ಷೆ ಕೊಡುವುದು ತಪ್ಪಾ?
"ಹಾಗಾಗಿ ಎಸ್ ಸಿ, ಎಸ್ ಟಿ ಸಮುದಾಯಕ್ಕೆ ವಿಶೇಷ ಭದ್ರತೆಯನ್ನು ನೀಡಬೇಕು ಎನ್ನುವುದು ನಮ್ಮ ಕಾಳಜಿ. ಇದು ನಮ್ಮ ಉದ್ದೇಶ, ನೀವು ಅವರ ಪರವಾಗಿ ಧ್ವನಿ ಎತ್ತಿದವನು ಎಂದು ಹೇಳಿಕೊಳ್ಳುತ್ತಿರುವವರು ಈಗ ಕಡಿಮೆ ಶಿಕ್ಷೆ ಕೊಡಿ ಅಂತೀರಲ್ಲಾ? ಮಾನಸಿಕವಾಗಿ ಆ ವರ್ಗದವರನ್ನು ಆಮಿಷಕ್ಕೆ ಒಳಪಡಿಸಿ ಮತಾಂತರ ಮಾಡಿದವರಿಗೆ ಶಿಕ್ಷೆ ಕೊಡುವುದು ತಪ್ಪಾ? ಮಹಿಳೆಯರಿಗೆ, ಬುದ್ದಿಮಾಂದ್ಯದವರಿಗೆ ಇದರಿಂದ ರಕ್ಷಣೆ ಸಿಗುತ್ತದೆ. ನೀವು ನಮ್ಮನ್ನು ಬೆಂಬಲಿಸುವುದು ಬಿಟ್ಟು ಅದ್ಯಾಕೆ ವಿರೋಧ ವ್ಯಕ್ತ ಪಡಿಸುತ್ತಿದ್ದೀರಾ"ಎಂದು ಮುಖ್ಯಮಂತ್ರಿ ಬೊಮ್ಮಾಯಿಯವರು ಸಿದ್ದರಾಮಯ್ಯನವರನ್ನು ಪ್ರಶ್ನಿಸಿದರು.

ಸಂವಿಧಾನ, ಅಂಬೇಡ್ಕರ್ ಅವರು 46ರಡಿಯಲ್ಲಿ ಉಲ್ಲೇಖಿಸಿದ್ದಾರೆ
"ನಮ್ಮ ಸಂವಿಧಾನದಲ್ಲಿ ಧರ್ಮದ ಮೇಲೆ ಮೀಸಲಾತಿಯಿಲ್ಲ, ಎಸ್ ಸಿ, ಎಸ್ ಟಿ ಸಮುದಾಯಕ್ಕೆ 330ರಡಿಯಲ್ಲಿ ಕಾನೂನು ಇದೆ. ಇವರು ಮತಾಂತರಗೊಂಡರೆ ಅವರು ಮೀಸಲಾತಿ ಅಡಿಯಲ್ಲಿ ಬರುವುದಿಲ್ಲ ಎನ್ನುವುದು ಸಂವಿಧಾನದಲ್ಲಿ ಉಲ್ಲೇಖವಾಗಿದೆ. ಅಂಬೇಡ್ಕರ್ ಅವರು 46ರಡಿಯಲ್ಲಿ ಈ ವರ್ಗದವರು ಸಾಮಾಜಿಕ ತುಳಿತ ಮತ್ತು ಶೋಷಣೆಗೆ ಒಳಗಾದವರನ್ನು ರಕ್ಷಿಸಬೇಕೆಂದು ಕಾನೂನಿನಲ್ಲಿದೆ. ನೀವು ಅವರ ಬಡತನವನ್ನು ಶೋಷಣೆ ಮಾಡುತ್ತಿದ್ದೀರಾ. ಈ ವರ್ಗದವರ ಸ್ಥಿತಿಗತಿ, ಬಡತನ ಶೋಷಣೆಗೆ ಒಳಗಾಗಿದೆ. ಅವರ ಆ ಸ್ಥಿತಿಯನ್ನು ನೋಡಿ, ಒಂದು ರಾಜ್ಯ ಸರಕಾರವಾಗಿ, ಜವಾಬ್ದಾರಿಯುತ ಸ್ಥಾನದಲ್ಲಿರುವ ನಾವು ಸುಮ್ಮನಿರಬೇಕಾ"ಎಂದು ಸಭಾಧ್ಯಕ್ಷರ ಮೂಲಕ ಸಿದ್ದರಾಮಯ್ಯನವರನ್ನು ಸಿಎಂ ಬೊಮ್ಮಾಯಿ ಪ್ರಶ್ನಿಸಿದರು.

ಮನುಷ್ಯತ್ವವಿರುವ ಎಲ್ಲರೂ ಭಾವೋದ್ವೇಗಕ್ಕೆ ಒಳಗಾಗುತ್ತಾರೆ
ಆಗ ಎದ್ದು ನಿಂತ ಸಿದ್ದರಾಮಯ್ಯ, "ಬೊಮ್ಮಾಯಿವರು ಭಾವೋದ್ವೇಗಕ್ಕೆ ಒಳಗಾಗಿದ್ದಾರೆ, ಆದರೆ ನಾನು ಎಮೋಷನಲ್ ಆಗುವುದಿಲ್ಲ"ಎಂದರು. ಆಗ ಮತ್ತೆ ಎದ್ದು ನಿಂತ ಬೊಮ್ಮಾಯಿ, "ಅವರ ದಿನನಿತ್ಯದ ಪರಿಸ್ಥಿತಿಯನ್ನು ನೋಡಿದರೆ, ಭ್ರಮೆಯಿಂದ ಹೇಗೆ ಪರಿವರ್ತನೆ ಮಾಡುತ್ತಾರೆ ಎನ್ನುವುದನ್ನು ನೋಡಿದರೆ, ಮನುಷ್ಯತ್ವವಿರುವ ಎಲ್ಲರೂ ಭಾವೋದ್ವೇಗಕ್ಕೆ ಒಳಗಾಗುತ್ತಾರೆ. ಇದು ಜೀವಂತವಾಗಿರುವ ವಿಚಾರ" ಎಂದು ಬೊಮ್ಮಾಯಿ ಹೇಳಿದಾಗ, ಸಿದ್ದರಾಮಯ್ಯ ಓಕೆ..ಓಕೆ.. ಎಂದರು.












Click it and Unblock the Notifications