ಹಿಂದುಳಿದ ವರ್ಗಗಳ 1.14 ಲಕ್ಷ ಫಲಾನುಭವಿಗಳಿಗೆ 900 ಕೋಟಿ ರೂ. ಹಣ ಬಿಡುಗಡೆ: ಬಸವರಾಜ ಬೊಮ್ಮಾಯಿ
ಬೆಂಗಳೂರು, ಮಾರ್ಚ್ 11: ಹಿಂದುಳಿದ ವರ್ಗಗಳ ವಿವಿಧ ನಿಗಮಗಳ ವತಿಯಿಂದ 1.14 ಲಕ್ಷ ಫಲಾನುಭವಿಗಳಿಗೆ 900 ಕೋಟಿ ರೂ.ಗಳನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಿಡುಗಡೆ ಮಾಡಿದರು.
ಶನಿವಾರ ವಿಧಾನಸೌಧದ ಬೃಹತ್ ಮೆಟ್ಟಿಲುಗಳ ಮೇಲೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ವಿವಿಧ ಕಟ್ಟಡ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ವಿವಿಧ ಅಭಿವೃದ್ಧಿ ನಿಗಮದ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಿ ಮಾತನಾಡಿದ ಅವರು, ಯಾರಿಗೋಸ್ಕರ ಈ ಶಕ್ತಿ ಸೌಧ ಕಟ್ಟಿದ್ದಾರೆ ಅವರು ಸರ್ಕಾರದ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಅದರ ಲಾಭವನ್ನು ಪಡೆಯುವುದು ವ್ಯವಸ್ಥೆ ನಿಜವಾದ ಪ್ರಜಾಪ್ರಭುತ್ವದ ವ್ಯವಸ್ಥೆ ಎಂದರು.

ಸರ್ಕಾರ ಜನರಿಂದ ಸ್ಥಾಪಿತವಾಗಿದ್ದು, ಇದರ ಅರಿವಿನಿಂದ ಈ ಸೌಧದಲ್ಲಿ ಕೆಲಸ ಮಾಡಬೇಕು. ನ್ಯಾಯ ಕೊಡುವ ಭ್ರಮೆ ಹುಟ್ಟಿಸುವುದರಿಂದ ಬದುಕು ಬಂಗಾರವಾಗೋಲ್ಲ. ಹುಸಿ ಭರವಸೆಯನ್ನ ಕೊಟ್ಟು ನ್ಯಾಯವನ್ನು ನೀಡಲಾಗದು. ವಸ್ತುನಿಷ್ಠವಾಗಿ ಬದುಕಿನಲ್ಲಿ ಸ್ವಾಭಿಮಾನ ಬದುಕನ್ನ ಬದಕಲು ಸಾಧ್ಯವೆಂದು ಮನಗಂಡು ಸರ್ಕಾರ ಕಾರ್ಯಕ್ರಮ ರೂಪಿಸಿದಾಗ ಮಾತ್ರ ಬದಲಾವಣೆ ಸಾಧ್ಯ ಎಂದರು.
ಗಂಗಾ ಕಲ್ಯಾಣ ಯೋಜನೆಯಡಿ 19 ಸಾವಿರ ಫಲಾನುಭವಿಗಳಿಗೆ ಬೇರೆ ಬೇರೆ ನಿಗಮಗಳ ವತಿಯಿಂದ ಕೊಳವೆಬಾವಿ ಮಂಜೂರು ಮಾಡಲಾಗಿದೆ. ಪಂಚವಾರ್ಷಿಕ ಯೋಜನೆಯಂತೆ ಗಂಗಾ ಕಲ್ಯಾಣ ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದರು. ಐದು ತಿಂಗಳಲ್ಲಿ ಆಗೋದನ್ನು ಐದು ವರ್ಷ ಮಾಡುತ್ತಿದ್ದರು. ನಾವು ನೇರವಾಗಿ ಫಲಾನುಭವಿಗಳ ಖಾತೆಗೆ ಅನುದಾನವನ್ನು ವರ್ಗಾಯಿಸುವ ಕೆಲಸವನ್ನು ಮಾಡುತ್ತಿದ್ದೇವೆ. ಗುತ್ತಿಗೆದಾರನಿಗೆ ಸಹಾಯ ಮಾಡೋ ಕೆಲಸ ನಾವು ಮಾಡಿಲ್ಲ ಎಂದರು.

ದೇವರಾಜ ಅರಸು ಹಿಂದುಳಿದ ಆಯೋಗ ರಚಿಸಿ ಹಿಂದುಳಿದವರಿಗೆ ಮೀಸಲಾತಿ ನೀಡಿದ ನಾಯಕ ಡಿ.ದೇವರಾಜ ಅರಸು ಅವರು. ರೈತ ಕಾರ್ಮಿಕರಿಗೆ ವಿದ್ಯಾ ನಿಧಿ ವಿಸ್ತರಿಸಲಾಗಿದೆ. ಸಫಾಯಿ ಕರ್ಮಚಾರಿಗಳಿಗೆ 11, 141 ಜನರೊಗೆ ಖಾಯಂ ಗೊಳಿಸಿ ಒಟ್ಟು 24 ಸಾವಿರ ಪೌರ ಕಾರ್ಮಿಕರಿಗೆ ಖಾಯಂ ಮಾಡಿದಲಾಗಿದೆ. ಸ್ಮಶಾನ ಕಾರ್ಮಿಕರ ಜೀವನಕ್ಕೆ ಭದ್ರತೆ ನೀಡಿದೆ. ಕುರಿಗಾಹಿಗಳಿಗೆ 350 ಕೋಟಿ ವೆಚ್ಚದಲ್ಲಿ ಸಹಾಯ, ಲಮಾಣಿ ಜನಾಂಗಕ್ಕೆ ಹಕ್ಕು ಪತ್ರ ನೀಡಿದೆ. ೫೦ ಸಾವಿರ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕೊಟ್ಟಿದ್ದಾರೆ.
ಕುರುಬರಹಟ್ಟಿ ಗೊಲ್ಲರ ಹಟ್ಟಿ ಲಮಾಣಿ ಸಮುದಾಯಕ್ಕೆ ಒಂದು ವಾರದೊಳಗೆ 1.ಲಕ್ಷ ಜನರಿಗೆ ಹಕ್ಕು ಪತ್ರ ನೀಡಲಾಗುವುದು.ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಒಂದು ಸಾವಿರ ರೂಪಾಯಿ ಕೊಡುತ್ತೇವೆ. ವಿದ್ಯಾರ್ಥಿನಿಯರಿಗೆ ಉಚಿತ ಪಾಸ್ ನೀಡುವ ಕಾರ್ಯಕ್ರಮ ಜಾರಿಯಾಗಿದೆ ಬಜೆಟ್ ನಂತರ 850 ಕೋಟಿ ರೂಪಾಯಿ ಎಲ್ಲಾ ನಿಗಮಗಳಿಗೆ ನೀಡಲಾಗಿದೆ ಎಂದರು.












Click it and Unblock the Notifications