ಅಂಗಾಂಗ ದಾನಕ್ಕೆ ಸಿಎಂ, ಸಚಿವ ಸುಧಾಕರ್ ನಿರ್ಧಾರ
ಬೆಂಗಳೂರು, ಆಗಸ್ಟ್12: ವಿಶ್ವ ಅಂಗಾಂಗ ದಾನ ದಿನಾಚರಣೆಯ (ಆ.13) ಪ್ರಯುಕ್ತ ಶನಿವಾರ ಹಮ್ಮಿಕೊಳ್ಳಲಾಗುವ ವಿಶೇಷ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಸೇರಿದಂತೆ ಆರೋಗ್ಯ ಇಲಾಖೆ ಇನ್ನಿತರ ಸರ್ಕಾರಿ ಅಧಿಕಾರಿಗಳು ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸಿಕೊಳ್ಳಲಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಆರೋಗ್ಯ ಸಚಿವ ಡಾ.ಕೆ.ಸುಧಾಕರ್, "ಸ್ವಾತಂತ್ರ್ಯದ ಅಮೃತ ಮಹೋತ್ಸವದ ಈ ಕಾಲದಲ್ಲಿ ಎಲ್ಲರೂ ಅಂಗಾಂಗ ದಾನಕ್ಕೆ ಹೆಸರು ನೋಂದಾಯಿಸುವ ಮೂಲಕ ಮತ್ತೊಬ್ಬರ ಬದುಕಿಗೆ ಬೆಳಕಾಗಬೇಕು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು, ನಾವು ಸೇರಿದಂತೆ ಅನೇಕ ಶನಿವಾರ ವಿಧಾನಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಹೆಸರು ನೋಂದಾಯಿಸಿಕೊಳ್ಳಲಿದ್ದೇವೆ" ಎಂದು ತಿಳಿಸಿದರು.
"ಬೆಂಗಳೂರಿನ ಮೇಖ್ರಿ ಸರ್ಕಲ್ನಿಂದ ಸ್ವಾತಂತ್ರ್ಯ ಉದ್ಯಾನವರೆಗೆ ಅಂಗಾಂಗ ದಾನ ಕುರಿತು ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವಜನರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಸುಮಾರು 5 ಸಾವಿರ ಜನರು ಪಾಲ್ಗೊಳ್ಳಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಾನವ ಸರಪಳಿ ನಿರ್ಮಿಸಿ ಒಬ್ಬರಿಗೊಬ್ಬರು ಸಹಕಾರ ನೀಡುವ ಸಂದೇಶ ಸಾರಲಾಗುವುದು. ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬೆಳಗ್ಗೆ 8 ರಿಂದ 8.15 ರವರೆಗೆ ಆರೋಗ್ಯ ಕ್ಷೇತ್ರದ ಹಲವರು ಮೂತ್ರಪಿಂಡದ ಆಕಾರದಲ್ಲಿ ಸರಪಳಿ ನಿರ್ಮಿಸಿ ಅರಿವು ಮೂಡಿಸಲಿದ್ದಾರೆ" ಎಂದರು.

ವಿಧಾನಸೌಧದಲ್ಲಿ ಸಿಎಂ ಹೆಸರು ನೋಂದಣಿ
ಜಾಗೃತಿ ಕಾರ್ಯಕ್ರಮ ನಂತರ ವಿಧಾನಸೌಧದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಅಂಗಾಂಗ ದಾನಿಗಳ ಕುಟುಂಬದ ಸದಸ್ಯರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸನ್ಮಾನಿಸಲಿದ್ದಾರೆ. ಹಾಗೆಯೇ ಅಂಗಾಂಗ ಪಡೆದವರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲಿದ್ದಾರೆ. ಈ ವೇಳೆ ಮುಖ್ಯಮಂತ್ರಿಗಳು ಹೆಸರು ನೋಂದಣಿ ಮಾಡಲಿದ್ದಾರೆ.

ಅಂಗಾಂಗ ದಾನಕ್ಕೆ ಆನ್ಲೈನ್ ಹೆಸರು ನೋಂದಾಯಿಸಿ
ಪ್ರಧಾನಿ ನರೇಂದ್ರ ಮೋದಿ ಕೂಡ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಅಂಗಾಂಗ ದಾನ ಕುರಿತು ಕರೆ ನೀಡಿದ್ದಾರೆ. ದೇಶದಲ್ಲಿ 10 ಲಕ್ಷ ಸಾವುಗಳಾದರೆ, 0.08 ಜನರಿಂದ ಮಾತ್ರ ಅಂಗಾಂಗ ದಾನವಾಗುತ್ತಿದೆ. ಸ್ಪೇನ್ನಲ್ಲಿ ಈ ಪ್ರಮಾಣ 40ರಷ್ಟಿದೆ. ಕೆಲ ಸಾಮಾಜಿಕ, ಧಾರ್ಮಿಕ ಹಿನ್ನೆಲೆಯಿಂದಲೂ ಅಂಗಾಂಗ ದಾನಕ್ಕೆ ತೊಡಕುಂಟಾಗುತ್ತಿದೆ.
ರಾಜ್ಯದಲ್ಲಿ ಅಂಗಾಂಗ ದಾನಕ್ಕೆ ಸಂಬಂಧಿಸಿದ ಚಟುವಟಿಕೆ ನಿರ್ವಹಣೆ ಮಾಡಲು 'ಜೀವಸಾರ್ಥಕತೆ' ಎಂಬ ಸೊಸೈಟಿ ಇತ್ತು. ಈಗ 'ಸೊಟ್ಟೊ ಕರ್ನಾಟಕ' ಇದೆ. 'ಸೊಟ್ಟೊ ಕರ್ನಾಟಕ'ದಲ್ಲಿ ಅಂಗಾಂಗ ದಾನ ಮಾಡುವವರು ಆನ್ಲೈನ್ (www.jeevasarthakathe.karnataka.gov.in/Website/English/Home.aspx) ನೋಂದಣಿ ಮಾಡಿಕೊಳ್ಳಬಹುದು. ಈಗಾಗಲೇ 11 ಸಾವಿರ ಜನರು ಅಂಗಾಂಗ ದಾನಕ್ಕೆ ಪ್ರತಿಜ್ಞೆ ಮಾರುವುದು ಮಾದರಿಯಾಗಿದೆ. ರಾಜ್ಯದಲ್ಲಿ ಮೂತ್ರಪಿಂಡಕ್ಕೆ ಕೋರಿ 4,354 ಅರ್ಜಿ ಸಲ್ಲಿಕೆ ಆಗಿವೆ. ಅದೇ ರೀತಿ, 1,141 ಜನರು ಯಕೃತ್ತು, 91 ಜನರು ಹೃದಯ ಬೇಕೆಂದು ಅರ್ಜಿ ಸಲ್ಲಿಸಿದ್ದಾರೆ ಎಂದು ಸಚಿವರು ವಿವರಿಸಿದರು.

3-4 ಲಕ್ಷ ಮೂತ್ರಪಿಂಡಗಳು ಅಗತ್ಯವಿದೆ
ದೇಶದಲ್ಲಿ 3-4 ಲಕ್ಷ ಮೂತ್ರಪಿಂಡಗಳು ಅಂಗಾಂಗ ದಾನಕ್ಕೆ ಅಗತ್ಯವಿದೆ. ಕೋವಿಡ್ ಬಂದಾಗ ಅಂಗಾಂಗ ದಾನ ಮಾಡುವವರ ಸಂಖ್ಯೆ ತೀರಾ ಕಡಿಮೆ ಆಗಿತ್ತು. ರಾಜ್ಯದಲ್ಲಿ ನಿಮ್ಹಾನ್ಸ್ ಹಾಗೂ ಬೌರಿಂಗ್ ಸಂಸ್ಥೆಯಲ್ಲಿ ಮಾತ್ರ ಅಂಗಾಂಗ ದಾನ ಕೇಂದ್ರಗಳಿದ್ದವು. ಎಲ್ಲಾ ವೈದ್ಯಕೀಯ ಕಾಲೇಜುಗಳಲ್ಲಿ ಈ ಕೇಂದ್ರಗಳನ್ನು ನಿರ್ಮಿಸಲು ಕ್ರಮ ಸರ್ಕಾರ ವಹಿಸಿತ್ತು. ಅದರ ಪರಿಣಾಮ ಈಗ 18 ಅಂಗಾಂಗ ದಾನ ಕೇಂದ್ರಗಳು ರಾಜ್ಯದಲ್ಲಿವೆ.
ಈಗ ಅಂಗಾಂಗ ದಾನ ಮಾಡಲು ಅನೇಕರು ಮುಂದೆ ಬರುತ್ತಿರುವುದು ಭರವಸೆ ಅನಾರೋಗ್ಯ ಪೀಡಿತರಲ್ಲಿ ಮೂಡಿಸಿದೆ. ನಟ ಪುನೀತ್ ರಾಜ್ಕುಮಾರ್ ಅವರ ನೇತ್ರದಾನ ಮಾಡಿ ಐದು ಜನರಿಗೆ ದೃಷ್ಟಿ ನೀಡಲಾಗಿದೆ. ನಟ ಸಂಚಾರಿ ವಿಜಯ್ ಅವರ ಅಂಗಾಂಗಳನ್ನು ಇತರಿಗೆ ನೀಡಿ ಐದು ಜನರಿಗೆ ಜೀವ ನೀಡಲಾಗಿದೆ. ಒಬ್ಬರ ಅಂಗಾಂಗ ದಾನ ಐವರಿಗೆ ಜೀವನ ನೀಡುತ್ತದೆ.

ಬಿಜೆಪಿ ಜನೋತ್ಸವ ಸಮಾವೇಶ ಆ.28ಕ್ಕೆ
"ಇದೇ ಆಗಸ್ಟ್ 28ರಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಒಂದು ವರ್ಷ ಪೂರೈಸಿದ್ದರ ಹಿನ್ನೆಲೆ ಜನೋತ್ಸವ ಸಮಾವೇಶ ನಡೆಸಲಾಗುವುದು. ಕೋಲಾರ, ಚಿಕ್ಕಬಳ್ಳಾಪುರ, ತುಮಕೂರು ಬೆಂಗಳೂರು ಗ್ರಾಮಾಂತರ ಸೇರಿದಂತೆ ಕೆಲ ಪ್ರದೇಶಗಳಿಂದ ಮಾತ್ರ ಜನರು ಪಾಲ್ಗೊಳ್ಳಲಿದ್ದಾರೆ. ಸಮಾವೇಶ ಕುರಿತು ರೂಪರೇಷೆ ಸಿದ್ಧವಾಗುತ್ತಿದೆ" ಎಂದು ಸುಧಾಕರ್ ಹೇಳಿದರು.
"ನೆರೆ, ಪ್ರವಾಹ ಪರಿಸ್ಥಿತಿ ವೇಳೆ ರಾಜ್ಯ ಸರ್ಕಾರ ಸಮಾವೇಶ ನಡೆಸದೇ ಪರಿಹಾರ ಕಾರ್ಯ ಕೈಗೊಂಡಿದೆ. ರಾಜ್ಯ ಸರ್ಕಾರ ಜನರಿಗೆ ಉತ್ತಮ ಕಾರ್ಯಕ್ರಮಗಳನ್ನು ನೀಡಿದೆ. ಕೋವಿಡ್ ಕಾಲದಲ್ಲೂ ಶೇ.100ರಷ್ಟು ಲಸಿಕೆ ನೀಡಲಾಗಿದೆ. ಪ್ರಸ್ತುತ ಜನೋತ್ಸವ 'ಜನರ ಉತ್ಸವ'ವಾಗಿ ನಡೆಯಬೇಕೆಂದು ಬಿಜೆಪಿ ಬಯಸಿದೆ. ಸಿದ್ದರಾಮೋತ್ಸವಕ್ಕು ಮುನ್ನವೇ ಜನೋತ್ಸವಕ್ಕೆ ನಿರ್ಧರಿಸಲಾಗಿತ್ತು. ಅಹಿತಕರ ಘಟನೆಯಿಂದ ಕಾರ್ಯಕ್ರಮ ರದ್ದು ಮಾಡಲಾಗಿತ್ತು" ಎಂದು ಅವರು ಹೇಳಿದರು.












Click it and Unblock the Notifications