ಸರ್ಕಾರಿ ನೌಕರರ ಮುಷ್ಕರ; ತಡರಾತ್ರಿ ಸಭೆ ನಡೆಸಿದ ಸಿಎಂ: ಸಮಸ್ಯೆ ಬಗೆ ಹರಿಯುವ ವಿಶ್ವಾಸ: ಬೊಮ್ಮಾಯಿ
ಸರ್ಕಾರಿ ನೌಕರರ ಮುಷ್ಕರ ಹಿನ್ನೆಲೆ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಡ ರಾತ್ರಿ ಸಭೆ ನಡೆಸಿದ್ದಾರೆ.
ಬೆಂಗಳೂರು,ಮಾರ್ಚ್1: ಏಳನೇ ವೇತನ ಆಯೋಗ ಜಾರಿ, ನೂತನ ಪಿಂಚಣಿ ಪದ್ಧತಿರದ್ದು ಮಾಡಬೇಕು ಎಂದು ಒತ್ತಾಯಿಸಿ ರಾಜ್ಯ ಸರ್ಕಾರಿ ನೌಕರರು ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದು, ಮಂಗಳವಾರ ತಡರಾತ್ರಿ ನೌಕರರ ಸಂಘದ ಪದಾಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಭೆ ನಡೆಸಿದ್ದಾರೆ.
ಆದರೆ ಈ ಸಭೆಯಲ್ಲಿ ಯಾವುದೇ ನಿರ್ಣಯಕ್ಕೆ ಬಂದಿಲ್ಲ ಎನ್ನಲಾಗಿದೆ. ಸರ್ಕಾರಿ ನೌಕರರ ಜೊತೆ ಸೌಹಾರ್ದಯುತ ಸಭೆ ನಡೆದಿದ್ದು ಸೌಹಾರ್ದಯುತವಾಗಿ ಸಮಸ್ಯೆ ಬಗೆ ಹರಿಯಲಿದೆ ಎಂದು ಸಿಎಂ ಬಸವರಾಜ ಬೊಮ್ಮಾಯಿಯವರು ಹೇಳಿದ್ದಾರೆ.

ನೌಕರರ ಸಂಘ ಪದಾಧಿಕಾರಿಗಳೊಂದಿಗೆ ಜೊತೆ ಸಭೆ ನಡೆದಿಸ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಹಿರಿಯ ಅಧಿಕಾರಿಗಳ ಜೊತೆ ಹಾಗೂ ನೌಕರರ ಸಂಘದವರ ಜೊತೆ ಸುದೀರ್ಘ ಚರ್ಚೆ ನಡೆಸಿದ್ದೇವೆ. ಅವರು ಹಲವಾರು ವಿಷಯ ಪ್ರಸ್ತಾಪ ಮಾಡಿದ್ದಾರೆ. ಸಾಕಷ್ಟು ವಿಷಯ ಚರ್ಚೆಯಾಗಿದೆ. ಅವರು ಯಾವುದಾದರೂ ಒಂದು ತೀರ್ಮಾನಕ್ಕೆ ಬಂದ ಮೇಲೆ ನಮ್ಮ ಹಣಕಾಸಿನ ನಿರ್ಧಾರ ತೆಗೆದುಕೊಳ್ಳಲು ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.
ನಮ್ಮ ಮಾತುಕತೆಯ ಆಧಾರದ ಮೇಲೆ ಮಾತುಕತೆ ಸೌಹಾರ್ದಯುತವಾಗಿ ಮುಕ್ತಾಯವಾಗುವ ವಿಶ್ಬಾಸ ಇದೆ. ಅವರು ಪದಾಧಿಕಾರಿಗಳ ಜೊತೆ ಚರ್ಚಿಸಿ ನಿರ್ಣಯ ತಿಳಿಸುವುದಾಗಿ ಹೇಳಿದ್ದಾರೆ. ಅವರ ನಿರ್ಣಯದ ಆಧಾರದ ಮೇಲೆ ನಾವು ನಿರ್ಣಯ ಕೈಗೊಳ್ಳುತ್ತೇವೆ.

ವೇತನ ಆಯೋಗಕ್ಕೆ ಆದಷ್ಟು ಬೇಗ ಮಧ್ಯಂತರ ವರದಿ ನೀಡುವಂತೆ ಕೇಳಿದ್ದೇವೆ. ಆದಷ್ಟು ಬೇಗ ವರದಿ ಬರುವ ವಿಶ್ವಾಸ ಇದೆ. ಕೊವಿಡ್ ಸಮಯದಲ್ಲಿ ಸರ್ಕಾರ ಅವರ ಸಂಬಳ ಕಡಿತ ಮಾಡಿಲ್ಲ. ಅಲ್ಲದೇ 24 ಗಂಟೆಯಲ್ಲಿ ಡಿಎ ಹೆಚ್ಚಳ ಮಾಡಿದ್ದೇವೆ. ಅದನ್ನು ಅವರು ಅಪ್ರಿಸಿಯೇಟ್ ಮಾಡಿದ್ದಾರೆ. ಮಾತುಕತೆಯ ಆಧಾರದಲ್ಲಿ ಅವರ ನಿರ್ಣಯದ ಆಧಾರದ ಮೇಲೆ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದರು.












Click it and Unblock the Notifications