ರಾಜಭವನಕ್ಕೆ ಖಾತೆ ಹಂಚಿಕೆ ಪಟ್ಟಿ ಕಳಿಸಿದ ಸಿಎಂ ಯಡಿಯೂರಪ್ಪ
ಬೆಂಗಳೂರು. ಫೆ. 10: ನೂತನ ಸಚಿವರಿಗೆ ಖಾತೆ ಹಂಚಿಕೆ ಪಟ್ಟಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ರಾಜ್ಯಪಾಲರಿಗೆ ಕಳಿಸಿದ್ದಾರೆ. ವಿಧಾನಸೌಧದಲ್ಲಿ ಈ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ದಿವಂಗತ ಕೆಂಗಲ್ ಹನುಮಂತಯ್ಯ ಅವರ 112ನೇ ಜನ್ಮದಿನ ಹಿನ್ನೆಲೆಯಲ್ಲಿ ವಿಧಾನಸೌಧದ ಆವರಣಲ್ಲಿ ಕೆಂಗಲ್ ಪ್ರತಿಮೆ ಬಳಿ, ದಿ. ಹನುಮಂತಯ್ಯ ಅವರ ಭಾವಚಿತ್ರಕ್ಕೆ ಸಿಎಂ ಪುಷ್ಪಾರ್ಚನೆ ಮಾಡಿದ ಬಳಿಕ ಖಾತೆ ಹಂಚಿಕೆ ಬಗ್ಗೆ ಮಾತನಾಡಿದ್ದಾರೆ. ನಿನ್ನೆ ಮತ್ತು ಮೊನ್ನೆ ಸರ್ಕಾರಿ ರಜೆ ಇದ್ದುದರಿಂದ ಇವತ್ತು ಖಾತೆ ಹಂಚಿಕೆ ಪಟ್ಟಿಯನ್ನು ಕಳಿಸಿದ್ದೇನೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಉಪ ಚುನಾವಣೆಯ ಫಲಿತಾಂಶ ಬಂದ ಎರಡು ತಿಂಗಳುಗಳ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆ ಮಾಡಲಾಗಿತ್ತು. ಇದೀಗ ಖಾತೆ ಹಂಚಿಕೆ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಿರ್ಧಾರ ಕೈಗೊಂಡಿದ್ದಾರೆ.
ರಾಜ್ಯಪಾಲರ ಅಂಕಿತ ಬಿದ್ದ ಬಳಿಕ ಖಾತೆ ಹಂಚಿಕೆ ಅಧಿಕೃತವಾಗಿ ಪ್ರಕಟವಾಗಲಿದೆ. ಖಾತೆಗಳ ಬಗ್ಗೆ ಈಗಾಗಲೇ ಮೂಲ-ವಲಸೆ ಸಚಿವರ ಮಧ್ಯೆ ಪೈಪೋಟಿ ಶುರುವಾಗಿತ್ತು, ಯಾವ ರೀತಿ ಸಿಎಂ ಯಡಿಯೂರಪ್ಪ ಎಲ್ಲರನ್ನೂ ಸಂಭಾಳಿಸುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.

ಪೌರಾಡಳಿತ ಖಾತೆ ಬಿಟ್ಟು ಕೊಡಲು ಸಿದ್ಧ: ಆರ್. ಅಶೋಕ್
ಖಾತೆ ಹಂಚಿಕೆ ವಿಚಾರವಾಗಿ ನನಗೇ ಏನೂ ಗೊತ್ತಿಲ್ಲ ಎಂದು ಕಂದಾಯ ಹಾಗೂ ಪೌರಾಡಳಿತ ಸಚಿವ ಆರ್. ಅಶೋಕ್ ಹೇಳಿದ್ದಾರೆ. ಮುಖ್ಯಮಂತ್ರಿಗಳೊಂದಿಗೆ ವಿಧಾನಸೌಧದ ಆವರಣದಲ್ಲಿ ದಿ. ಮಾಜಿ ಸಿಎಂ ಕೆಂಗಲ್ ಹನುಮಂತಯ್ಯ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ಬಳಿಕ ಅವರು ಮಾತನಾಡಿದ್ದಾರೆ. ಕಂದಾಯ ಸಚಿವನಾಗಿ ನಾನು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದೇನೆ. ಈ ಖಾತೆ ನನಗೆ ತೃಪ್ತಿ ತಂದಿದೆ. ಹೆಚ್ಚುವರಿಯಾಗಿ ಕೊಟ್ಟಿದ್ದ ಪೌರಾಡಳಿತ ಖಾತೆಯನ್ನು ಬಿಟ್ಟು ಕೊಟ್ಟಿದ್ದೇನೆ ಎಂದು ಆರ್. ಅಶೋಕ್ ಹೇಳಿದ್ದಾರೆ.

ರಾಜ್ಯಪಾಲರ ಅಂಕಿತದೊಂದಿಗೆ ಅಧಿಕೃತ ಪ್ರಕಟ
ಬಯಸಿದಂತೆಯೆ ಜಲಸಂಪನ್ಮೂಲ ಖಾತೆಯನ್ನು ಸಚಿವ ರಮೇಶ್ ಜಾರಕಿಹೊಳಿ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಖಾತೆ ಹಂಚಿಕೆ ಮಾಡಿ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿರುವ ಪಟ್ಟಿ 'ಒನ್ ಇಂಡಿಯಾ'ಕ್ಕೆ ಲಭ್ಯವಾಗಿದ್ದು, ಸಂಜೆ ಹೊತ್ತಿಗೆ ರಾಜ್ಯಪಾಲ ವಜೂಬಾಯಿ ವಾಲಾ ಅವರ ಅಂಕಿತದೊಂದಿಗೆ ಅಧಿಕೃತವಾಗಿ ಪ್ರಕಟಗೊಳ್ಳಲಿದೆ.
ಜಲಸಂಪನ್ಮೂಲ ಖಾತೆಗೆ ಪಟ್ಟು ಹಿಡಿದಿದ್ದ ಸಚಿವ ರಮೇಶ್ ಜಾರಕಿಹೊಳಿ ಒತ್ತಡಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಣಿದಿದ್ದಾರೆ. ಡಿಸಿಎಂ ಹುದ್ದೆಯ ಬದಲಿಗೆ ಜಲಸಂಪನ್ಮೂಲ ಖಾತೆ ಕೊಡುವ ಮೂಲಕ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಸಿಎಂ ಸಮಾಧಾನ ಮಾಡಿದ್ದಾರೆ. ಜೊತೆಗೆ ಸಚಿವ ರಮೇಶ್ ಜಾರಕಿಹೊಳಿ ಆಪ್ತ ಶಾಸಕ ಮಹೇಶ್ ಕುಮಟಳ್ಳಿ ಅವರಿಗೆ ಎಂಎಸ್ಐಎಲ್ ಅಧ್ಯಕ್ಷ ಸ್ಥಾನ ಕೊಡಲಾಗಿದ್ದು, ಸಂಜೆ ವೇಳೆಗೆ ಸಿಎಂ ಅಧಿಕೃತ ಮುದ್ರೆ ಒತ್ತಲಿದ್ದಾರೆ.
ಇನ್ನು ಗೃಹಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಸಿಎಂ ಯಡಿಯೂರಪ್ಪ ಮತ್ತೆ ಬಂಪರ್ ಗಿಫ್ಟ್ ಕೊಟ್ಟಿದ್ದಾರೆ. ಡಿಸಿಎಂ ಲಕ್ಷ್ಣಣ ಸವದಿ ಅವರ ಬಳಿಯಿದ್ದ ಕೃಷಿ ಖಾತೆಯನ್ನು ಬಸವರಾಜ್ ಬೊಮ್ಮಾಯಿ ಅವರಿಗೆ ಗೃಹ ಖಾತೆ ಜೊತೆಗೆ ಹೆಚ್ಚುವರಿಯಾಗಿ ಕೊಡಲಾಗಿದೆ. ಡಿಸಿಎಂ ಲಕ್ಷ್ಮಣ ಸವದಿ ಅವರಲ್ಲಿ ಸಾರಿಗೆ ಖಾತೆ ಮಾತ್ರ ಉಳಿಸಲಾಗಿದೆ.
ಉಳಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಖಾತೆಗಳನ್ನು ಹಂಚಿಕೆ ಮಾಡಿರುವ ವಿವರ ಹೀಗಿದೆ:
ಎಸ್ ಟಿ ಸೋಮಶೇಖರ್- ಸಹಕಾರ ಇಲಾಖೆ ಖಾತೆ
ಬಿ.ಸಿ. ಪಾಟೀಲ್ - ಅರಣ್ಯ ಖಾತೆ
ಡಾ. ಸುಧಾಕರ್ - ವೈದ್ಯಕೀಯ ಶಿಕ್ಷಣ
ನಾರಾಯಣಗೌಡ - ಪೌರಾಡಳಿತ ಹಾಗೂ ತೋಟಗಾರಿಕೆ
ಶಿವರಾಂ ಹೆಬ್ಬಾರ್ - ಕಾರ್ಮಿಕ ಖಾತೆ
ಆನಂದ ಸಿಂಗ್ - ಆಹಾರ ಮತ್ತು ನಾಗರಿಕ ಪೂರೈಕೆ
ಬೈರತಿ ಬಸವರಾಜು - ನಗರಾಭಿವೃದ್ಧಿ ಇಲಾಖೆ ಖಾತೆ
ಕೆ. ಗೋಪಾಲಯ್ಯ-ಸಣ್ಣ ಕೈಗಾರಿಕೆ
ಶ್ರೀಮಂತ ಪಾಟೀಲ್ - ಜವಳಿ ಖಾತೆ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಂಚಿಕೆ ಮಾಡಿದ್ದಾರೆ. ರಾಜ್ಯಪಾಲರ ಅಂಕಿತ ಹಾಕುವುದು ಮಾತ್ರ ಬಾಕಿಯಿದೆ.

ಸಿಎಂ ಮೇಲೆ ಮೂಲ ಬಿಜೆಪಿ ಸಚಿವರ ಒತ್ತಡ
ಇನ್ನು ಈಗಾಗಲೇ ಪ್ರಭಾವಿ ಇಲಾಖೆಗಳನ್ನು ವಹಿಸಿಕೊಂಡಿರುವ ಮೂಲ ಬಿಜೆಪಿ ಸಚಿವರು ಆ ಖಾತೆಗಳನ್ನು ಬಿಟ್ಟು ಕೊಡಲು ಒಪ್ಪಿರಲಿಲ್ಲ. ಗೃಹ, ಜಲಸಂಪನ್ಮೂಲ, ಬೆಂಗಳೂರು ನಗರಾಭಿವೃದ್ಧಿ, ಲೋಕೋಪಯೋಗಿ, ಅರಣ್ಯ, ಇಂಧನ, ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣ, ಆರೋಗ್ಯ, ಕೃಷಿ, ಬೃಹತ್ ಕೈಗಾರಿಕೆ, ಕಂದಾಯ ಖಾತೆಗಳ ಮರು ಹಂಚಿಕೆಗೆ ಆಯಾ ಖಾತೆಗಳನ್ನು ನಿರ್ವಹಿಸುತ್ತಿರುವ ಸಚಿವರು ಬಿಟ್ಟುಕೊಡಲು ಒಪ್ಪಿರಲಿಲ್ಲ.
ಇದೀಗ ಮೂಲ ಬಿಜೆಪಿ ಶಾಸಕರಿಗೆ ತಿಳಿಹೇಳುವ ಮೂಲಕ ಖಾತೆ ಹಂಚಿಕೆಯನ್ನು ಮುಖ್ಯಮಂತ್ರಿಗಳು ಮಾಡಿದ್ದಾರೆ. ಹೆಚ್ಚುವರಿಯಾಗಿ ವಹಿಸಿಕೊಂಡಿದ್ದ ಖಾತೆಗಳೊಂದಿಗೆ ಕೆಲ ಪ್ರಭಾವಿ ಖಾತೆಗಳನ್ನು ಮೂಲ ಬಿಜೆಪಿ ಸಚಿವರು ಬಿಟ್ಟುಕೊಟ್ಟಿದ್ದಾರೆ ಎಂಬ ಮಾಹಿತಿಯಿದೆ.

ಸಂಜೆಯೊಳಗೆ ಅಧಿಕೃತವಾಗಿ ಪಟ್ಟಿ ಪ್ರಕಟ
ಸಂಜೆಯೊಳಗೆ ರಾಜ್ಯಪಾಲ ವಜೂಬಾಯಿ ವಾಲಾ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಕಳಿಸಿರುವ ಖಾತೆ ಹಂಚಿಕೆ ಪಟ್ಟಿಗೆ ಅಂಕಿತ ಹಾಕಲಿದ್ದಾರೆ. ಬಳಿಕ ಗೆಜೆಟ್ನಲ್ಲಿ ಖಾತೆ ಹಂಚಿಕೆ ಪ್ರಕಟವಾಗಲಿದೆ. ಅದೇ ಸಂದರ್ಭದಲ್ಲಿ ಅಧಿಕೃತವಾಗಿ ಸಚಿವರು ತಮಗೆ ವಹಿಸಿದ ಖಾತೆಗಳನ್ನು ವಹಿಸಿಕೊಳ್ಳಲಿದ್ದಾರೆ.
ಆದರೆ ಇನ್ನೂ ಹಲವು ಸಚಿವರು ಖಾತೆಗಳಿಗಾಗಿ ಪಟ್ಟು ಹಿಡಿದಿದ್ದಾರೆ ಎಂಬ ಮಾಹಿತಿಯೂ ಇದೆ. ಹೀಗಾಗಿ ಖಾತೆ ಹಂಚಿಕೆ ಪ್ರಕ್ರಿಯೆ ಅಧಿಕೃತವಾಗಿ ಮುಗಿದ ಬಳಿಕ ಮತ್ತೊಂದು ಹಂತದ ಖಾತೆ ಕ್ಯಾತೆಯನ್ನು ಬಿಜೆಪಿಯಲ್ಲಿ ತಳ್ಳಿಹಾಕುವಂತಿಲ್ಲ!












Click it and Unblock the Notifications