ಕೆಜೆಪಿ, ಬಿಜೆಪಿ ಬಗ್ಗೆ ಡೆಡ್ ಲೈನ್ ಕೊಟ್ಟ ಯಡಿಯೂರಪ್ಪ!
ದಾವಣಗೆರೆ, ಡಿ. 17 : ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಗೆ ಮರಳುವ ಬಗ್ಗೆ ಮೂರುದಿನದಲ್ಲಿ ಅಂತಿಮ ನಿರ್ಧಾರ ಹೊರಬೀಳುವುದು ಬಹುತೇಕ ಖಚಿತವಾಗಿದೆ. ಎರಡು ಮೂರು ದಿನದಲ್ಲಿ ಬಿಜೆಪಿ ಸೇರುವ ಬಗ್ಗೆ ಅಂತಿಮ ನಿರ್ಧಾರ ಪ್ರಕಟಿಸುತ್ತೇನೆ ಎಂದು ಹೇಳುವ ಮೂಲಕ ಅವರು ಕುತೂಹಲ ಹುಟ್ಟಿಸಿದ್ದಾರೆ.
ದಾವಣಗೆರೆಯಲ್ಲಿ ಸೋಮವಾರ ಮಾತನಾಡಿದ ಕೆಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸದ್ಯ ರೈತ, ಜನಪರ ಹೋರಾಟದ ಕಡೆ ಮನಸ್ಸು ಮಾಡಿದ್ದೇನೆ. ರಾಜಕೀಯ ಕುರಿತು ಹೆಚ್ಚು ಮಾತನಾಡದಿರಲು ಇಚ್ಛಿಸುತ್ತೇನೆ. ಬಿಜೆಪಿಯೋ, ಕೆಜೆಪಿಯೋ ಎಂಬ ವಿಷಯ ಕುರಿತು 2-3 ದಿನಗಳಲ್ಲಿ ಅಂತಿಮ ತೀರ್ಮಾನ ಕೈಗೊಳ್ಳುತ್ತೇನೆ ಎಂದರು.

ರಾಜ್ಯದ ಮತ್ತು ರಾಷ್ಟ್ರದ ಹಿತದೃಷ್ಠಿಯಿಂದ ಎಲ್ಲರೂ ಸೇರಿ ಒಂದು ನಿರ್ಧಾರ ಕೈಗೊಂಡಿದ್ದೇವೆ. ಯಾವುದೇ ರೀತಿಯ ಹೊಂದಾಣಿಕೆ ತಾವು ಸಿದ್ಧವಿರುವುದಾಗಿ ಹೇಳಿದರು. ಈ ಮೂಲಕ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಲು ತಾವು ಸಿದ್ಧವಿರುವಿದಾಗಿ ಯಡಿಯೂರಪ್ಪ ಸಂದೇಶ ರವಾನಿಸಿದ್ದಾರೆ. [ಬಿಎಸ್ವೈ ಜೊತೆ ಡಿವಿಎಸ್, ಈಶ್ವರಪ್ಪ ರಹಸ್ಯ ಚರ್ಚೆ]
ಬಿಜೆಪಿಗೆ ಮರಳುವುದಿಲ್ಲ ಎಂದು ಘೋಷಿಸಿದ್ದ ಯಡಿಯೂರಪ್ಪ ಸದ್ಯ ತಮ್ಮ ನಿಲುವನ್ನು ಬದಲಾವಣೆ ಮಾಡಿಕೊಂಡಂತೆ ಕಾಣುತ್ತಿದೆ. ಹೊಂದಾಣಿಕೆಗೆ ತಾವು ಸಿದ್ದ ಎಂದು ಯಡಿಯೂರಪ್ಪ ಅವರು ಹೇಳಿಕೆ ನೀಡಿರುವುದು, ಅವರನ್ನು ಬಿಜೆಪಿಗೆ ವಾಪಸ್ ಕರೆತರಲು ಪ್ರಯತ್ನಿಸುತ್ತಿರುವ ನಾಯಕರಿಗೆ ಹೊಸ ಉತ್ಸಾಹ ತುಂಬಿದೆ.
ಪಂಚರಾಜ್ಯಗಳ ಚುನಾವಣೆ ಫಲಿತಾಂಶದ ನಂತರ ಬಿಜೆಪಿ ರಾಷ್ಟ್ರೀಯ ನಾಯಕರು ಬ್ಯುಸಿಯಾಗಿದ್ದರು. ಸದ್ಯ ಅವರು ಬಿಡುವಾಗಿದ್ದು, ಬಿ.ಎಸ್.ಯಡಿಯೂರಪ್ಪ ಅವರ ಜೊತೆ ಮಾತುಕತೆ ನಡೆಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ. ಆದ್ದರಿಂದ ಯಡಿಯೂರಪ್ಪ ತಮ್ಮ ನಿಲುವಿನಲ್ಲಿ ಬದಲಾವಣೆ ಮಾಡಿಕೊಂಡಿರಬಹುದು ಎಂದು ವಿಶ್ಲೇಷಿಸಲಾಗುತ್ತಿದೆ.
ತನಿಖೆಗ ಆಗ್ರಹ : ಕೆಜೆಪಿ ಸಂಸ್ಥಾಪಕ ಪದ್ಮನಾಭ ಪ್ರಸನ್ನ ಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಬಿ.ಎಸ್.ಯಡಿಯೂರಪ್ಪ ಪದ್ಮನಾಭ ಪ್ರಸನ್ನ ಕುಮಾರ್ ಮತ್ತು ತಮಗೆ ಯಾವುದೇ ಸಂಬಂಧವಿಲ್ಲ. ಅವರು ನಾಪತ್ತೆಯಾಗಿದ್ದು, ಈಗ ಪತ್ತೆಯಾಗಿದ್ದು ಇದಾವುದಕ್ಕೂ ನಾನು ಕಾರಣವಲ್ಲ. ಈ ಕುರಿತು ವಿವರವಾದ ತನಿಖೆ ನಡೆಬೇಕು ಎಂದು ಆಗ್ರಹಿಸಿದರು. [ಪ್ರಸನ್ನ ಕುಮಾರ್ ದೆಹಲಿಯಲ್ಲಿ ಪತ್ತೆ]












Click it and Unblock the Notifications