ಗ್ರಾಮ ಪಂಚಾಯಿತಿಗಳಲ್ಲಿ ಅಟಲ್ಜೀ ಜನಸ್ನೇಹಿ ಕೇಂದ್ರದ ಸೇವೆಗಳು; ಸುತ್ತೋಲೆ
ಬೆಂಗಳೂರು, ಜನವರಿ 07: ಕರ್ನಾಟಕ ಸರ್ಕಾರ ಗ್ರಾಮೀಣ ಭಾಗದ ಜನರ ಸಮಯ, ಹಣ ಉಳಿತಾಯ ಮಾಡಲು ವಿವಿಧ ಸೇವೆಗಳನ್ನು ಗ್ರಾಮ ಪಂಚಾಯಿತಿ ಮಟ್ಟದಲ್ಲಿಯೇ ನೀಡುತ್ತಿದೆ. ಈಗ ಅಟಲ್ ಜೀ ಜನಸ್ನೇಹಿ ಕೇಂದ್ರಗಳ (ನಾಡಕಛೇರಿ) ಸೇವೆಗಳನ್ನು ಒದಗಿಸುವ ಬಗ್ಗೆ ಸುತ್ತೋಲೆಯೊಂದನ್ನು ಹೊರಡಿಸಿದೆ.
ಈ ಕುರಿತು ಉಮಾ ಮಹಾದೇವನ್, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ (ಪಂ. ರಾಜ್) ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹಾಗೂ ರಾಜೇಂದ್ರ ಕುಮಾರ್ ಕಠಾರಿಯಾ, ಸರ್ಕಾರದ ಪ್ರಧಾನ ಕಾರ್ಯದರ್ಶಿ ಕಂದಾಯ ಇಲಾಖೆ ಜಂಟಿ ಸುತ್ತೋಲೆ ಹೊರಡಿಸಿದ್ದಾರೆ.
ಸುತ್ತೋಲೆಯು ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ, ಅಟಲ್ ಜೀ ಜನಸ್ನೇಹಿ ಕೇಂದ್ರಗಳ (ನಾಡಕಛೇರಿ) ಸೇವೆಗಳನ್ನು ಒದಗಿಸುವ ಬಗ್ಗೆ ಎಂಬ ವಿಷಯ ಒಳಗೊಂಡಿದೆ. ಸರ್ಕಾರದ ಆದೇಶ 7/2/2022 ಮತ್ತು ಸುತ್ತೋಲೆ 6/10/2023 ಉಲ್ಲೇಖ ಮಾಡಿದ್ದಾರೆ.

ಸುತ್ತೋಲೆಯ ವಿವರಗಳು; ಗ್ರಾಮೀಣ ಜನತೆ ತಮಗೆ ಅವಶ್ಯವಿರುವ ಕಂದಾಯ ಇಲಾಖೆಯ ಅಟಲ್ಜಿ ಜನಸ್ನೇಹಿ ನಿರ್ದೇಶನಾಲಯದಡಿ ಬರುವ ಆದಾಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರಗಳಂತಹ ಪ್ರಾಮುಖ್ಯ ಸೇವೆಗಳನ್ನು ಮತ್ತಷ್ಟು ದಕ್ಷ ಹಾಗೂ ತ್ವರಿತ ರೀತಿಯಲ್ಲಿ ಗ್ರಾಮ ಪಂಚಾಯತಿಯ ಪಡೆದುಕೊಳ್ಳುವ ನಿಟ್ಟಿನಲ್ಲಿ ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ, ಅಟಲ್ ಜನಸ್ನೇಹಿ ಕೇಂದ್ರಗಳ (ನಾಡಕಛೇರಿ) ಸೇವೆಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದೆ.
ಅದರಂತೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪಂಚತಂತ್ರ 2.0 ತಂತ್ರಾಂಶವನ್ನು ನಾಡಕಛೇರಿ ತಂತ್ರಾಂಶದೊಂದಿಗೆ ಸಂಯೋಜನೆ ಮಾಡಲಾಗಿದೆ. ಸಾರ್ವಜನಿಕರು ಇನ್ನೂ ಮುಂದೆ ಅಟಲ್ಜಿ ಜನಸ್ನೇಹಿ ನಿರ್ದೇಶನಾಲಯದಡಿ ಬರುವ ಆದಾಯ ಪ್ರಮಾಣ ಪತ್ರ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ವಾಸ ಸ್ಥಳ ಪ್ರಮಾಣ ಪತ್ರಗಳಂತಹ ಪ್ರಾಮುಖ್ಯ ಸೇವೆಗಳನ್ನು ಮತ್ತು ಇನ್ನೂ ಮುಂತಾದ 44 ಅಟಲ್ ಜನಸ್ನೇಹಿ ಕೇಂದ್ರಗಳ (ನಾಡಕಛೇರಿ) ಸೇವೆಗಳಿಗೆ ಅರ್ಜಿ ಸಲ್ಲಿಸಿ ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿಯೇ ಸದರಿ ಸೇವೆಗಳನ್ನು ಪಡೆಯಬಹುದಾಗಿದೆ.
ಪ್ರತಿಯೊಂದು ಸೇವೆಗಳಿಗೆ ಅರ್ಜಿದಾರರಿಂದ ವಿವಿಧ ಪ್ರಮಾಣ ಪತ್ರಗಳಿಗಾಗಿ ಪಡೆಯಬೇಕಾಗಿರುವ standardize ಮಾಡಿರುವಂತಹ ದಾಖಲೆಗಳನ್ನು ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ಅರ್ಜಿಯೊಂದಿಗೆ ಪಡೆಯಲಾಗುತ್ತಿದೆ. ಅರ್ಜಿಯೊಂದಿಗೆ ಪಡೆಯಲಾಗುತ್ತಿರುವ ದಾಖಲೆಗಳನ್ನು ಗ್ರಾಮ ಪಂಚಾಯತಿಗಳಿಗೆ ನೀಡಲಾಗಿರುವ ನಾಡಕಛೇರಿ ತಂತ್ರಾಂಶದ ಲಾಗಿನ್ ನಲ್ಲಿ, upload ಮಾಡಿ ಅರ್ಜಿಗಳನ್ನು ಆನ್ಲೈನ್ನಲ್ಲಿ, ಸಲ್ಲಿಸಲಾಗುತ್ತಿದೆ.
ಕ್ಷೇತ್ರ ಪರಿಶೀಲನೆಗಾಗಿ ಗ್ರಾಮ ಲೆಕ್ಕಿಗರು ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನಾಡಕಛೇರಿ ತಂತ್ರಾಂಶದ ಲಾಗಿನ್ ಮೂಲಕ ಆನ್ಲೈನ್ನಲ್ಲಿ, ಸಲ್ಲಿಸಲಾಗುತ್ತಿರುವ ಅರ್ಜಿಗಳನ್ನು ಮತ್ತು ಅವುಗಳ ದಾಖಲೆಗಳನ್ನು ಭೌತಿಕ ರೂಪದಲ್ಲಿ, ಸಲ್ಲಿಸಲು ಗ್ರಾಮ ಪಂಚಾಯತಿಗಳನ್ನು ಕೋರುತ್ತಿರುವುದು ಸರ್ಕಾರದ ಗಮನಕ್ಕೆ ಕಂಡುಬಂದಿದೆ.
ಅದುದರಿಂದ, ಗ್ರಾಮ ಪಂಚಾಯತಿಗಳ ಬಾಪೂಜಿ ಸೇವಾ ಕೇಂದ್ರಗಳಲ್ಲಿ ನಾಡಕಛೇರಿ ತಂತ್ರಾಂಶದ ಲಾಗಿನ್ ಮೂಲಕ ಆನ್ಲೈನ್ನಲ್ಲಿ ಸಲ್ಲಿಸಲಾಗುತ್ತಿರುವ ಅರ್ಜಿಗಳಿಗೆ ಯಾವುದೇ ದಾಖಲೆಗಳನ್ನು ಭೌತಿಕ ರೂಪದಲ್ಲಿ ಸಲ್ಲಿಸಲು ಗ್ರಾಮ ಪಂಚಾಯತಿಗಳನ್ನು ಕೋರಬಾರದು ಹಾಗೂ ಕ್ಷೇತ್ರ ಪರಿಶೀಲನೆಗಾಗಿ ಅವಶ್ಯವಿರುವ ಅರ್ಜಿಗಳನ್ನು ಮತ್ತು ಅವುಗಳ ದಾಖಲೆಗಳನ್ನು ನಾಡಕಛೇರಿ ತಂತ್ರಾಂಶದಿಂದ ಪಡೆದು ನಿಗದಿತ ಅವಧಿಯೊಳಗೆ ವಿಲೇವಾರಿ ಮಾಡಲು ಸೂಚಿಸಿದೆ ಎಂದು ಸುತ್ತೋಲೆ ಹೇಳಿದೆ.












Click it and Unblock the Notifications