ಮೊಯ್ಲಿ ವಿರುದ್ಧ ಸ್ಪರ್ಧೆಗೆ ಬಿಜೆಪಿ ನಾಯಕರ ಪೈಪೋಟಿ!
ಚಿಕ್ಕಬಳ್ಳಾಪುರ, ಫೆ.13 : ಕರ್ನಾಟಕ ಬಿಜೆಪಿ ಪಾಲಿಗೆ ಬೆಂಗಳೂರು ಉತ್ತರದ ಜೊತೆಗೆ ಚಿಕ್ಕಬಳ್ಳಾಪುರ ಕ್ಷೇತ್ರದ ಅಭ್ಯರ್ಥಿ ಆಯ್ಕೆ ಮಾಡುವುದು ಸವಾಲಾಗಿ ಪರಿಣಮಿಸಿದೆ. ಕ್ಷೇತ್ರದಲ್ಲಿ ಮೊಯ್ಲಿ ವಿರೋಧಿ ಅಲೆ ಇದ್ದು ಗೆಲ್ಲುವುದು ಸುಲಭ. ಆದರೆ, ಅಭ್ಯರ್ಥಿ ಆಯ್ಕೆ ಮಾಡುವುದು ಕಷ್ಟ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಹಾಲಿ ಸಂಸದ ಕೇಂದ್ರ ಸಚಿವ ವೀರಪ್ಪ ಮೊಯ್ಲಿ. ಆದರೆ, ಕ್ಷೇತ್ರದಲ್ಲಿ ಅವರ ವಿರೋಧಿ ಅಲೆ ಎದ್ದಿದ್ದು, ಇದನ್ನು ಉಪಯೋಗಿಸಿಕೊಂಡು ಬಿಜೆಪಿ ಸುಲಭವಾಗಿ ಗೆಲುವು ಸಾಧಿಸಬಹುದು. ಆದರೆ, ಕ್ಷೇತ್ರದಲ್ಲಿನ ಅಭ್ಯರ್ಥಿಯ ಆಯ್ಕೆ ಬಿಜೆಪಿಗೆ ಕಠಿಣ ಸವಾಲಾಗಿದೆ.

ಮಾಜಿ ಸಚಿವ ಬಚ್ಚೇಗೌಡ, ವೈ. ನಾರಾಯಣಸ್ವಾಮಿ ಹೆಸರುಗಳು ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಪ್ರಬಲವಾಗಿ ಕೇಳಿಬರುತ್ತಿವೆ. ವೈ.ನಾರಾಯಣ ಸ್ವಾಮಿ ಅವರ ಪರವಾಗಿ ಸ್ಥಳೀಯ ನಾಯಕರು ಬ್ಯಾಂಟಿಗ್ ಮಾಡುತ್ತಿದ್ದರೆ. ಬಚ್ಚೇಗೌಡ ಬೆಂಬಲಕ್ಕೆ ಬೆಂಗಳೂರಿನ ಪ್ರಮುಖ ನಾಯಕರು ನಿಂತಿರುವುದು ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.
ಚಿಕ್ಕಬಳ್ಳಾಪುರ ಕ್ಷೇತ್ರದ ಲೋಕಸಭಾ ಚುನಾವಣೆ ಟಿಕೆಟ್ ನೀಡುತ್ತೇವೆ ಎಂಬ ಭರವಸೆ ನೀಡಿ ಸ್ವತಂತ್ರವಾಗಿ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದಿದ್ದ ವೈ. ನಾರಾಯಣಸ್ವಾಮಿ ಅವರನ್ನು ಬಿಜೆಪಿಗೆ ಕರೆ ತರಲಾಗಿತ್ತು. ಈಗ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಬಚ್ಚೇಗೌಡರು ಕ್ಷೇತ್ರಕ್ಕೆ ಕಾಲಿಟ್ಟಿರುವುದು ಬಿಜೆಪಿ ಪಾಲಿಗೆ ಸಂಕಷ್ಟ ತಂದೊಡ್ಡಿದೆ. [ಬಿಜೆಪಿ ಸಂಭಾವ್ಯ ಪಟ್ಟಿ]
ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸೋಲುಂಡ ಬಚ್ಚೇಗೌಡು ಪಕ್ಷದ ಚಟುವಟಿಕೆಗಳಿಂದ ದೂರ ಸರಿದಿದ್ದಾರೆ. ಆದ್ದರಿಂದ ವೈ.ನಾರಾಯಣಸ್ವಾಮಿ ಅವರಿಗೆ ಟಿಕೆಟ್ ನೀಡಬೇಕು ಎಂಬುದು ಸ್ಥಳೀಯ ನಾಯಕರ ಒತ್ತಾಯ. ಆದರೆ, ಬಚ್ಚೇಗೌಡ ಬೆಂಬಲಕ್ಕೆ ಬೆಂಗಳೂರಿನ ಪ್ರಬಲ ನಾಯಕರು ನಿಂತಿದ್ದಾರೆ. ಆದ್ದರಿಂದ ಯಾರಿಗೆ ಟಿಕೆಟ್ ಎಂಬುದು ಯಕ್ಷಪ್ರಶ್ನೆಯಾಗಿದೆ. [ಎಂಟು ಕ್ಷೇತ್ರಗಳು ಕಗ್ಗಂಟು]
ನರೇಂದ್ರ ಮೋದಿ ಅವರ ಅಲೆಯ ಮೇಲೆ ಬೆಂಗಳೂರಿನ ಕ್ಷೇತ್ರಗಳಲ್ಲಿ ಜಯಸಾಧಿಸುವ ತಂತ್ರ ರೂಪಿಸಿರುವ ಬಿಜೆಪಿ ಬೆಂಗಳೂರಿನ ಸುತ್ತಲಿನ ಕ್ಷೇತ್ರಗಳ ಮೇಲೆಯೂ ಕಣ್ಣಿಟ್ಟಿದೆ. ಆದ್ದರಿಂದ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹೆಚ್ಚು ಆಲೋಚನೆ ನಡೆಸಿದೆ. ಇಬ್ಬರಲ್ಲಿ ಯಾರಿಗೆ ಟಿಕೆಟ್ ಎಂಬ ರಹಸ್ಯವನ್ನು ಬಿಜೆಪಿ ಬಿಟ್ಟುಕೊಟ್ಟಿಲ್ಲ.
ಸದ್ಯ ಬಿಜೆಪಿ ಪಾಲಿಗೆ ಎಂಟು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದು ಕಗ್ಗಂಟಾಗಿದೆ. ಆದ್ದರಿಂದ ಆರ್ ಎಸ್ಎಸ್ ನಾಯಕರ ಸಲಹೆಯನ್ನು ಬಿಜೆಪಿ ನಾಯಕರು ಪಡೆದಿದ್ದಾರೆ. ಬಿಜೆಪಿ ತಯಾರಿಸಿರುವ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಆಯ್ಕೆ ಮಾಡದಿರುವುದು ಹಲವಾರು ಕುತೂಹಲಗಳಿಗೆ ಕಾರಣವಾಗಿದೆ.











Click it and Unblock the Notifications