ಕಟ್ಟಡ ಕಾರ್ಮಿಕರ ಮಕ್ಕಳಿಗೆ ಗುಡ್ ನ್ಯೂಸ್: ಇಲ್ಲಿದೆ ಸಂಪೂರ್ಣ ಮಾಹಿತಿ
ಬೆಂಗಳೂರು, ಆಗಸ್ಟ್ 27:ನೋಂದಾಯಿತ ಕಟ್ಟಡ ಕಾರ್ಮಿಕರು ಮತ್ತು ಅವರ ಮಕ್ಕಳಿಗೆ ವೃತ್ತಿ ಬುನಾದಿ ಹಾಗೂ ಉನ್ನತೀಕರಿಸಿದ ಕೌಶಲ್ಯದ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವ ಕುರಿತಂತೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಹಾಗೂ ಖಾಸಗಿ ಕಂಪನಿ ಮತ್ತು ಕೈಗಾರಿಕೆಗಳ ಸಹಭಾಗಿತ್ವದಲ್ಲಿ ವಿಕಾಸಸೌಧದಲ್ಲಿ ಸಭೆ ಆಯೋಜಿಸಲಾಗಿತ್ತು. ಈ ಸಭೆಯಲ್ಲಿ ಮಂಡಳಿಯ ಅಧ್ಯಕ್ಷರು ಹಾಗೂ ಕಾರ್ಮಿಕ ಸಚಿವರಾದ ಸಂತೋಷ್ ಲಾಡ್ ಅವರು ಭಾಗವಹಿಸಿ ಸಲಹೆ ಸೂಚನೆಗಳನ್ನು ನೀಡಿದರು.
ವಿಕಾಸ ಸೌಧದಲ್ಲಿ ಉನ್ನತೀಕರಿಸಿದ ಕೌಶಲ ತರಬೇತಿ ಕೇಂದ್ರ ಸ್ಥಾಪನೆಗೆ ಸಂಬಂಧಿಸಿದಂತೆ ಪೂರ್ವ ಸಭೆ ನಡೆದಿದ್ದು, ಕೇಂದ್ರಗಳ ಪರಿಕಲ್ಪನೆ, ಪೂರ್ವ ತಯಾರಿ ಬಗ್ಗೆ ಸಚಿವರು ಸಮಾಲೋಚನೆ ನಡೆಸಿದ್ದಾರೆ. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಕ್ಕಳ ವಿದ್ಯಾರ್ಹತೆ, ಉದ್ಯಮಗಳಿಗೆ ಅಗತ್ಯವಾದ ಉನ್ನತೀಕರಿಸಿದ ಕೌಶಲ ತರಬೇತಿ ಒದಗಿಸಿ ಉದ್ಯೋಗಾವಶಕಾಶ ಕಲ್ಪಿಸಲು ಕಾರ್ಮಿಕ ಸಚಿವ ಸಂತೋಷ್ ಲಾಡ್ ಕ್ರಮ ಕೈಗೊಂಡಿದ್ದಾರೆ.

ಖಾಸಗಿ ಕಂಪನಿಗಳು, ಉದ್ಯಮಿಗಳು, ಕಾರ್ಖಾನೆಗಳ ಸಹಭಾಗಿತ್ವದಲ್ಲಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಕೇಂದ್ರಕ್ಕೆ ಅಗತ್ಯವಾದ ಜಾಗ ಸೇರಿ ಸೌಲಭ್ಯಗಳನ್ನು ರಾಜ್ಯ ಸರ್ಕಾರ ಸೃಜಿಸಿ ಕೊಡಲಿದೆ. ಅಗತ್ಯವಿರುವ ಕೋರ್ಸ್ ಮತ್ತು ಪಠ್ಯಕ್ರಮಗಳನ್ನು ಸಿದ್ದಪಡಿಸಿ ತರಬೇತಿ ನೀಡಿ ಉದ್ಯೋಗಾವಕಾಶ ಕಲ್ಪಿಸುವುದು ಖಾಸಗಿ ಕಂಪನಿ, ಉದ್ಯಮ ಮತ್ತು ಕಾರ್ಖಾನೆಗಳ ಜವಾಬ್ದಾರಿ ಆಗಿರುತ್ತದೆ.
ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಮಂಡಳಿಯಲ್ಲಿ 50 ಲಕ್ಷ ಕಾರ್ಮಿಕರ ಹೆಸರು ನೋಂದಣಿಯಾಗಿದ್ದು, ಮೊದಲ ಹಂತದಲ್ಲಿ ಈ ಕಾರ್ಮಿಕರ ಮಕ್ಕಳು, ನಂತರ ಅಸಂಘಟಿತ ವಲಯದ 50 ಲಕ್ಷ ಕಾರ್ಮಿಕರ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಕಂದಾಯ ವಿಭಾಗವಾರು ಉನ್ನತೀಕರಿಸಿದ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಪ್ರಾಯೋಗಿಕವಾಗಿ ಹುಬ್ಬಳ್ಳಿ ಧಾರವಾಡದಲ್ಲಿ ಕೌಶಲ ತರಬೇತಿ ಕೇಂದ್ರ ತೆರೆಯಲಾಗುವುದು ಎನ್ನಲಾಗಿದೆ.
ರಾಜ್ಯದ ನಾಲ್ಕು ಕಂದಾಯ ವಿಭಾಗಗಳಲ್ಲಿ ತರಬೇತಿ ಕೇಂದ್ರಗಳನ್ನು ಪ್ರಾರಂಭಿಸುವ ಸಂಬಂಧ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಮಂಡಳಿಯ ವತಿಯಿಂದ ಹಲವಾರು ಸಾಮಾಜಿಕ ಸೇವಾ ಸೌಲಭ್ಯಗಳನ್ನು ಕಾರ್ಮಿಕರಿಗೆ ಈಗಾಗಲೇ ನೀಡಲಾಗುತ್ತಿದ್ದು, ವೃತ್ತಿ ಬುನಾದಿ ಹಾಗೂ ಉನ್ನತೀಕರಿಸಿದ ಕೌಶಲ್ಯದ ತರಬೇತಿ ಕೇಂದ್ರಗಳಿಂದಲೂ ಸಾಕಷ್ಟು ಅನುಕೂಲವಾಗಲಿದೆ.
ಈ ಸಭೆಯಲ್ಲಿ ಕಾರ್ಮಿಕ ಆಯುಕ್ತರಾದ ಶ್ರೀ ಎಚ್ ಎನ್ ಗೋಪಾಲಕೃಷ್ಣ, ಮಂಡಳಿಯ ಸಿಇಒ ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ಭಾರತಿ ಡಿ, ಮಂಡಳಿಯ ಜಂಟಿ ಕಾರ್ಯದರ್ಶಿಗಳಾದ ಡಾ. ಸಂಗಪ್ಪ ಉಪಾಸೆ, ಇಲಾಖೆಯ ಇತರೆ ಅಧಿಕಾರಿಗಳು ಹಾಗೂ ಮಂಡಳಿಯ ಸದಸ್ಯರು, ವಿವಿಧ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು, ಖಾಸಗಿ ಕಂಪನಿ ಮತ್ತು ಕೈಗಾರಿಕೆಗಳ ಪ್ರತಿನಿಧಿಗಳು ಉಪಸ್ಥಿತರಿದ್ದರು.












Click it and Unblock the Notifications