ಚಿಕ್ಕಮಗಳೂರು: ಬಿಜೆಪಿ ತೊರೆದು ರೇಖಾ ಹುಲಿಯಪ್ಪಗೌಡ ಕಾಂಗ್ರೆಸ್ ಸೇರ್ಪಡೆ
ಚಿಕ್ಕಮಗಳೂರು, ಏಪ್ರಿಲ್ 29: ಬಿಜೆಪಿಯ ಹಿರಿಯ ರಾಜಕಾರಣಿ ರೇಖಾ ಹುಲಿಯಪ್ಪಗೌಡ, ಧನಂಜಯಮೂರ್ತಿ, ಕೆ ಎಸ್ ಹರೀಶ, ನಿಂಗೇಗೌಡ, ಬಿ ಬಿ ಕೃಷ್ಣಮೂರ್ತಿ, ಗಿರೀಶ, ರವಿಕುಮಾರ್, ಎಸ್ ಎನ್ ಪ್ರಕಾಶ, ಶ್ರೀನಿವಾಸ,ನಿರಂಜನ, ಹಿರೇಗೌಡ ಸೇರಿದಂತೆ 15 ಮಂದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ.
ಚಿಕ್ಕಮಗಳೂರಿನ ಬಿಜೆಪಿ ಮುಖಂಡರು ಕಾಂಗ್ರೆಸ್ ಸೇರುತ್ತಿರೋದು ನಮ್ಮ ಅಲ್ಲಿನ ಅಭ್ಯರ್ಥಿ ಬಿ ಎಲ್ ಶಂಕರ್ ಗೆಲುವಿಗೆ ಸಹಕಾರವಾಗಲಿದೆ ಎಂದು ರಾಜ್ಯಸಭಾ ಸದಸ್ಯ ಜಿ ಸಿ ಚಂದ್ರಶೇಖರ್ ಅವರು ಹೇಳಿದರು.
ಕಳೆದ 20 ವರ್ಷಗಳಿಂದ ಬಿಜೆಪಿ ಕಟ್ಟಾಳಾಗಿದ್ದು ಜಿಲ್ಲಾ ಪಂಚಾಯತ್ ಅಧ್ಯಕ್ಷೆಯಾಗಿ, ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆಯಾಗಿ, ರಾಜ್ಯ ಕಾರ್ಯಕಾರಣಿ ಸದಸ್ಯೆಯಾಗಿದ್ದ ರೇಖಾ ಹುಲಿಯಪ್ಪ ಗೌಡ ಬಿಜೆಪಿಯಿಂದ ಅಲ್ಪಸಂಖ್ಯಾತರ ಮೇಲಾಗ್ತಿರೋ ದೌರ್ಜನ್ಯದ ವಿರುದ್ಧ ತಿರುಗಿ ಬಿದ್ದು ಬಿಜೆಪಿಯ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.
ಚಿಕ್ಕಮಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರೇಖಾ ಹುಲಿಯಪ್ಪಗೌಡ, 2004ರಲ್ಲಿ ಬೀರೂರು ವಿಧಾನಸಭಾ ಚುನಾವಣೆಯಲ್ಲಿ ಸೋತ ಬಳಿಕವೂ ಪಕ್ಷಕ್ಕಾಗಿ ದುಡಿದು, ಸಾರ್ವಜನಿಕರೊಂದಿಗೆ ಉತ್ತಮ ಸಂಬಂಧವಿಟ್ಟುಕೊಂಡಿದ್ದೆ. ಈ ಬಾರಿ ಗೆದ್ದೆ ಗೆಲ್ಲುತ್ತೇನೆಂದು ಕಡೂರು ಕ್ಷೇತ್ರದ ಟಿಕೆಟ್ ಪ್ರಬಲ ಆಕಾಂಕ್ಷಿಯಾಗಿದ್ದೆ.
ಆದರೆ, ಬಿಜೆಪಿ ಪಕ್ಷ ಟಿಕೆಟ್ ನೀಡಲಿಲ್ಲ. ನನಗೆ ಬೇಡ ತರೀಕೆರೆ ವಿಧಾನಸಭಾ ಕ್ಷೇತ್ರದ ತಳ ಸಮುದಾಯದ ಗೋಪಿಕೃಷ್ಣನಿಗೆ ಟಿಕೆಟ್ ನೀಡುತ್ತಾರೆಂದು ಭಾವಿಸಿದ್ದೆ. ಆದ್ರೆ, ಅವರಿಗೂ ನೀಡಲಿಲ್ಲ. ಶಿವಮೊಗ್ಗದಲ್ಲಿ ಈಶ್ವರಪ್ಪ ಟಿಕೆಟ್ ತೆಗೆದುಕೊಳ್ಳೋಕೆ ಹರಸಾಹಸಪಟ್ಟರು. ಬಿಜೆಪಿಗೆ ಅಲ್ಪಸಂಖ್ಯಾತರ ಮೇಲಿರೋ ವಿರೋಧಿ ಧೋರಣೆಯಿಂದ ಮನನೊಂದು ಪಕ್ಷದಿಂದ ಹೊರಬಂದಿದ್ದೇನೆ.
ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್ ಆಹ್ವಾನ ನೀಡಿದ್ದಾರೆ. ಚಿಕ್ಕಮಗಳೂರು ಕಾಂಗ್ರೆಸ್ ಮುಖಂಡರು ಮನೆಗೆ ಬಂದು ಪಕ್ಷಕ್ಕೆ ಕರೆದಿದ್ದರಿಂದ ಕಾರ್ಯಕರ್ತರೊಂದಿಗೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಂಡಿದ್ದೇನೆ ಎಂದರು.