ಮತ್ತಷ್ಟು ಬರ ಪರಿಹಾರ ಅನುದಾನ ಕೇಳಿದ ಸಿಎಂ ಸಿದ್ದರಾಮಯ್ಯ
ಮತ್ತಷ್ಟು ಬರ ಪರಿಹಾರ ಅನುದಾನಕ್ಕಾಗಿ ಕೋರಿಕೆ ಸಲ್ಲಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ. ಗುರುವಾರ, ಕೇಂದ್ರದ ಹಲವಾರು ಸಚಿವರನ್ನು ಭೇಟಿ ಮಾಡಿ ಬರ ಪರಿಹಾರ ಅನುದಾನಕ್ಕೆ ಮನವಿ.
ಬೆಂಗಳೂರು, ಆಗಸ್ಟ್ 17: ಕರ್ನಾಟಕದಲ್ಲಿ ಸತತವಾಗಿ ನಾಲ್ಕೈದು ವರ್ಷಗಳಿಂದ ಭೀಕರ ಪರಿಸ್ಥಿತಿ ಇರುವುದರಿಂದ ಈಗ ನೀಡಲಾಗಿರುವ ಬರ ಪರಿಹಾರ ಅನುದಾನದಲ್ಲಿ ರಾಜ್ಯಕ್ಕೆ ಮತ್ತಷ್ಟು ಹಣ ನೀಡಬೆೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.
ನವದೆಹಲಿಯಲ್ಲಿ ಗುರುವಾರ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಇತರ ಸಚಿವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ, ರಾಜ್ಯ ಸರ್ಕಾರದ ಪರಿಸ್ಥಿತಿಯನ್ನು ವಿವರಿಸಿದರು. ಇದೇ ವೇಳೆ, ಇತರ ರಾಜ್ಯಗಳಿಗೆ ನೀಡಲಾಗಿರುವ ಬರ ಪರಿಹಾರ ಮೊತ್ತ ಗಣನೀಯವಾಗಿ ಹೆಚ್ಚಳವಾಗಿರುವ ವಿಚಾರವನ್ನೂ ತಿಳಿಸಿದರು.
ಐದು ವರ್ಷಗಳ ಅವಧಿಗೆ ಕೇಂದ್ರದಿಂದ ರಾಜ್ಯ ಸರ್ಕಾರಕ್ಕೆ 1547 ಕೋಟಿ ರು. ನೀಡಲಾಗಿದೆ. ಆದರೆ, ಮಹಾರಾಷ್ಟ್ರಕ್ಕೆ 8195ಕೋಟಿ ರು. ನೀಡಲಾಗಿದ್ದರೆ, ಗುಜರಾತ್ ಗೆ 3894 ಕೋಟಿ ರು., ತಮಿಳುನಾಡಿಗೆ 3751 ಕೋಟಿ ರು., ಆಂಧ್ರ ಪ್ರದೇಶಕ್ಕೆ 2430 ಕೋಟಿ ರು., ರಾಜಸ್ಥಾನಕ್ಕೆ 2153 ಕೋಟಿ ರು. ಅನುದಾನ ನೀಡಲಾಗಿದೆ. ಹೀಗಾಗಿ, ಕರ್ನಾಟಕಕ್ಕೆ ಮತ್ತಷ್ಟು ಹಣ ಕೊಡಬೇಕೆಂದು ಅವರು ಮನವಿ ಮಾಡಿದರು.