ಪತ್ರಿಕೆ ಸೋರಿಕೆ, ಆರೋಪಿಗಳು ಏ.13ರ ತನಕ ಸಿಐಡಿ ವಶಕ್ಕೆ
ಬೆಂಗಳೂರು, ಏಪ್ರಿಲ್ 05 : ರಸಾಯನಶಾಸ್ತ್ರ ಪಶ್ನೆ ಪತ್ರಿಕೆ ಸೋರಿಕೆ ಹಗರಣಕ್ಕೆ ಸಂಬಂಧಿಸಿದಂತೆ ಬಂಧಿತರಾದ ಮೂವರು ಆರೋಪಿಗಳನ್ನು ಸಿಐಡಿ ವಶಕ್ಕೆ ನೀಡಲಾಗಿದೆ. ಮಂಗಳವಾರ ಸಿಐಡಿ ಪೊಲೀಸರು ಆರೋಪಿಗಳನ್ನು ಕೋರ್ಟ್ಗೆ ಹಾಜರುಪಡಿಸಿದ್ದರು.
ಬೆಂಗಳೂರಿನ ನಾಗರಬಾವಿಯ ಆದರ್ಶನಗರದ ಮಂಜುನಾಥ್, ಶ್ರೀರಾಮಪುರದ ಓಬಳರಾಜು, ಹಾಗೂ ಮಲ್ಲೇಶ್ವರದ ಪಶ್ಚಿಮ ಪಾರ್ಕ್ ರಸ್ತೆಯ ರುದ್ರಪ್ಪ ಅವರನ್ನು ಏ.13ರ ತನಕ ಸಿಐಡಿ ಪೊಲೀಸರ ವಶಕ್ಕೆ ಒಪ್ಪಿಸಿ, 1ನೇ ಎಸಿಎಂಎಂ ನ್ಯಾಯಾಲಯ ಆದೇಶ ಹೊರಡಿಸಿದೆ. [ವಿಶೇಷಾಧಿಕಾರಿ ಬಂಧನ, ಸಚಿವರು ಹೇಳಿದ್ದೇನು?]

ಮಂಗಳವಾರ ಸಿಐಡಿ ಪೊಲೀಸರು ಮೂವರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದರು. ಆರೋಪಿಗಳ ವಿಚಾರಣೆ ಬಾಕಿ ಇದೆ. ಆದ್ದರಿಂದ 10 ದಿನಗಳ ಕಾಲ ಸಿಐಡಿ ಪೊಲೀಸರ ವಶಕ್ಕೆ ನೀಡಬೇಕು ಎಂದು ಮನವಿ ಮಾಡಿದರು. ಮನವಿಯನ್ನು ಪುರಸ್ಕರಿಸಿದ ಕೋರ್ಟ್ ಆರೋಪಿಗಳನ್ನು ಏ.13ರ ತನಕ ಸಿಐಡಿ ವಶಕ್ಕೆ ನೀಡಿತು. [ಪತ್ರಿಕೆ ಸೋರಿಕೆ, ಸಚಿವರ ಪಿಎ ಸೇರಿ ಮೂವರ ಬಂಧನ]
ಕಣ್ಣೀರಿಟ್ಟ ಆರೋಪಿಗಳು : ಕೋರ್ಟ್ ಸಿಐಡಿ ವಶಕ್ಕೆ ನೀಡುತ್ತಿದ್ದಂತೆ ಮಂಜುನಾಥ್, ಓಬಳರಾಜು ಹಾಗೂ ರುದ್ರಪ್ಪ ಅವರು ಕೋರ್ಟ್ ಹಾಲ್ನಲ್ಲಿ ಕಣ್ಣೀರಿಟ್ಟರು. ಸಂಬಂಧಿಕರು ಅವರನ್ನು ಸಮಾಧಾನ ಮಾಡಲು ಪ್ರಯತ್ನಿಸಿದರು. [ಲೀಕಾಗಿದ್ದ ಕೆಮಿಸ್ಟ್ರಿ ಪಿಯು ಪ್ರಶ್ನೆ ಪತ್ರಿಕೆ ಬೆಲೆ 10 ಲಕ್ಷ ರು!]
ಆರೋಪಿಯಾದ ಓಬಳರಾಜು ಅವರು ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ್ ಪಾಟೀಲರ ವಿಶೇಷ ಅಧಿಕಾರಿ ಆಗಿದ್ದರೆ, ಮಂಜುನಾಥ್ ವಿಜಯನಗರದ ನ್ಯೂ ಕೇಂಬ್ರಿಜ್ ಪದವಿ ಪೂರ್ವ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾರೆ. ರುದ್ರಪ್ಪ ಅವರು, ಲೋಕೋಪಯೋಗಿ ಇಲಾಖೆಯಲ್ಲಿ ಕಚೇರಿಯ ಅಧೀಕ್ಷಕರಾಗಿದ್ದಾರೆ.
ಪರೀಕ್ಷೆ ರದ್ದಾಗಿತ್ತು : 2016ರ ಮಾರ್ಚ್ 21ರಂದು 1.75 ಲಕ್ಷ ವಿದ್ಯಾರ್ಥಿಗಳು ರಸಾಯನಶಾಸ್ತ್ರ ಪರೀಕ್ಷೆ ಬರೆದಿದ್ದರು. ಪ್ರಶ್ನೆ ಪತ್ರಿಕೆ ಸೋರಿಕೆಯಾದ ಕಾರಣ ಆ ಪರೀಕ್ಷೆಯನ್ನು ರದ್ದುಗೊಳಿಸಲಾಗಿತ್ತು. ಈ ಪ್ರಶ್ನೆ ಪತ್ರಿಕೆ ಸೋರಿಕೆ ಹಗರಣವನ್ನು ಸಿಐಡಿ ತನಿಖೆಗೆ ವಹಿಸಲಾಗಿತ್ತು.
ಮಾರ್ಚ್ 31ರಂದು ಮರುಪರೀಕ್ಷೆ ನಡೆಸುವ ದಿನಾಂಕ ಘೋಷಿಸಲಾಗಿತ್ತು. ಆದರೆ, ಪುನಃ ಪತ್ರಿಕೆ ಸೋರಿಕೆಯಾದ ಕಾರಣ ಪರೀಕ್ಷೆ ರದ್ದುಗೊಳಿಸಲಾಗಿತ್ತು. ಸದ್ಯ, ಏ.12ರಂದು ಮರು ಪರೀಕ್ಷೆ ನಡೆಸುವುದಾಗಿ ದಿನಾಂಕ ಘೋಷಣೆ ಮಾಡಲಾಗಿದೆ.












Click it and Unblock the Notifications