Chamarajangra-Bidar Train: ಈ ಹೊಸ ರೈಲು ಮಾರ್ಗದಿಂದ ರಾಜ್ಯಕ್ಕೆ ಪ್ರಯೋಜನ?
ಬೆಂಗಳೂರು, ಜುಲೈ 09: ಭಾರತೀಯ ರೈಲ್ವೆಯು ಕರ್ನಾಟಕದ ಮಟ್ಟಿಗೆ ಮತ್ತೊಂದು ಮಹತ್ವದ ಯೋಜನೆಗೆ ಕೈ ಹಾಕಿದೆ. ದಕ್ಷಿಣದ ತುದಿಯಿಂದ ಉತ್ತರದ ತುದಿವರೆಗೆ ರೈಲು ಸಂಪರ್ಕ ಕಲ್ಪಿಸುವ ಉದ್ದೇಶ ಹೊಂದಿದೆ. ಇದರಿಂದಾಗಿ ಪ್ರಯೋಜನಗಳೇನು?, ಎಲ್ಲಿಂದ ಎಲ್ಲಿಗೆ ಸಂಪರ್ಕ? ಯಾಕೆ ಈ ಯೋಜನೆ ಎಂಬ ಮಾಹಿತಿ ಇಲ್ಲಿದೆ.
ಸಣ್ಣ ಸಣ್ಣ ಪಟ್ಟಣಗಳನ್ನು ನಗರಗಳಿಗೆ ರೈಲು ಸಾರಿಗೆ ಮೂಲಕ ಸಂಪರ್ಕಿಸುವ ಉದ್ದೇಶ ಭಾರತೀಯ ರೈಲ್ವೆ ಹೊಂದಿದೆ. ಇದರ ಭಾಗವಾಗಿಯೇ 'ಚಾಮರಾಜನಗರ-ಬೀದರ್' ವರೆಗೆ ರಾಜ್ಯದ ದಕ್ಷಿಣದ ತುದಿಯಿಂದ ಉತ್ತರದ ಅದರಲ್ಲೂ ಕಲ್ಯಾಣ ಕರ್ನಾಟಕದ ತುದಿಗೆ ರೈಲು ಸಂಪರ್ಕ ಕಲ್ಪಿಸುವ ಉದ್ದೇಶವಿದೆ.

ಈ ಮಹತ್ವದ ರೈಲು ಮಾರ್ಗದಿಂದಾಗಿ ಕರ್ನಾಟಕ ರಾಜ್ಯಕ್ಕೆ ಗಮನಾರ್ಹ ಪ್ರಯೋಜನಗಳು ಆಗಲಿವೆ. ಈ ಚಾಮರಾಜನಗರವನ್ನು ಉತ್ತರದ ಬೀದರ್ ಜಿಲ್ಲೆಗೆ ಸಂಪರ್ಕಿಸುವ ರೈಲು ಮಾರ್ಗ ಅರಮನೆ ನಗರಿ 'ಮೈಸೂರು, ಹಾಸನ, ಅರಸೀಕೆರೆ, ಬೀರೂರು, ಚಿತ್ರದುರ್ಗ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ಕಲಬುರಗಿ'ಯಂತಹ ಅನೇಕ ಸಣ್ಣ ಪಟ್ಟಣಗಳು ಮತ್ತು ನಗರಗಳ ಮೂಲಕ ಸಾಗಲಿದೆ.
ಈ ರೈಲು ಮಾರ್ಗವು ರಾಜ್ಯದ ಅನೇಕ ಸಣ್ಣ ಪಟ್ಟಣೆ, ಹಳ್ಳಿ, ಜಿಲ್ಲೆಗಳ ವ್ಯಾಪ್ತಿಯ ಜನರಿಗೆ (ಸ್ಥಳೀಯರಿಗೆ) ನೇರ ಸಂಪರ್ಕಕ್ಕೆ ಅನುಕೂಲ ಒದಗಿಸಲಿದೆ. ಕಡಿಮೆ ಬೆಲೆಗೆ ಪ್ರಯಾಣವನ್ನು ಸುಲಭವಾಗಿಸುತ್ತದೆ.
ಕೈಗಾರಿಕಾ ಅಭಿವೃದ್ಧಿಗೆ ಭಾರೀ ಉತ್ತೇಜನ ನಿರೀಕ್ಷೆ
ಕರ್ನಾಟಕ ಸರ್ಕಾರದ ಕೈಗಾರಿಕಾ ನೀತಿ 2020-2025ಯು ಬೀದರ್ನಿಂದ ಶ್ರೀರಂಗಪಟ್ಟಣಕ್ಕೆ ರೈಲ್ವೆ ಕಾರಿಡಾರ್ ನಿರ್ಮಿಸುವ ಯೋಜನೆಗಳನ್ನು ಒಳಗೊಂಡಿದೆ. ಈ ಪ್ರಸ್ತಾವನೆಯು ಕರ್ನಾಟಕದಾದ್ಯಂತ ಕೈಗಾರಿಕಾ ಅಭಿವೃದ್ಧಿಯನ್ನು ಉತ್ತೇಜಿಸುವ ಗುರಿ ಹೊಂದಿದೆ.

ಇನ್ನೂ ಈ ಉದ್ದೇಶಿತ ಚಾಮರಾಜನಗರ-ಬೀದರ್ ರೈಲು ಮಾರ್ಗವು ಈ ಎರಡು ಕಡೆಗಿನ ಸಾರಿಗೆ ಅಭಿವೃದ್ಧಿ ಜೊತೆಗೆ ಆರ್ಥಿಕ ಬೆಳವಣಿಗೆಗೂ ಬೆಂಬಲ ಒದಗಿಸಲಿದೆ. ಕೈಗಾರಿಕೆಗಳ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು 'ಮೈಸೂರು ಇನ್ಫ್ರಾ ಹಬ್' ವರದಿ ಮಾಡಿದೆ.
ಕೈಗಾರಿಕೆ, ಪಟ್ಟಣಗಳ ಅಭಿವೃದ್ಧಿಗೆ ಸಹಕಾರಿ
ಯಾವ ರೈಲು ಮಾರ್ಗವು ಸುದೀರ್ಘ ದೂರವನ್ನು ಹೊಂದಿರುತ್ತದೆಯೋ ಅದರಿಂದ ಸಾಕಷ್ಟು ವಲಯಗಳಿಗೆ ಪ್ರಯೋಜನ ಇರುತ್ತದೆ. ಆಯಾ ಜಿಲ್ಲೆಗಳ ವಿಭಾಗವು ಅನೇಕ ಪಟ್ಟಣಗಳ ಕೈಗಾರಿಕೆಗಳ ಬೆಳವಣಿಗೆ ಉತ್ತಮ ವಾತವರಣ ಕಲ್ಪಿಸುತ್ತದೆ. ಕಡಿಮೆ ಬೆಲೆಗೆ ಸರಕು ಸಾಗಾಟಕ್ಕೆ ಸಹಾಯವಾಗಲಿದೆ.
ಚಾಮರಾಜನಗರದಿಂದ ಬೀದರ್ಗೆ ರೈಲು ಈ ಜಿಲ್ಲೆಗಳ ಒಳನಾಡಿನಲ್ಲಿ ವ್ಯವಹಾರಗಳಿಗೆ ಸಹಾಯ ಮಾಡಲಿದೆ. ಪ್ರಸ್ತಾವಿತ ರೈಲು ಮಾರ್ಗದಲ್ಲಿರುವ ಪಟ್ಟಣಗಳು ಎಂಜಿನಿಯರಿಂಗ್ ಸರಕುಗಳು, ಎಫ್ಎಂಸಿಜಿ, ಜವಳಿ, ಫಾರ್ಮಾಸ್ಯುಟಿಕಲ್ಸ್ ಮತ್ತು ನ್ಯೂಟ್ರಾಸ್ಯುಟಿಕಲ್ಸ್, ಸ್ಟೀಲ್, ಆಟೋ ಮತ್ತು ಸಿಮೆಂಟ್ ಮುಂತಾದ ವಿವಿಧ ವಲಯಗಳಿಗೆ ನೆರವಾಗಲಿದೆ ಎಂದು ರೈಲ್ವೆ ಅಧಿಕಾರಿಗಳು ನಂಬಿದ್ದಾರೆ.
ವಿವಿಧ ಕೈಗಾರಿಕೆಗಳಿಗೆ ಸಾರಿಗೆ ವ್ಯವಸ್ಥೆ ಸಿಕ್ಕಂತಾಗುತ್ತದೆ
ಇತ್ತೀಚಿನ ವರ್ಷಗಳಲ್ಲಿ ಚಾಮರಾಜನಗರ ಅಪಾರ ಕೈಗಾರಿಕಾ ಚಟುವಟಿಕೆಗಳಿಗೆ ಸಾಕ್ಷಿ ಆಗಿದೆ. ಕರ್ನಾಟಕ ಈ ಭಾಗದಲ್ಲಿ ಕೇನ್ಸ್ ಟೆಕ್ನಾಲಜಿ, ESDM ಕಂಪನಿ, ಕಲರ್ಟೋನ್ ಟೆಕ್ಸ್ಟೈಲ್ಸ್, ಎವರೆಸ್ಟ್ ಬಿಲ್ಡ್ಪ್ರೊ, ಗ್ರಾಸಿಮ್ ಪೇಂಟ್ಸ್ ಪ್ಲಾಂಟ್, ಟೆಕ್ಚೆರೆನ್ ಬ್ಯಾಟರಿಗಳು ಇನ್ನಿತರ ಕಂಪನಿಗಳು ಸ್ಥಾಪಿತಗೊಳ್ಳುತ್ತಿವೆ. ಈ ಕೈಗಾರಿಕೆಗಳಿಗೆ ಮೂಲ ಸೌಕರ್ಯ ಪೈಕಿ ಸಾರಿಗೆ ವ್ಯವಸ್ಥೆ ಅತೀ ಮುಖ್ಯವಾಗಿರುತ್ತದೆ. ಇದೆಲ್ಲವು ಬೆಳವಣಿಗೆ ಹೊಂದಿದೆ ಸ್ಥಳೀಯವಾಗಿ ಅಪಾರ ಉದ್ಯೋಗ ಸೃಷ್ಟಿಯಾಗುತ್ತವೆ.
ಸದ್ಯ ಪ್ರಸ್ತಾಪಿತ ಈ ಮಾರ್ಗವು ಬಹುಕೋಟಿ ವೆಚ್ಚದಲ್ಲಿ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ಬರಲಿದೆ. ಎಲ್ಲವು ಅಂದುಕೊಂಡಂತೆ ಆದರೆ ವಿವಿಧ ರೀತಿಯಲ್ಲಿ ಈ ರೈಲು ಮಾರ್ಗದ ಪ್ರಯೋಜನವನ್ನು ಕರ್ನಾಟಕ ಪಡೆದುಕೊಳ್ಳಲಿದೆ ಎನ್ನಬಹುದು.
ಉದ್ದೇಶಿತ ಈ ನೂತನ ಮಾರ್ಗದ ಯೋಜನೆ ಸಾಧ್ಯವಾದಲ್ಲಿ ರಾಜ್ಯದ ಒಂದು ತುದಿಯಿಂದ ಇನ್ನೊಂದು ತುದಿಯ ಜಿಲ್ಲೆಯ ಜನರಿಗೂ ಇದರ ಲಾಭವಾಗಲಿದೆ. ಕೈಗಾರಿಕೆ ಜೊತೆಗೆ ಪ್ರಯಾಣದ ಮಟ್ಟದ, ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ.












Click it and Unblock the Notifications