ಚಾಮರಾಜನಗರದಲ್ಲಿ 1,600 ಎಕರೆಯಲ್ಲಿ ಕೈಗಾರಿಕಾ ಪ್ರದೇಶ
ಚಾಮರಾಜನಗರ, ಜೂ. 11 : ಚಾಮರಾಜನಗರ ಜಿಲ್ಲೆಯಲ್ಲಿ ಸರ್ಕಾರ ಬಂಡವಾಳ ಹೂಡಿಕೆದಾರರ ಸಮಾವೇಶ ನಡೆಸಿ, ಉದ್ಯಮ ಸ್ಥಾಪನೆಗೆ ಕೈಗಾರಿಕೋದ್ಯಮಿಗಳಿಗೆ ಆಹ್ವಾನ ನೀಡಿತ್ತು. ಸದ್ಯ, 1,600 ಎಕರೆಯಲ್ಲಿ ಕೈಗಾರಿಕಾ ಪ್ರದೇಶ ನಿರ್ಮಾಣ ಮಾಡಲು ಮುಂದಾಗಿದೆ.
ನಂಜನಗೂಡು ರಸ್ತೆಯಲ್ಲಿರುವ ಬದನಕುಪ್ಪೆ ಬಳಿ ಜಿಲ್ಲೆಯ ಮೊದಲ ಕೈಗಾರಿಕಾ ಪ್ರದೇಶ ನಿರ್ಮಾಣವಾಗಲಿದೆ. ಜೂನ್ 23ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈಗಾರಿಗಾ ಪದೇಶ ನಿರ್ಮಾಣಕ್ಕೆ ಚಾಲನೆ ನೀಡಲಿದ್ದಾರೆ. [ಚಾಮರಾಜನಗರ-ಬೆಂಗಳೂರು ನಡುವೆ ಹೊಸ ರೈಲು]
ಕರ್ನಾಟಕ ಸರ್ಕಾರ ಹೊರತಂದ 2014-19ರ ಕೈಗಾರಿಕಾ ನೀತಿಯಲ್ಲಿ ಚಾಮರಾಜನಗರ ಸೇರಿದಂತೆ ಹಿಂದುಳಿದ ಜಿಲ್ಲೆಗಳಲ್ಲಿ ಕೈಗಾರಿಕಾ ಪದೇಶ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿತ್ತು. ಇದರ ಅನ್ವಯ ಉದ್ಯಮ ಸ್ಥಾಪನೆ ಮಾಡುವವರಿಗೆ ಭೂಮಿ, ನೀರು, ವಿದ್ಯುತ್ ಸಂಪರ್ಕವನ್ನು ತ್ವರಿತವಾಗಿ ಕಲ್ಪಿಸುವ ಗುರಿ ಹೊಂದಲಾಗಿತ್ತು. [ಚಾಮರಾಜನಗರಕ್ಕೆ 12 ಸಾವಿರ ಕೋಟಿ ಬಂಡವಾಳ]
1,600 ಎಕರೆ ಜಾಗ : ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ಚಾಮರಾಜನಗರದಲ್ಲಿ 1,600 ಎಕರೆ ಪ್ರದೇಶದಲ್ಲಿ ಕೈಗಾರಿಕಾ ಪದೇಶವನ್ನು ಅಭಿವೃದ್ಧಿಪಡಿಸಲಿದೆ. ಈಗಾಗಲೇ 300 ಉದ್ಯಮಿಗಳು ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಆಸಕ್ತಿ ತೋರಿಸಿದ್ದಾರೆ.
ಚಾಮರಾಜನಗರದಲ್ಲಿ ನಿರ್ಮಾಣವಾಗುವ ಕೈಗಾರಿಕಾ ಪದೇಶ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳದಿಂದಲೂ ಉದ್ಯಮಿಗಳನ್ನು ಆಕರ್ಷಿಸಲಿದೆ. ಜಿಲ್ಲೆಯಲ್ಲಿ ಸುಮಾರು 12,000 ಸಾವಿರ ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ಫುಡ್ಪಾರ್ಕ್, ಗಾರ್ಮೆಂಟ್ಸ್, ಆಟೋಮೊಬೈಲ್ ಯೂನಿಟ್, ಸಣ್ಣ ಕೈಗಾರಿಕೆಗಳು ಸೇರಿದಂತೆ ವಿವಿಧ ಉದ್ಯಮಗಳು ಈ ಕೈಗಾರಿಕಾ ಪ್ರದೇಶದಲ್ಲಿ ಸ್ಥಾಪನೆಯಾಗಲಿದೆ.