ನೆರೆ ಪರಿಹಾರ ಕೇಳಿದರೆ ಬರ ಪರಿಹಾರ ಕೊಟ್ಟ ಕೇಂದ್ರ ಸರ್ಕಾರ
ನವದೆಹಲಿ, ಆಗಸ್ಟ್ 20: ಪ್ರವಾಹ ಪರಿಹಾರಕ್ಕೆ ನೆರವು ಕೊಡಿ ಎಂದು ರಾಜ್ಯ ಸರ್ಕಾರ ಕೇಂದ್ರ ಸರ್ಕಾರವನ್ನು ಕೇಳಿದೆ. ಆದರೆ ಕೇಂದ್ರ ಸರ್ಕಾರ ಕೊಟ್ಟಿದ್ದು ಬರ ಪರಿಹಾರವನ್ನು!
ಹೌದು, ಕೇಂದ್ರ ಸರ್ಕಾರವು ರಾಜ್ಯಕ್ಕೆ 1029 ಕೋಟಿ ಬರ ಪರಿಹಾರವನ್ನು ಬಿಡುಗಡೆ ಮಾಡಿದೆ. ರಾಜ್ಯ ಸರ್ಕಾರವು ಬರ ಪರಿಹಾರ ಕೊಡಿ ಎಂದು ಮನವಿ ಮಾಡಿ ಒಂದು ವರ್ಷದ ನಂತರ ಬರ ಪರಿಹಾರ ಬಿಡುಗಡೆ ಮಾಡಲಾಗಿದೆ.
ಕುಮಾರಸ್ವಾಮಿ ಸಿಎಂ ಆಗಿದ್ದ ಅವಧಿಯಲ್ಲಿ ರಾಜ್ಯದಲ್ಲಿ ಹಿಂಗಾರು ಕೊರತೆಯಿಂದ ಉಂಟಾಗಿದ್ದ ಬರ ಪರಿಸ್ಥಿತಿ ನಿರ್ವಹಿಸಲು ಕೇಂದ್ರದಿಂದ ಸಹಾಯ ಕೋರಿತ್ತು. ಕೇಂದ್ರ ಸರ್ಕಾರಕ್ಕೆ ವರದಿಗಳನ್ನು ಸಲ್ಲಿಸಿದ್ದ ರಾಜ್ಯ ಸರ್ಕಾರವು 2034 ಕೋಟಿ ಹಣ ನೆರವು ಕೇಳಿತ್ತು. ಆದರೆ ಒಂದು ವರ್ಷದ ನಂತರ ಕೇಂದ್ರ ಕೊಟ್ಟಿರುವುದು ಕೇವಲ 1029 ಕೋಟಿ ಮಾತ್ರ.

ಗೃಹ ಮಂತ್ರಿ ಅಮಿತ್ ಶಾ ಸೇರಿದಂತೆ ಹಿರಿಯ ಸಚಿವರು ಇತ್ತೀಚೆಗಷ್ಟೆ ಉನ್ನತ ಮಟ್ಟದ ಸಭೆ ನಡೆಸಿ ಪರಿಹಾರ ಬಿಡುಗಡೆ ಮಾಡಿದ್ದಾರೆ. ಫನಿ ಚಂಡಮಾರುತದಿಂದ ತತ್ತರಿಸಿದ ಒಡಿಶಾ ರಾಜ್ಯಕ್ಕೆ 3338 ಕೋಟಿ ರೂಪಾಯಿ ನೀಡುವ ಬಗ್ಗೆಯೂ ಇದೇ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.
ನೆರೆ ಪರಿಹಾರಕ್ಕಾಗಿ ಒತ್ತಾಯ ಮಾಡುತ್ತಿರುವ ಸಮಯದಲ್ಲಿ ಬರ ಪರಿಹಾರ ನೀಡುತ್ತಿರುವುದು ಅದೂ ಕಳೆದ ವರ್ಷದ್ದು, ನಮ್ಮ ವ್ಯವಸ್ಥೆಯ ಹುಳುಕನ್ನು ಬಹಿರಂಗ ಪಡಿಸುತ್ತಿದೆ. ಬರ ಬಂದು ರೈತ ಜೀವಗಳು ಬೆಂದು ವರ್ಷವಾದ ನಂತರ ಕೇಂದ್ರ ಬರಕ್ಕೆ ಪರಿಹಾರ ಬಿಡುಗಡೆ ಮಾಡಿದೆ.
ಮೈತ್ರಿ ಸರ್ಕಾರ ಇದ್ದ ಸಮಯದಲ್ಲಿ ಮೋದಿ ಅವರು ಮೊದಲ ಬಾರಿಗೆ ಪ್ರಧಾನಿ ಆಗಿದ್ದಾಗ ಮಾಡಿದ್ದ ಮನವಿಗೆ ಲೋಕಸಭೆ ಚುನಾವಣೆ ಮುಗಿದು, ಮೋದಿ ಅವರು ಎರಡನೇ ಅವಧಿಗೆ ಪ್ರಧಾನಿ ಆದಮೇಲೆ, ಮೈತ್ರಿ ಸರ್ಕಾರ ಉರುಳಿ ಯಡಿಯೂರಪ್ಪ ಸರ್ಕಾರ ರಚನೆ ಆದಮೇಲೆ ಪರಿಹಾರ ಬಿಡುಗಡೆ ಮಾಗಿದೆ.












Click it and Unblock the Notifications