ಅಂತಿಮ ಹಂತಕ್ಕೆ ಗೌರಿ ಹತ್ಯೆ ಪ್ರಕರಣ, ಮಂಗಳವಾರ ಚಾರ್ಜ್ ಶೀಟ್ ಸಲ್ಲಿಕೆ
ಬೆಂಗಳೂರು, ಮೇ 28: ಗೌರಿ ಲಂಕೇಶ್ ಹತ್ಯೆ ಪ್ರಕರಣ ಸಂಬಂಧ ಸಿಸಿಬಿಯು ನಾಳೆ ನ್ಯಾಯಾಲಯಕ್ಕೆ ಕೊನೆಯ ಚಾರ್ಜ್ ಶೀಟ್ ಸಲ್ಲಿಸಲಿದೆ.
ಸಿಸಿಬಿಯು ಚಾರ್ಜ್ ಶೀಟ್ ತಯಾರಿ ಅಂತಿಮಗೊಳಿಸಿದ್ದು, ಸುಮಾರು 520 ಪುಟಗಳ ಚಾರ್ಜ್ ಶೀಟ್ ಇದಾಗಿದೆ. ಕೊಲೆಯಲ್ಲಿ ಆರೋಪಿ ಹೊಟ್ಟೆ ಮಂಜನ ಪಾತ್ರ ಏನಿತ್ತು ಎಂಬುದರ ಕುರಿತು ಪೂರ್ಣ ವಿವರ ಇದೆ ಎನ್ನಲಾಗಿದೆ.

ಮೂಲಗಳ ಪ್ರಕಾರ ಚಾರ್ಜ್ ಶೀಟ್ನಲ್ಲಿ ಆರೋಪಿ ಹೊಟ್ಟೆ ಮಂಜ ಮತ್ತು ನಾಲ್ವರು ಸೇರಿ ಗೌರಿ ಲಂಕೇಶ್ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಹೇಳಲಾಗಿದೆ. ಹಂತಕರು ಎರಡು ದಿನಗಳ ಕಾಲ RR ನಗರದಲ್ಲಿಯೇ ಇದ್ದು ಹೊಂಚು ಹಾಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
ಹೊಟ್ಟೆ ಮಂಜ ಅಲಿಯಾನ್ ನವೀನ್ ಕುಮಾರ್, ಆರೋಪಿಗಳಿಗೆ ದಾರಿ ಸೂಚಕನಾಗಿದ್ದ ಅಲ್ಲದೆ ಆರೋಪಿಗಳು ತಪ್ಪಿಸಿಕೊಳ್ಳಲು ಈತನೇ ಸಹಾಯ ಮಾಡಿದ್ದ ಎನ್ನಲಾಗಿದ್ದು, ಶಸ್ತ್ರಾಸ್ತ್ರಗಳು ಮಹಾರಾಷ್ಟ್ರದಿಂದ ಪೂರೈಕೆ ಆಗಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಅವರನ್ನು ಅವರ ನಿವಾಸದ ಎದುರೇ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಬೈಕಿನಲ್ಲಿ ಬಂದ ಇಬ್ಬರು ಗುಂಡು ಹಾರಿಸಿ ಗೌರಿಯನ್ನು ಕೊಂದಿದ್ದರು.
ಸಿಸಿಬಿ ಮತ್ತು ಎಸ್ಐಟಿಯು ಗೌರಿ ಲಂಕೇಶ್ ಹತ್ಯೆಯ ತನಿಖೆ ಮಾಡಿತ್ತು. ಕೆಲವೇ ತಿಂಗಳ ಹಿಂದೆ ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ ಎಂಬುವನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ ನಂತರ ಆತನಿಗೂ ಗೌರಿ ಹಂತಕರಿಗೂ ಸಂಬಂಧ ಇರುವ ವಿಷಯ ಹೊರ ಬಂದಿತ್ತು.












Click it and Unblock the Notifications